Saturday, May 14, 2022

ಅಲೆಗಳು ಶಾಂತವಾಗುವುದಿಲ್ಲ....

ಅವರ ನೆನಪಿಗೆಂದು ನಾವೆಲ್ಲರೂ ಸೇರುವ ಮೊದಲ ದಿನವೇ ಅನಿರೀಕ್ಷಿತ ಮಳೆ ಬಂದು ನೆಲ ತೇವಗೊಂಡಿತ್ತು, ಅಲ್ಲಿ ನೆರೆದ ಎಲ್ಲರ ಮನಸ್ಸಿನಂತೆ. ಹೌದು, ವಿಠ್ಠಲ ಭಂಡಾರಿ ಎಂಬ ತಾಯ ಮಮತೆಯ ಜೀವ ಸರಿದುಹೋಗಿ ವರ್ಷವೇ ಆಗಿಹೋಯಿತು. ವಿಶೇಷ ಕರೆಗಳಿಲ್ಲದೆಯೂ ನಾಡಿನ ಮೂಲೆಮೂಲೆಗಳಿಂದ ಗೆಳೆಯರು, ಹಿತೈಷಿಗಳು, ವಿದ್ಯಾರ್ಥಿಗಳು, ಚಳುವಳಿಯ ಜತೆಗಾರರು ಕೆರೆಕೋಣವೆಂಬ ಅವರ ಹಳ್ಳಿಯನ್ನು ಹುಡುಕಿಕೊಂಡು ಬಂದರು. ಅಮೂಲ್ಯವಾದ ಭಿತ್ತವೊಂದನ್ನು ಬಿತ್ತಿರುವೆವೋ ಎಂಬಷ್ಟು ಅಕ್ಕರೆಯಿಂದ ಅವರನ್ನು ಮಲಗಿಸಿದ ತಾವಿನ ಸುತ್ತ ನೆರೆದರು. ಪುಟ್ಟ ಮಗುವೊಂದು ಬಿಕ್ಕಳಿಸಿ ಅತ್ತದ್ದೇ ನೆಪವಾಗಿ ಎಲ್ಲರ ದುಃಖದ ಕಟ್ಟೆಯೊಡೆಯಿತು. ನೆರೆದವರೆಲ್ಲ ತಡೆತಡೆದು ಉಸಿರು ಬಿಡುತ್ತಿದ್ದುದು ನಾಲ್ಕಾರು ಮೆಟ್ಟಿಲೇರಿದ ಆಯಾಸಕ್ಕಂತೂ ಇರಲಿಕ್ಕಿಲ್ಲ. ಅಲ್ಲಿ ಚಿರನಿದ್ದೆಯಲಿ ಮಲಗಿದ ಜೀವವೇ ಹಾಗಿತ್ತು. ಸದಾ ಮುಖದ ತುಂಬ ನಗು, ಕನಸು ತುಂಬಿದ ಕಂಗಳು, ಮಮತೆಭರಿತ ನೋಟ, ಆರಡಿಯ ಸುರಸುಂದರಾಂಗ ಆಳು ಅವರು. ಕೊರೊನಾದ ಅಲೆಗೆ ಬಲಿಯಾದಾಗ ಕುಟುಂಬದವರ ಹೆಗಲು ನೇವರಿಸುವ ಅವಕಾಶವೂ ಇರಲಿಲ್ಲ. ಹಾಗಾಗಿ ಒದ್ದೆ ಮನಸ್ಸಿನೊಂದಿಗೆ ಎಲ್ಲರೂ ತೇವಗೊಂಡ ಅವರ ಸಮಾಧಿಯ ಬಳಿ ಸೇರಿದ್ದರು. ಚಿಗುರೊಡೆದು ನಿಂತ ಪಾರಿಜಾತ ಇದ್ಯಾವುದರ ಗೊಡವೆಯಿಲ್ಲದೇ ತಲೆಯಲ್ಲಾಡಿಸುತ್ತಿತ್ತು.

ನಾನು ಎಷ್ಟೊಂದು ಜನರ ವಿದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವೆ. ಆದರೆ ಈ ರೀತಿಯ ಆಪ್ತ, ಆರ್ದೃ ಕಾರ್ಯಕ್ರಮವನ್ನು ನೋಡಿಲ್ಲ. ಬೆಳಗಿನಿಂದ ಎಲ್ಲರ ಮಾತುಗಳನ್ನು ಕೇಳಿ ತೇವಗೊಂಡಿರುವೆ. ಓರ್ವ ಅಧ್ಯಾಪಕನಾಗಿ ಇಷ್ಟೆಲ್ಲವನ್ನೂ ಮಾಡಬಹುದೆನ್ನುವ ವಿಚಾರ ಅಧ್ಯಾಪಕನಾದ ನನ್ನನ್ನೂ ನಾಚುವಂತೆ ಮಾಡುತ್ತಿದ್ದೆ. ನನ್ನೊಂದಿಗೆ ನಾಡು, ಕಾಡು ಎಂದು ಸುತ್ತುತ್ತಿದ್ದ ಈ ಹುಡುಗ ಹೀಗೆಲ್ಲಾ ಇದ್ದನೆ? ಎಂದು ಕಣ್ಣರಳಿಸುತ್ತಲೇ ಕಣ್ಣೊರೆಸಿಕೊಂಡರು ರಹಮತ್ ತರಿಕೆರೆಯವರು. ಗಾಂಧಿಯಂತವರನ್ನು ಮನೆಮನೆಗೆ ಕೊಂಡೊಯ್ದು ರಾಷ್ಟ್ರೀಯ ನಾಯಕರನ್ನಾಗಿ ರೂಪಿಸಿದವರು ಸಾಮಾಜಿಕ ಕಾರ್ಯಕರ್ತರು. ಸಣ್ಣ ಗುಂಪುಗಳಲ್ಲಿ ಮೂಡಿಸುವ ಅರಿವು ಮಾತ್ರವೇ ದೊಡ್ಡ ಬದಲಾವಣೆಯನ್ನು ತರಬಲ್ಲುದು. ಅಂಥದೊಂದು ಕಾರ್ಯವನ್ನು ದಣಿವರಿಯದೇ ಮಾಡುತ್ತಿದ್ದವರು ವಿಠ್ಠಲ ಎಂದವರು ರಾಜೇಂದ್ರ ಚೆನ್ನಿಯವರು. ನಿಂತ ನೆಲದಲ್ಲಿ ಬೇರುಬಿಟ್ಟು ತನ್ನ ಸುತ್ತಲಿನವರನ್ನು ಪ್ರಭಾವಿಸುತ್ತಲೇ ಜಗದ ಆಗುಹೋಗುಗಳಿಗೆ ಸ್ಪಂದಿಸುವ ಕೆಲವೇ ಮಾದರಿಗಳು ನಮ್ಮಲ್ಲಿವೆ. ಆರ್. ವಿ. ಯವರಿಂದ ಆರಂಭಗೊಂಡು, ವಿಠಲನಿಂದ ಮುಂದುವರೆದ ಈ ವಿಶೇಷ ಮಾದರಿಯನ್ನು 'ಕೆರೆಕೋಣ ಮಾದರಿ' ಎಂದು ಹೆಸರಿಸಿದವರು ವಸಂತರಾಜ್ ಅವರು. ಆರ್. ವಿ. ಯವರೊಂದಿಗೆ ಗಹನವಾದ ವಿಷಯಗಳನ್ನು ಚರ್ಚಿಸುತ್ತಿದ್ದಾಗ ಬದಿಯಲ್ಲಿ ನಿಂತು ಕೇಳುತ್ತಿದ್ದ ಈ ವಿಠ್ಠಲನೆಂಬ ಹುಡುಗ ಮುಂದೆ ಸಾಮಾಜಿಕ ಕಾರ್ಯಕರ್ತನಾಗಿ ಬೆಳೆದನಲ್ಲದೇ ಯಾವುದೇ ವಿದ್ಯಮಾನಗಳಿಗೂ ಬೈಸೈಡರ್ ಆಗಲು ಸಂಪೂರ್ಣ ನಿರಾಕರಿಸಿ ಬೆರಗು ಹುಟ್ಟಿಸಿದ. ಜಗದ ಆಗುಹೋಗುಗಳಿಗೆ ಆ ಗಳಿಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದ ವಿಠ್ಠಲ ತನ್ನ ಸಣ್ಣ ತುಂಟತನದಿಂದ ಎಂಥವರನ್ನೂ ನಿಭಾಯಿಸುತ್ತಿದ್ದ ಎಂದು ನೆನಪಿಸಿಕೊಂಡವರು ಡಾ. ಎಂ. ಜಿ. ಹೆಗಡೆಯವರು. 

ಎಷ್ಟೊಂದು ಅಕ್ಕರೆಯ, ಪ್ರೀತಿಯ, ಹೆಮ್ಮೆಯ ನುಡಿಗಳು ಅವರ ಬಗ್ಗೆ. ಎಲ್ಲವನ್ನೂ ಸೇರಿಸಿ ಪ್ರೀತಿ ಪದಗಳ ಸಹಯಾನಿ ವಿಠ್ಠಲ ಎಂಬ ಪುಸ್ತಕ ರೂಪುಗೊಂಡ ಬಗೆಯನ್ನು ಬಿಚ್ಚಿಟ್ಟರು ಸಂಪಾದಕ ಮಂಡಲಿಯ ಮೀನಾಕ್ಷಿ ಬಾಳಿಯವರು. ಸೇರಿದ ಎಲ್ಲರದ್ದೂ ಒಂದೇ ಮಾತು, ವಿಠ್ಠಲ ನನ್ನನ್ನು ಮಾತ್ರವೇ ಅಷ್ಟೊಂದು ಹಚ್ಚಿಕೊಂಡಿದ್ದ ಎಂದೇ ನಾನು ತಿಳಿದಿದ್ದೆ ಎಂದು. ತನ್ನ ಸ್ನೇಹವಲಯಕ್ಕೆ ಬಂದವರನ್ನೆಲ್ಲಾ ಚುಂಬಕದಂತೆ ಅಂಟಿಕೊಳ್ಳುವ ಗುಣ ಅವರಿಗೆ ಜನ್ಮದಾತವೇನೊ? ಎಷ್ಟಾದರೂ ಪ್ರೀತಿಯ ಕಾಳನು ಹಂಚ ಬಯಸುವೆವು, ಜಾಗ ಕೊಡುವಿರೇನು? ಎಂದ ತಂದೆಯ ಮಗನಲ್ಲವೆ ಅವರು? ಬದುಕಿನ ಅರ್ಧ ದಾರಿಯನ್ನಷ್ಟೇ ನಡೆದಿದ್ದರು, ಎಲ್ಲ ಕೆಲಸಗಳೂ ಅರ್ಧದಲ್ಲೇ ನಿಂತಿದ್ದವು. ಇದ್ದಷ್ಟನ್ನು ಒಟ್ಟುಗೂಡಿಸಿ, ಒಪ್ಪವಾಗಿಸಿ ಮತ್ತೆರಡು ಪುಸ್ತಕಗಳನ್ನು ತಂದೇಬಿಟ್ಡರು ಸಂಗಾತಿ ಯಮುನಾ. ಇನ್ನೂ ಎಷ್ಟೋ ಪುಸ್ತಕಗಳಿಗಾಗುವಷ್ಟು ಚರಮಗೀತೆಗಳು ಬರುತ್ತಲೇ ಇವೆಯೆಂದು ಹನಿಗಣ್ಣಾದರು ಮನೆಯವರು. ಅವರೇ ಬರೆದ ಅಣ್ಣನ ನೆನಪುಗಳನ್ನು ಮತ್ತೆ, ಮತ್ತೆ ಮೆಲುಕಾಡಿದರು. ಹೌದು, ಇದ್ದಾಗ ಇರವೇ ಅರಿವಾಗದಂತೆ ತೆರೆಮರೆಯಲ್ಲಿಯೇ ಕೆಲಸ ಮಾಡಿದ ಭಂಡಾರಿಯವರ ಅಗಲಿಕೆ ಸೃಷ್ಟಿಸಿದ ಶೂನ್ಯ ಬಹಳ ವಿಸ್ತಾರವಾದದ್ದು. ಅವರನ್ನು ಮನೆಯವರಿಗೆ ಮಾತ್ರ ಬಿಡದೇ ಬೇರೆ ಬೇರೆ ಪ್ರದೇಶ ಮತ್ತು ಸಂಘಟನೆಯವರು ಅಡಾಪ್ಟ್ ಮಾಡಿಕೊಂಡು ಅವರ ಹೆಸರಿನಲ್ಲಿ ಮತ್ತೆ, ಮತ್ತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ಇದ್ದಾರೆ. ವಿಠ್ಠಲ್ ಇದ್ದುದೇ ಹಾಗೆ, ಸ್ವಂತದ ಮನೆಯನ್ನು ಎಲ್ಲರ ಮನೆಯಾಗಿಸುವ ಪಯಣ ಅವರದ್ದು. ಆರ್. ವಿ.ಯವರ ಮನೆ ಮಹಾಮನೆಯಾದ ಕಥೆಯಿದು. ಕಲ್ಯಾಣದೆಡೆಗಿನ ಪಯಣ ನನ್ನ ಗೆಳೆಯನದು ಎಂದವರು ಡಾ. ಶ್ರೀಪಾದ ಭಟ್.

ವೈಚಾರಿಕತೆಯನ್ನು ಪ್ರತಿಪಾದಿಸುವ ಮೇಸ್ಟ್ರುಗಳ ಬಳಿ ವಿದ್ಯಾರ್ಥಿಗಳೇ ಸುಳಿಯದ ಮತ್ತು ವಿದ್ಯಾರ್ಥಿಗಳ ಧಾಳಿಯಿಂದ ಅವರನ್ನು ಪಾರುಮಾಡಲು ಚಳುವಳಿಕಾರರೇ ಧಾವಿಸಬೇಕಾದ ಕಾಲದಲ್ಲಿ ತನ್ನ ಸುತ್ತ ಸದಾ ವಿದ್ಯಾರ್ಥಿಗಳ ದಂಡನ್ನೇ ಇಟ್ಟುಕೊಳ್ಳುತ್ತಿದ್ದ ವಿಠ್ಠಲ ಈ ಕಾಲದ ಅಚ್ಛರಿ ಎಂದವರು ಗೆಳೆಯ ಮುನೀರ್ ಕಾಟಿಪಳ್ಳ. ಸರ್ ಗೆ ನಾವು ವಿದ್ಯಾರ್ಥಿಗಳು ಮಾತ್ರವಲ್ಲ, ಮಕ್ಕಳೂ ಹೌದು. ಅವರ ಪ್ರೀತಿ ಮರೆಯಲಾಗದ್ದು ಎಂದು ದನಿಗೂಡಿಸಿದವರು ಚಿಗುರು ಬಳಗದ ಅವಿನಾಶ್. ರಂಗಕರ್ಮಿಗಳು, ಚಳುವಳಿಯ ಸಂಗಾತಿಗಳು, ಪ್ರಾದ್ಯಾಪಕ ಮಿತ್ರರು, ಸಮುದಾಯದ ಗೆಳೆಯ, ಗೆಳತಿಯರು ಎಲ್ಲರದ್ದೂ ಒಂದೇ ಮಾತು. ವಿಠ್ಠಲ ದಣಿವರಿಯದ ಸಂಘಟಕ, ಎಂಥಹ ಕಠಿಣ ಸನ್ನಿವೇಶದಲ್ಲೂ ಸಹನೆಯನ್ನು ಕಳಕೊಳ್ಳದ ಸಹಿಷ್ಣು, ಚಂದದ ವೇದಿಕೆಯನ್ನು ಸ್ನೇಹಿತರಿಗೆ ಬಿಟ್ಟು, ಚಿತ್ರ ಸೆರೆಹಿಡಿವ ಕುತೂಹಲದ ಕಣ್ಣಿನ ಮಗು.

ಅಂದೂ ತೋಟದ ತುಂಬಾ ಅರಳಿದ ಹೂವುಗಳು, ಮೈತುಂಬಾ ಹಣ್ಣೇರಿಸಿಕೊಂಡು ಕೆಂಪಾದ ನಕ್ಷತ್ರ ಹಣ್ಣಿನ ಮರ, ಅಲಂಕೃತಗೊಂಡ ಸಭಾಮಂಟಪ, ಸ್ವಾಗತ ಕೋರುವ ಪುಸ್ತಕದಂಗಡಿ..... ಎಲ್ಲವೂ ವರ್ಷದಂತೆಯೆ ಇದ್ದವು. ಆದರೆ ಅಲ್ಲಿಂದಿಲ್ಲಿಗೆ ಲುಂಗಿಯುಟ್ಟು ದಾಪುಗಾಲಿನಲ್ಲಿ ಓಡುವ, ಚಹಾ, ಊಟ, ವೇದಿಕೆ, ಹಾಡು, ಸ್ವಾಗತ ಎಂದು ಎಲ್ಲೆಂದರಲ್ಲಿ ಪ್ರತ್ಯಕ್ಷವಾಗುವ, ಇಷ್ಟೆಲ್ಲದರ ನಡುವೆಯೂ ಅಲ್ಲಿದ್ದ ಪುಟ್ಟ ಮಕ್ಕಳೊಡನೆ ಚೇಷ್ಟೆಯಾಡುವ, ಬಾಚದ ಕೂದಲನ್ನು ಒಂದಿಷ್ಟು ಸವರುವ ತನ್ನ ಸಂಗಾತಿಯೆಡೆಗೊಂದು ಪ್ರೇಮದ ನೋಟ ಬೀರುವ ಅವರ ಅನುಪಸ್ಥಿತಿ ಎಲ್ಲರ ಒಡಲನ್ನು ಬಿಸಿಯಾಗಿಸಿತ್ತು. ಎಲ್ಲವೂ ಒಪ್ಪ ಓರಣವಾಗಿ ನಡೆಯಿತು. ಊಟ, ತಿಂಡಿ, ಭಾಷಣ, ಸನ್ಮಾನ, ಹಾಡು...... ಎಲ್ಲದಕ್ಕೂ ಪುಟವಿಟ್ಟಂತೆ ದಿನದ ಕೊನೆಯಲ್ಲೊಂದು ತಾಳಮದ್ದಲೆ. ಮನೆಯವರು, ಸ್ನೇಹಿತರು ಅವರ ನೆನಪಿಗೆಂದು ತಾವೇ ಕುಳಿತು ಅರ್ಥ ಹೇಳಿದರು. ಚಿಂತನದ ಕಲಾವಿದರು ವಾರವೊಂದರಲ್ಲಿ ಚಂದದ ನಾಟಕ ಕಟ್ಟಿ ಆಡಿದರು. ಎಲ್ಲರಿಗೂ ಅವರು ತಮ್ಮೊಳಗಿದ್ದಾರೆಂದು ಸಾಬೀತುಪಡಿಸಿಕೊಳ್ಳುವ ತುಡಿತ...

ಟೆರಿ ಪ್ರೆಚೆಟ್ ಹೇಳುತ್ತಾರೆ, ವ್ಯಕ್ತಿಯೊಬ್ಬ ಹುಟ್ಟುಹಾಕಿದ ಅಲೆಗಳು ಶಾಂತವಾಗುವವರೆಗೂ ಅವನಿಗೆ ಸಾವಿಲ್ಲ. ನಾವು ಹೇಳುತ್ತೇವೆ, ಸರ್, ನೀವು ನಮ್ಮೊಳಗೆ ಹುಟ್ಟುಹಾಕಿದ ಅಲೆಗಳು ಎಂದಿಗೂ ಶಾಂತವಾಗುವುದಿಲ್ಲ.

ಸಹಯಾನದ ಅಂಗಳದಲ್ಲಿ ಆಡಿ, ಬೆಳೆದ ಕಿಶೋರನೊಬ್ಬನ ಎದೆಯಾಳದ ಮಾತು ಇದು. ನಮ್ಮೆಲ್ಲರದೂ ಹೌದು....ಅವರೊಂದು ಪ್ರೀತಿಯ ಕೊಳ. ಆವಿಯಾಗುತ್ತಲೇ ಇರುತ್ತಾರೆ, ಮತ್ತೆ ಮಳೆಯಾಗಿ ಸುರಿಯುತ್ತಾರೆ. ತೇವಗೊಳ್ಳುತ್ತೇವೆ ಪ್ರತಿ ಮಳೆಗೂ ನಾವು..

                            -ಸುಧಾ ಆಡುಕಳ

                                   -

                 

Sunday, March 27, 2022

ಕವಿತೆ

ಮಕ್ಕಳ ರವೀಂದ್ರ ನಾಟಕಕ್ಕಾಗಿ ಗುರುದೇವ ರವೀಂದ್ರರ
"ಶೂ ಕಂಡುಹಿಡಿದ ಕಥೆ" ಎಂಬ ಕವನವನ್ನು ಅಳವಡಿಸಿಕೊಂಡಿದ್ದೆವು. ಅದು ಅಲ್ಲಿ ಮಕ್ಕಳಿಗೆ ಹಿತವಾಗುವ ಹಾಸ್ಯದ ಶೈಲಿಯಲ್ಲಿ ದೃಶ್ಯೀಕರಣಗೊಂಡಿತ್ತು.  ಅದನ್ನು ಯಥಾವತ್ತಾಗಿ ಕವನವಾಗಿಸಲು ಮಾಡಿದ ವಿನಮ್ರ ಪ್ರಯತ್ನವಿದು. ಸುಖಾಂತ ಚೌಧರಿಯವರ ಇಂಗ್ಲಿಷ್ ಅನುವಾದದಿಂದ ಆಯ್ದುಕೊಂಡ ಸಾಲುಗಳು.

ಶೂ ಕಂಡುಹಿಡಿದ ಕಥೆ

"ಇದೇನಿದು ಗೋಬು" ಅಬ್ಬರಿಸಿದ ರಾಜ ಹೋಬು
"ನನ್ನ ಪಾದಗಳ್ಯಾಕೆ ಧೂಳಾಗಿವೆ?
ನಿನ್ನೆಯಿಂದ ಅದನ್ನೇ ಯೋಚಿಸಿದೆ
ಸಂಬಳ ಬೇಕು ನಿಮಗೆ ರಾಶಿ, ರಾಶಿ
ಕಾಳಜಿ ಬೇಡವೇನು ರಾಜನಿಗಾಗಿ?
ನನ್ನ ಭೂಮಿಯ ಧೂಳೇ ನನ್ನ ಕಾಲಿಗೆ ತಾಗಿ
ನಿದ್ದೆಗೆಡಿಸಿದೆ ನೋಡಿ ರಾತ್ರಿಯಿಡೀ
ರಾಜನ ಆಜ್ಞೆಯಿದು ಕೇಳಿ, ಪರಿಹಾರ ಮಾಡಿ
ಇಲ್ಲವಾದರೆ ಪ್ರಾಣ ಉಳಿಯಲಾರದು ನೋಡಿ'

ಗೋಬುವಿನ ಗಂಟಲಾರಿತು,
ಮೈಯಿಡೀ ಬೆವರಿತು
ಪಂಡಿತರ ಮುಖ ಬಾಡಿತು
ಪ್ರಮುಖರ ನಿದ್ದೆ ಹಾರಿತು
ಅಡುಗೆಮನೆಯ ಬೆಂಕಿ ಆರಿತು
ಹಸಿವೆ ಇಲ್ಲದಾಯಿತು
ಒದ್ದೆಯಾದ ಬಿಳಿಯ ಗಡ್ಡ
ದುಃಖಬೆರೆತ ಕಣ್ಣ ನೋಟ
ಗೋಬು ಕೊನೆಗೂ ಹೇಳಿದ
" ಧೂಳು ನಿಮ್ಮ ಪಾದದಲ್ಲಿ ಇರಲಿ ದೊರೆ
ಪಾದಧೂಳಿ ಕರುಣಿಸಿ ನಮ್ಮನೆಲ್ಲಾ ಪೊರೆ"

ಗೋಬುವಿನ ಮಾತಿಗೆ ದೊರೆ ಭಾವಪರವಶ
ಮರುಕ್ಷಣವೇ ವಾಸ್ತವಕೆ ಇಳಿದು ಮತ್ತೆ ಹೇಳಿದ
"ಪಾದಕೆಲ್ಲ ಧೂಳು ತಾಗಿ ತುರಿಕೆ ಹತ್ತಿದೆ
ಮೊದಲು ಈ ಧೂಳಿನಿಂದ ಮುಕ್ತಿ ಬೇಕಿದೆ
ಧೂಳು ಮೊದಲು ನಿವಾರಿಸಿ, ಮತ್ತೆ ಬೇರೆ ಯೋಚಿಸಿ
ಎಲ್ಲಿ ಹೋದರು ನಮ್ಮ ಆಸ್ಥಾನ ವಿಜ್ಞಾನಿಗಳು?
ಹೆಸರಿಗಿಂತ ಉದ್ದ, ಉದ್ದ ಡಿಗ್ರೀ ಪಡೆದವರು
ಧೂಳಿನಿಂದ ಮುಕ್ತಿ ದೊರೆತರೇ ಸರಿ
ಇಲ್ಲವಾದರೆ ನಿಮ್ಮ ಸಂಬಳಕ್ಕೆ ಕತ್ತರಿ"

ಜ್ಣಾನಿ ವಿಜ್ಞಾನಿಗಳ ಸಮ್ಮೇಳನ
ಕನ್ನಡಕಧಾರಿಗಳ ವಿಚಾರ ಮಂಥನ
ಹತ್ತೊಂಭತ್ತು ನಶ್ಯ ಡಬ್ನ ಖಾಲಿಯಾಯಿತು
ಬರೆಯಲಿಟ್ಟ ಹಾಳೆ ಖಾಲಿಯುಳಿಯಿತು
ಚರ್ಚಿಸಿ, ಯೋಚಿಸಿ, ವಿಚಾರಿಸಿ....
ಬರೆದರೊಂದು ವಾಕ್ಯವ
"ಧೂಳಿಲ್ಲದಿದ್ದರೆ ಬೆಳೆಯೆಲ್ಲಿ?"
ರಾಜನದನು ಓದಿದ, ಕೋಪದಿಂದ ಕಿರುಚಿದ
"ಎಲ್ಲಿ ನಮ್ಮ ಪಂಡಿತರು? ಸರ್ವ ಶಾಸ್ತ್ರ ಕೋವಿದರು?"

ಪಂಡಿತರು ನಡುಗಿದರು, ಕಸಬರಿಗೆ ತರಿಸಿದರು
ಒಂದೆ , ಎರಡೆ, ಮೂರೆ? ಹದಿನೇಳುವರೆ ಸಾವಿರ
ಇಡಿಯ ರಾಕ್ಯ ಗುಡಿಸಿದರು, ಧೂಳ ಮೋಡ ಎಬ್ಬಿಸಿದರು
ಸೂರ್ಯ ಮೋಡದಲ್ಲಿ ಕರಗಿ, ಕಣ್ಣು ಬಿಡದೆ ಜನರು ಹೆದರಿ
ರಾಜನನೆಯವರೆಗೂ ಧೂಳು ತುಂಬಿತು
ಕೆಮ್ಮಿನ ಶಬ್ದ ಇಡಿಯ ನಾಡ ತುಂಬಿತು
ರಾಜ ಕೆಮ್ಮತ್ತ ನುಡಿದ, "ಮೂರ್ಖ ಜನಗಳೆ,
ಧೂಳು ತೊಲಗಿಸಿರೆಂದರೆ ಮತ್ತಿಷ್ಟು ತುಂಬಿಸಿದಿರಿ
ತಕ್ಷಣವೇ ಧೂಳು ಹೋಗಲಿಲ್ಲವೆಂದರೆ
ನಿಮ್ಮ ತಲೆಯು ಇದ್ದ ಜಾಗದಲ್ಲಿರದು ಖರೆ"

ಇಪ್ಪತ್ತೊಂದು ಲಕ್ಷ ಜನರ ಕರೆದು ತಂದರು
ಹಳ್ಳ, ಕೊಳ್ಳ, ನದಿಗಳಿಂದ ನೀರು ತಂದರು
ಕೆರೆ, ಬಾವಿ, ಸರೋವರಗಳಿಂದ ನೀರು ತಂದರು
ಬೀದಿ, ಬೀದಿಗಳನ್ನೆಲ್ಲ ತಿಕ್ಕಿ ತೊಳೆದರು
ನೀರ ಜೀವಿಗಳೆಲ್ಲ ತೆವಳತೊಡಗಿದವು
ಊರ ಜನರೆಲ್ಲ ಈಜತೊಡಗಿದರು
ಅಂಗಡಿ ಮುಂಗಟ್ಟುಗಳು ತೇಲಿ ಹೋದವು
ಅರಮನೆಯ ಅಂಗಳದಿ ನೆರೆಯು ಬಂದಿತು
ರಾಜ ಕ್ರೋಧದಿಂದ ಹೊರಗೆ ಬಂದು ಕೂಗಿದ
"ಧೂಳು ತೆಗೆಯಿರೆಂದರೆ ಕೆಸರು ತುಂಬಿಸಿದಿರಿ
ಸಮಸ್ಯೆ ಬಗೆಹರಿಯದಿರೆ ಶಿರವ ಕೊಡಲು ಸಿದ್ಧರಿರಿ"

ಎಲ್ಲಾ ಹತಾಶೆಯಲ್ಲಿ ಮತ್ತೆ ಸೇರಿದರು
ಜೀವವುಳಿಸಿಕೊಳ್ಳಲು ಉಪಾಯ ಯೋಚಿಸಿದರು
ನೆಲಕೆ ಹೊದಿಕೆ ಹೊದಿಸಿಬಿಡುವುದೊಂದೆ ದಾರಿ ಉಳಿದಿದೆ
ಚಮ್ಮಾರನೊಬ್ಬನ ಕೆಲಸದಲ್ಲಿ ನಮ್ಮ ಜೀವ ಅಡಗಿದೆ
ಹುಡುಕಲೆಂದು ಹೊರಟರು ಚಮ್ಮಾರರ ಬೀದಿಗೆ
ಎಲ್ಲ ಓಡಿಬಿಟ್ಟಿದ್ದರು ಇವರು ಬರುವ ಸುದ್ದಿಗೆ
ನಡೆಯಲಾರದ ಮುದಿಯ ಚಮ್ಮಾರರ ನಾಯಕ
ಕುಳಿತಲ್ಲೇ ಕೇಳಿದ, "ಏನು ನಿಮ್ಮ ಮಾಯಕ?"
ಹೊತ್ತು ತಂದರವನನು ರಾಜನಾಸ್ಥಾನಕೆ
ಇವನೆ ಸರಿ ಹೊದಿಸಲು ಚರ್ಮ ಇಡಿಯ ರಾಜ್ಯಕೆ
ರಾಜ ಅಜ್ಞಾಪಿಸಲು ಅಣಿಯಾಗಿ ನಿಂತ
ಚಮ್ಮಾರ ಕೈ ಮುಗಿದು ನಿಡಿದ ಮಾತ
"ಇಡಿಯ ರಾಜ್ಯಕ್ಯಾಕೆ ಹೊದಿಕೆ ನಿಮ್ಮ ಕಾಲ ಮುಚ್ಚಿಕೊಳ್ಳಿ"
ಮಂತ್ರಿ ಮುನಿದು ನುಡಿದ," ನಿನ್ನ ಬಾಯ ಮುಚ್ಚಿಕೋ.
ರಾಜ ತನ್ನ ಕಾಲ ಮುಚ್ಚಿಕೊಳ್ಳಬೇಕೆ ಮೂರ್ಖನೆ?"
ರಾಜ ತಡೆದ ಗೋಬುವನ್ನು ತನ್ನ ಕಾಲು ನೀಡಿದ
"ನೀನೆ ಮುಚ್ಚು ನೋಡಿಬಿಡುವ" ಎಂದು ಆಜ್ಞೆ ನೀಡಿದ
ಹತಿಯಾರ ತೆಗೆದ ಚಮ್ಮಾರ ಪಾದರಕ್ಷೆಯೊಂದ ಮಾಡಿದ
ಧರಿಸಿ ನಡೆದ ರಾಜ ಅವಗೆ ಉಡುಗೊರೆಯ ನೀಡಿದ
"ನಿಮ್ಮದೆಲ್ಲ ಎಂಥ ಜ್ಞಾನ? ನೋಡಿ ಈ ಜ್ಞಾನಿಯ
ಜೀವನದ ಜ್ಞಾನ ಅರೆದು ಕುಡಿದ ನಿಜ ಅನುಭಾವಿಯ"
ಇಡಿಯ ರಾಜ ಗಡಣ ತನ್ನ ತಲೆಯ ತಗ್ಗಿಸಿತು
ಚಮ್ಮಾರನಿಂದ ಒಂದು ಇಡಿಯ ರಾಜ್ಯ ಉಳಿಯಿತು

ಮಹಾವಲಸೆ

ಕಪ್ಪುರಸ್ತೆಯ ಮೇಲೆ ಬಿಳಿಯ ಪಟ್ಟಿಗಳು
ಮೊನ್ನೆ ಕನಸಲ್ಲಿ ತೇಲುತ್ತ ಬಂದವು
ಎಂಭತ್ತರ ವೇಗದಲಿ ಸಾಗುತ್ತಿತ್ತು ಕಾರು
ಸುತ್ತ ಗಿಡಮರಗಳಿಗೆ ಬಂದಿತ್ತು ಕಾಲು
ಅರೆರೆ! ಇದ್ದಕ್ಕಿದ್ದಂತೆ ಕೆಂಪು ಪಟ್ಟಿಗಳು
ಹಾದಿಯುದ್ದಕ್ಕು ನನ್ನ ಬೆಚ್ಚಿಬೀಳಿಸಿದವು
ಗಕ್ಕನೆ ತಡೆಯೊತ್ತಿ ಕಾರಿನಿಂದಿಳಿದು
ನೆಲವ ಸವರಲು ಬೆರಳಿಗಂಟಿದವು ನೆನಹು
ಕಣಕಣವು ಕಥೆಯಾಗಿ ಕಣ್ಮುಂದೆ ಹರಡಿ
ರಣಬಿಸಿಲಿನಲಿ ಜೆಲ್ಲಿ ಹೊರುತ್ತಿದ್ದಳು ತಾಯಿ
ಬದುಕಿಗೆ ಬೀಗಮುದ್ರೆ ಬಿದ್ದ ಹೊತ್ತಿನಲಿ
ಮನೆ ಸೇರಲು ನಡೆದಳು ಅದೇ ದಾರಿಯಲಿ
ತುಂಬಿದಾ ಬಸುರಿ ರಸ್ತೆಯಂಚಿನಲಿ ಹಡೆದು
ಶಿಶುವೆತ್ತಿ ನಡೆದಳು ಒಡಲ ರಕ್ತವನೆ ಬಸಿದು
ಸುರಿವ ಮಳೆ ತೊಳೆಯಬಹುದು ಕಲೆಯನ್ನು
ಮರೆಯಬಹುದೆ ಚರಿತ್ರೆ ಈ ಮಹಾವಲಸೆಯನು?


ಕೃಷ್ಣನೊಂದಿಗೆ ಮಾತುಕತೆ


ಕೃಷ್ಣನೊಂದಿಗೆ ಮಾತುಕತೆಯೆಂದರೆ 

ನಿನ್ನೊಂದಿಗಿನ ಸಲ್ಲಾಪದಂತೆ

ಮಧುರವಾಗಿ ನುಡಿಯುವ ಮೋಹನ

ಮುರಲಿಯ ತುಟಿಗಿಟ್ಟರೆ

ನಿಂತ ನೆಲವೇ ನಂದನವನ

ಮೆಲ್ಲನೆ ಕೈಗೆ ಕೈಯ್ಯ ಸೋಕಿಸಿದರೆ

ಎದುರಲ್ಲೇ ಬೃಂದಾವನ

ಮಡಿಲಲ್ಲಿ ಮಲಗಿ ಕಣ್ಮುಚ್ಚಿದರೆ

ನವಿಲುಗರಿಯ ಕನಸು ಕಣ್ಣ ತುಂಬಾ

ಎದೆಯ ಸೆರಗು ಹಾರಿದರೆ

ನಿನ್ನ ಅಕ್ಷಯ ನೆನಪು

ಗೊಂಬೆಯಾದವರ ನಡುವೆ

ಜೀವ ಪಡೆದ ಕೃಷ್ಣ 

ಕೃಷ್ಣೆಯರ ಅಣಕ

ಬಾಯಿಗಿಟ್ಟ ವ್ಯಂಜನಕ್ಕೆ

ಸುಧಾಮನ ಅವಲಕ್ಕಿಯ ಘಮ

ಎಂದೂ ಮುಗಿಯದ ಅಕ್ಷಯ ಪಾತ್ರೆ

ಥೇಟ್ ನಿನ್ನ ಪ್ರೀತಿಯ ಹರಿವಿನ ಥರ

ನಿನ್ನ ಸಂಗಾತವನು ಪ್ರಾಣದಂತೆ

ಎದೆಯಲ್ಲಿ ಬಚ್ಚಿಡುವ ಧಾವಂತ

ಪಾಂಡವರ ಕಾಯುವ ಹಠದಂತೆ

ಕರೆದಲ್ಲಿ ಬರುವ ಪಾರ್ಥನ

ಮಡದಿಯೆಡೆಗವ ಎಂಬ ನಂಬುಗೆ

ನಿನ್ನ ಬರವಿಗೊಂದು ಇಂಬು

ಎಲ್ಲ ಜಂಜಡಗಳು ಕಳೆದಮೇಲೂ

ಅಂಗಾಲ ಚುಚ್ಚುವ ಮುಳ್ಳಂತ

ನಿನ್ನ ನೆನಪು ಬೇಡ ಅವನಿಗೆ

ಬಿಟ್ಟ ಬಾಣದಂತೇ ಕಾಡುವುದೇಕೋ?

Saturday, April 24, 2021

ಗೀತಾಂಜಲಿ

ಗೀತಾಂಜಲಿ -೧

ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆ
ನೀನೆನ್ನ ಅನಂತವಾಗಿಸಿರುವೆ
ದೇಹವೆಂಬ ಸಡಿಲ ಹಡಗನು
ಮತ್ತೆ, ಮತ್ತೆ ನಿರ್ವಾತಗೊಳಿಸಿ
ಹೊಸ ಜೀವವ ತುಂಬಿರುವೆ

ಬರಿದೆ ಬಿದ್ದ ಕೊಳಲು ನಾನು
ಗಿರಿ ಗಹ್ವರಕೆ ಕೊಂಡೊಯ್ವೆ ನೀನು
ಹೊಸಗಾಳಿಯ ಉಸಿರ ತುಂಬಿ
ಜೀವರಾಗ ನೀ ನುಡಿಸಿರುವೆ

ನಿನ್ನ ಅಮರ ಕರವು ಸೋಕಿ
ನನ್ನೆದೆಯ ಹರ್ಷ ಎಲ್ಲೆ ಮೀರಿ
ಭಾಷೆಗೆಟುಕದಂತ ಭಾವವ
ಎದೆಯಾಳದಿ ಮೊಳೆಯಿಸಿದೆ ನೀ

ನನ್ನ ಪುಟ್ಟ ಕರದ ತುಂಬ
ನಿನ್ನ ಪ್ರೀತಿ ಕೊಡುಗೆ ಬಿಂಬ
ಕಾಲವೆಷ್ಟು ಉರುಳಿದರೂ
ಖಾಲಿಯುಳಿದಿದೆ ಮತ್ತೆ ಜಾಗ

ಗೀತಾಂಜಲಿ - ೯೩

ದೊರೆಯ ಕರೆಯು ಬಂದಿದೆ, ಓ ಗೆಳೆಯರೇ
ವಿದಾಯ ಕೋರಿ ಬೀಳ್ಕೊಡುವಿರಾ ಪ್ರಾಣಮಿತ್ರರೇ
ಶರಣು ನಿಮಗೆಲ್ಲರಿಗೂ ಅಗಲುತಿರುವೆನು
ನನ್ನ ಬಾಗಿಲ ಬೀಗವಿದೋ ಮರಳಿಸಿರುವೆನು
ಮನೆಯ ಹೊಣೆಯನೆಲ್ಲ ತೊರೆದೆ ಹಗುರವಾದೆನು
ನಿಮ್ಮ ಅಂತಃಕರಣದೊಂದು ನುಡಿಯ ಬಯಸುವೆ

ಹೊರೆಯು ಆಗದಂತ ನೆರೆಯು ನಾವಾದೆವು
ಪಡೆದುದೇ ಅಧಿಕ ನಾನು ಕೊಡುಗೆಗಿಂತಲೂ
ಮನದೊಳಗೆ ಮುಸುಕಿರುವ ತಮಗಳೆಲ್ಲವೂ
ಹೊಸಬೆಳಕಿನ ಪ್ರಭೆಯಲ್ಲಿ ಕರಗಿಹೋದವು
ದೊರೆಯ ಕಡೆಯ ಕರೆಯು ಇಂದು ನನಗೆ ಬಂದಿದೆ
ಹೋಗಿ ಬರುವೆ ಅನಂತ ದಾರಿ ತೆರೆದುಕೊಂಡಿದೆ

ಗೀತಾಂಜಲಿ - 56

ನನ್ನೊಳಗೆ ಹಾಗೆ ತುಂಬಿ ಹೋದೆ ನಿನ್ನ ಹರುಷವ
ನೀನು ನನ್ನ ಬಳಿಗೆ ಇಳಿದು ಬಂದೆ ಓ ಪ್ರಭು

ಜಗದ ಪತಿಯೆ, ಪ್ರೀತಿ ಝರಿಯೆ ನಾನಿಲ್ಲವಾದರೆ
ನಿನ್ನ ಪ್ರೀತಿ ವರ್ಷಧಾರೆ ಸುರಿವುದೆಲ್ಲಿ ಹೇಳು ದೊರೆ?

ನಿನ್ನ ಎಲ್ಲ ಐಸಿರಿಯಲೂ ನನ್ನ ಪಾಲು ನೀಡಿದೆ
ಮೇರೆಯಿರದ ಆನಂದವ ಹೃದಯದಲ್ಲಿ ಇರಿಸಿದೆ
ನೀನು ಮೂರ್ತವಾಗಿರುವೆ ನನ್ನ ಬದುಕ ಫಲುಕಿನಲ್ಲಿ

ರಾಜ, ಮಹಾರಾಜರ ವಿಧಿಯ ಬರೆವ  ದೇವನೆ
ಶೃಂಗರಿಸಿಕೊಂಡೆ  ನನ್ನ ಸೂರೆಗೊಳಲು ನಿನಗೆ ನೀನೆ
ಪ್ರೀತಿ ಮತ್ತು ಪ್ರೀತಿಸಿದವರ ಬೇರೆಯಾಗಿಸಿ
ಪೂರ್ಣ ಪ್ರೀತಿಯರಿವ ತಂದೆ ನನ್ನ ಮಾಗಿಸಿ

ಗೀತಾಂಜಲಿ -45

ಮೆಲ್ಲಹೆಜ್ಜೆಯಿಟ್ಟು ಬರುವ ಸದ್ದು ಕೇಳದೇನು?
ಅವನು ಬರುವ, ಇಂದೂ ಬರುವ, ಬಂದೇ ಬರುವನು

ಎಲ್ಲ ಕ್ಷಣವು, ಎಲ್ಲ ಯುಗವು
ಎಲ್ಲ ಹಗಲು, ಎಲ್ಲ ಇರುಳು
ಅವನು ಬರುವ, ಎಂದೂ ಬರುವ, ಬಂದೇ ಬರುವನು

ಮನದಿ ಸುಳಿವ ರಾಗದಲ್ಲಿ ಅವನ ಸ್ತುತಿಸುವೆ
ಎಲ್ಲ ಸೊಲ್ಲು ಅವನ ಕರುಣೆ ಸಾರುತಿರುವುದು
ಅವನು ಬರುವ, ಇಂದೂ ಬರುವ, ಬಂದೇ ಬರುವನು

ಬಿರುಬಿಸಿಲಿನ ಬೇಸಿಗೆಯಲಿ, ತಂಪು ಕಾಡ ದಾರಿಯಲ್ಲಿ
ಹೂವ ಗಂಧವಾಗಿ ಅವನು ಸುಳಿಯುತಿರುವನು
ಅವನು ಬರುವ, ಎಂದೂ ಬರುವ, ಬಂದೇ ಬರುವನು

ಗುಡುಗು, ಸಿಡಿಲು, ಮಿಂಚು, ಮಳೆಯ
ಕಾರಿರುಳಿನ ರಾತ್ರಿಯಲ್ಲಿ, ಮೋಡದ ಸಾರೋಟನೇರಿ ಬಂದೇ ಬರುವನು
ಅವನು ಬರುವ, ಇಂದೂ ಬರುವ, ಬಂದೇ ಬರುವನು

ದುಗುಡ ಕಳೆದು ಮತ್ತೆ ದುಗುಡ
ಮನವನಾವರಿಸಿರುವ ಗಳಿಗೆ
ಅವನ ಪಾದ ನನ್ನ ಹೃದಯ ಮೆಲ್ಲ ಸೋಕಿತು
ಹೊನ್ನ ಪಾದ ತಾಕಿದಾಗ ದುಗುಡವೆಲ್ಲ  ಅಲ್ಲೇ ಕರಗಿ
ಹರ್ಷದ ಹೊನಲುಕ್ಕಿ ಮತ್ತೆ ತುಂಬಿ ಹರಿಯಿತು
ಅವನು ಬಂದ, ಅಂದೂ ಬಂದ, ಇಂದು ಬರುವನು

ಗೀತಾಂಜಲಿ -೧೯

ನೀನು ಮಾತನಾಡದಿದ್ದರೆ.....
ನಿನ್ನ ಮೌನವನು ನಾನು ಧರಿಸುತ್ತೇನೆ
ನನ್ನ ಹೃದಯದೊಳಗೆ ತುಂಬಿಕೊಳ್ಳುತ್ತೇನೆ
ನಿನ್ನ ಮೌನವನು...
ತಾರೆಗಳ ತುಂಬಿಕೊಂಡ ಬಾನು
ನಿನ್ನೆದುರು ತುಸು ಬಾಗಿ ಕಾಯುವಂತೆ
ಕದಲದೆ ಸಹನೆಯಿಂದ ಕಾಯುತ್ತೇನೆ ನಾನು

ಹೊಸಬೆಳಗು ಬಂದೇ ಬರುವುದು
ಕತ್ತಲೆಯ ತೆರೆ ಹರಿದು ಹೋಗುವುದು
ಹೊಮ್ಮುವ ಹೊನ್ನ ಕಿರಣಗಳೊಂದಿಗೆ
ನಿನ್ನ ದನಿಯೂ ತೇಲಿ ಬರುವುದು
ನನ್ನ ಗೂಡಿನ ಎಲ್ಲ ಹಕ್ಕಿಗಳ ರೆಕ್ಕೆ
ಪಡೆದ ನಿನ್ನ ದನಿ ಎತ್ತರಕೆ ಹಾರುವುದು
ಅಗೋ, ನೋಡಲ್ಲಿ ನನ್ನ ತೋಪಿನ
ಹೂಗಳ ತುಂಬೆಲ್ಲಾ ನಿನ್ನ ದನಿಯ ಮಾಧುರ್ಯ!

ಗೀತಾಂಜಲಿ-೭೮
ಸೃಷ್ಟಿಯ ಆರಂಭದ ದಿನ
ಎಲ್ಲ ತಾರೆಗಳೂ ಒಮ್ಮೆಲೆ
ಝಗ್ಗೆಂದು ಮಿನುಗಿದವು!
ಆಗಸದ ತಾರೆಗಳ ಸಭೆಕರೆದು
ಜಗನ್ನಿಯಾಮಕ ಹಾಡು ಹಾಡಿದ
"ಓ... ನನ್ನ ಜಗತ್ತೀಗ ಪರಿಪೂರ್ಣವಾಗಿದೆ
ಪರಿಶುದ್ಧ ಆನಂದ ಇಡೀ ಜಗವ ತುಂಬಿದೆ"
ಇದ್ದಕ್ಕಿದ್ದಂತೆ ಕೇಳಿಬಂತೊಂದು ಕೂಗು!
"ಅಗೋ, ಬೆಳಕಿನ ರೇಖೆ ತುಂಡಾಗಿದೆ
ಎಲ್ಲೋ ಒಂದು ತಾರೆಯ ಅವಸಾನವಾಗಿದೆ"

ಕಾಲದ ವೀಣೆಯ ಚಿನ್ನದ ತಂತಿ ತುಂಡಾಯಿತು
ಮಂಜುಳ ಗಾನವು ಮೌನಕ್ಕೆ ಜಾರಿತು

ಎಲ್ಲರೂ ನಿರಾಸೆಯಿಂದ ಹಾಡಿದರು
"ಹೌದು, ಘನ ನಕ್ಷತ್ರದ ಸಾವಾಗಿದೆ
ಸ್ವರ್ಗದ ಘನತೆಗೆ ಕುಂದಾಗಿದೆ"

ಅಂದಿನಿಂದಲೂ ಹುಡುಕುತ್ತಲೇ ಇದ್ದಾರೆ
ಕುಂದಿಲ್ಲದ ಜಗದ ಮಹದಾನಂದವನ್ನು
ಹುಡುಕಾಟ ತಲೆಮಾರುಗಳ ದಾಟುತ್ತಲೇ ಬಂದಿದೆ
ಇಡಿಯ ಲೋಕದ ತುಂಬೆಲ್ಲಾ ಚಾಚಿಕೊಂಡಿದೆ
ಜಗತ್ತು ನೆಮ್ಮದಿಯನ್ನು ಕಳಕೊಂಡಿದೆ

ಕಡುಗತ್ತಲೆಯ ನಿಶ್ಶಬ್ದ ಇರುಳಿನಲ್ಲಿ
ತಾರೆಗಳು ತಮ್ಮಲ್ಲಿಯೇ ಪಿಸುಗುಡುತ್ತವೆ
ತಾವೇ ಕಣ್ಣುಮಿಟುಕಿಸಿ ನಗುತ್ತವೆ
"ಬಿರುಕಿಲ್ಲದ ಪೂರ್ಣತೆಯ ಹುಡುಕಾಟ
ಆಹಾ! ಅದೆಷ್ಟು ವ್ಯರ್ಥ!"


[25/04, 00:44] : ಗೀತಾಂಜಲಿ -೨

ಹಾಡನೊಂದು ಹಾಡು ಎಂದು
ನೀನು ನನ್ನ ಕೇಳಿದಾಗ
ಎದೆಯ ತುಂಬ ಆನಂದರಾಗ
ತುಂಬಿಹೋಯ್ತು ಧನ್ಯತೆಯಲಿ
ಆಸೆಯಿಂದ ನಿನ್ನ ಮೊಗವ
ದಿಟ್ಟಿಸುವೆನು ನನ್ನ ದೊರೆಯೆ
ನಿರಾಸೆ ಮೋಡ ಕಳಚಿ ಕಣ್ಣ
ತುಂಬಿ ಬಂತು ಆನಂದಬಿಂದು

ಬಾಳ ದುಃಖ ದುಗುಡವೆಲ್ಲ
ಸಿಹಿಯ ರಾಗದಲ್ಲಿ ಕರಗಿ
ನಿನ್ನ ಆರಾಧನೆಯ ಸೊಲ್ಲು
ಹಕ್ಕಿ ರೆಕ್ಕೆಯಂತೆ ಒದಗಿ
ಬಾನಾಡಿಯಾಗಿ ಹಾರಿದೆನು
ಸ್ವಚ್ಛಂದ ಬಾನಿನಗಲದಿ

ನೀ ಬಯಸುವೆ ನನ್ನ ಗಾನ
ಎಂಬ ಮಾತೇ ಅಮೃತ ಸಮಾನ
ಹಾಡ ರೆಕ್ಕೆ ಧರಿಸಿ ನಾನು
ನಿನ್ನ ಪಾದ ಸೋಕುವೆನು
ನಿನ್ನ ಸೇರುವ ಬಯಕೆ ಸ್ವಪ್ನ
ನಿಜವಾದುದಿಂತು ಗಾನದಿಂದ

ಗಾನದಾನಂದವೆಂಬ
ಸೋಮರಸವ ಕುಡಿದೆ ದೇವ
ನನ್ನ ನಾನು ಮರೆತೆ ಹೋದೆ
ನಿನ್ನೊಡನೆ ನಾನು ಐಕ್ಯವಾದೆ
ನನ್ನ ದೇವನ ಚಿತ್ರಿಸಿರುವ
ಜಗದ ಸಿರಿಗೆ ಶರಣು ಎಂದೆ
[25/04, 01:07] : 

ಗೀತಾಂಜಲಿ - ೩

ಎಂಥ ಮಧುರ ಸಂಗೀತ
ದೇವ ನಿನ್ನ ಎದೆಯ ಗೀತ
ಕೇಳಿದಾಗಲೆಲ್ಲ ನಾನು ಮೂಕವಿಸ್ಮಿತ!

ನಿನ್ನ ಗಾನದ ಬೆಳಕ ಪಡೆದು
ಇಡಿಯ ಜಗವು ಬೆಳಗುತಿಹುದು
ಹಲವು ಲೋಕಗಳನು ದಾಟಿ
ಗಾನಪ್ರವಾಹ ಹರಿಯುತಿಹುದು
ಎಡರು ತೊಡರುಗಳನು ಮೀರಿ
ದಿವ್ಯಗಾನ ಪ್ರವಹಿಸುವುದು
ಕೇಳಿದಾಗಲೆಲ್ಲ ನಾನು ಮೂಕವಿಸ್ಮಿತ!

ನನ್ನ ದನಿಯು ನಿನ್ನ ದನಿಗೆ
ಬೆರೆಯಬಯಸಿ ಹಾಡುತಿಹುದು
ಬರಿಯ ಮಾತು ಮಾತ್ರವಾಗಿ
ಹಾಡಾಗಲು ಸೋಲುತಿಹುದು
ನಿನ್ನ ಮಧುರ ಗಾನದ ಬಲೆ
ಯಲ್ಲಿ ಸಿಲುಕಿದ ಮೀನು ನಾನು
ನಿನ್ನ ಗಾನದೊಡನೆ ನನ್ನ ದನಿಯ ಸೇರಿಸು
ನಿನ್ನ ಹಾಡಿನಲ್ಲಿ ನನ್ನ ಲೀನವಾಗಿಸು


[27/04, 23:59] : ಗೀತಾಂಜಲಿ -೪

ಜಗದ ಆದಿ ಚೈತನ್ಯವೆ
ನಿನಗೆ ನನ್ನಯ ಪ್ರಾರ್ಥನೆ

ನಿನ್ನ ಅಮೃತ ಸ್ಪರ್ಶ ನನ್ನ
ಅಂಗಾಂಗಗಳ ಆವರಿಸಿದೆ
ಅದಕೆ ನನ್ನ ಇಡಿಯ ದೇಹವ
ನಿರ್ಮಲವಾಗಿಡಲು ಬಯಸುವೆ

ನನ್ನ ಮನದ ತುಂಬ ತುಂಬಿದೆ
ನಿನ್ನ ಸತ್ಯದ ಕರುಣೆ ಬೆಳಕು
ಅದಕೆ ಸುಳ್ಳಿನ ಸುಖದ ಬಯಕೆಯು
ನನ್ನ ಭಾವದ ಹೊರಗಿದೆ

ನನ್ನ ಹೃದಯದ ಆಳದಲ್ಲಿ
ನಿನ್ನ ಬಿಂಬವು ಹುದುಗಿದೆ
ಅದಕೆ ಎದೆಯ ಕೊಳೆಯನೆಲ್ಲ
ತೊಳೆದು ಹೂ ಗಂಧವ ಧರಿಸಿದೆ

ನನ್ನ ಈ ಚೈತನ್ಯವೆಲ್ಲ
ನಿನ್ನ ಕೊಡುಗೆಯು ಹೇ ಪ್ರಭು
ಅದಕೆ ನನ್ನ ಕಾರ್ಯದಲ್ಲಿ
ನೀನು ಸಾಕಾರಗೊಂಡಿಹೆ

[28/04, 00:53] : ಗೀತಾಂಜಲಿ -೫

ನಾನು ಕ್ಷಣದ ಬಯಕೆಯನು ನಿನ್ನೆದುರು ಹರಡಿ ಕುಳಿತಿರುವೆ
ಕಾಯುತ್ತಿರುವ ನೂರು ಕೆಲಸಗಳನ್ನು ಮುಗಿಸುವೆ ಮತ್ತೆ

ನಿನ್ನ ನೋಟದಿಂದ ಮರೆಯಾದ ಕ್ಷಣ
ನನ್ನ ಹೃದಯಕ್ಕಿಲ್ಲ ಒಂದಿನಿತೂ ನೆಮ್ಮದಿ, ವಿರಾಮ
ದಡವಿಲ್ಲದ ಶ್ರಮ ಸಾಗರದಂತೆ
ನನ್ನ ಕೆಲಸಗಳೆಲ್ಲವೂ ಮುಗಿಯದ ಪಾಡಾಗುತ್ತವೆ

ಇಂದು ಬೇಸಿಗೆ ನನ್ನ ಕಿಡಕಿಯಲ್ಲಿಣುಕುತ್ತಿದೆ
ಅದರ ನಿಟ್ಟುಸಿರು, ಗೊಣಗಾಟ ನನ್ನ ಕಲಕಿದೆ
ಹೂ ತೋಪಿನ ಒಡ್ಡೋಲಗದಲ್ಲಿ
ದುಂಬಿಗಳು ಅಲೆಮಾರಿಯ ಹಾಡು ಹಾಡುತ್ತಿವೆ

ನಿನ್ನೊಂದಿಗೆ ಮುಖಾಮುಖಿಯಾಗಿ ಕುಳಿತಿರುವೆ ಪ್ರಭುವೆ
ಗಾಢ ಮೌನವನು ಕ್ಷಣಗಳು ಹೊದ್ದುಕೊಂಡಿವೆ
ಉಕ್ಕಿ ಹರಿಯುವ ಈ ವಿರಾಮ ಕಾಲದಲ್ಲಿ
ಬದುಕ ಸಮರ್ಪಣೆಯ ಹಾಡ ಹಾಡಬೇಕಿದೆ

ಕಾಯುತ್ತಿರುವ ಕೆಲಸಗಳನ್ನೆಲ್ಲ ಮತ್ತೆ ಮುಗಿಸುವೆ
ಈ ಕ್ಷಣವನ್ನು ನಿನ್ನೆದುರು ಹರಡಿ ಕುಳಿತಿರುವೆ

[28/04, 01:13] : ಗೀತಾಂಜಲಿ -೬

ಕಿತ್ತುಬಿಡು ಈ ಹೂವನ್ನು, ಕೈಗೆತ್ತಿಕೋ, ತಡಮಾಡಬೇಡ
ವಾಲುತ್ತಿದೆ ನೋಡು ನೆಲದೆಡೆಗೆ, ಬೀಳುವ ಮುನ್ನ ಧೂಳಿನೊಳಗೆ, ಕೊಯ್ದುಬಿಡು ನೀನು

ಹೂಮಾಲೆಯಲಿ ಜಾಗವಿಲ್ಲದಿರಬಹುದು ಅದಕೆ
ನಿನ್ನ ಕೈಯ್ಯ ಸ್ಪರ್ಶಕ್ಕೆ ಹಂಬಲಿಸಿದೆ, ಕೊಯ್ದುಕೋ
ಸಮರ್ಪಣೆಯ ಸಮಯವೀಗ ಜಾರಿ ಹೋಗುತ್ತಿದೆ
ದಿನವು ಮುಗಿಯುವ ಮುನ್ನ ಕಿತ್ತುಬಿಡು ಹೂವನ್ನ

ಹೂ ಬಣ್ಣ ಅಷ್ಟೇನೂ ಗಾಢವಿಲ್ಲದಿರಬಹುದು
ಮೈ ಮರೆಸುವ ಸುಗಂಧವ ಚೆಲ್ಲದಿರಬಹುದು
ನಿನ್ನ ಸೇವೆಗೆಂದೇ ಅರಳಿದೆ ಈ ಹೂವು
ಸಮಯ ಉರುಳುವ ಮುನ್ನ ಕೊಯ್ದುಬಿಡು ಅದನ
[29/04, 22:46] : ಗೀತಾಂಜಲಿ - ೭

ನನ್ನ ಹಾಡು ತನ್ನೆಲ್ಲ ಬೆಡಗಿನ ಪೋಷಾಕು ಕಳಚಿದೆ
ಶೃಂಗಾರದ ಬೆರಗ ಹೆಮ್ಮೆಯ ಬದಿಗೆ ಸರಿಸಿದೆ
ಆಭರಣಗಳು ನಡುವೆ ಬಂದು ದೂರವಾಗಿಸಬಹುದು
ಅದರ ಸದ್ದು ನಮ್ಮ ಪಿಸುದನಿಯ ಕಸಿಯಬಹುದು

ನಿನ್ನೆದುರು ನನ್ನ ಕವಿತನದ ವೈಯ್ಯಾರ ನಾಚಿ ಅಳಿಯಿತು
ಓ ಜಗದ ಕವಿಯೆ, ನಿನ್ನೆದುರು ನನ್ನ ಶಿರವು ಮಣಿಯಿತು
ಮಧುರಗಾನ ಮಿಡಿವ ನಿನ್ನ ಕೊಳಲ ರಂಧ್ರದಂತೆ
ನೇರ, ಸರಳವಿರಿಸು ನನ್ನ ಬದುಕ ಬೇಡಿಕೊಂಬೆ

[29/04, 23:18] : ಗೀತಾಂಜಲಿ - ೮

ಮುದ್ದು ಮಗುವಿಗಿಲ್ಲಿ ರಾಜಕುಮಾರನ ಪೋಷಾಕು ತೊಡಿಸಲಾಗಿದೆ
ಚಿನ್ನದ ಕಂಠೀಹಾರ ತರಳನ ಕೊರಳ ಬಳಸಿದೆ
ಹೆಜ್ಜೆಯಿಡಲೂ ಅಡ್ಡಿಪಡಿಸುತ್ತಿದೆ ಈ ಪೋಷಾಕು
ಬಾಲ್ಯದಾಟದ ಖುಶಿಯ ಕಳಕೊಂಡಿದೆ ಬದುಕು

ಝರಿಯಂಚು ಹರಿದೀತೆಂಬ ಭಯ
ಅಂಗಿ ಕೊಳೆಯಾದೀತೆಂಬ ಆತಂಕ
ಸಹಜ ಬದುಕಿನ ಕೊಂಡಿ ಕಳಚಿದೆ
ಭಯದ ನೆರಳಲ್ಲಿ ಹೆಜ್ಜೆ ಹಿಂಜರಿದಿದೆ

ಅಮ್ಮಾ, ಇವೆಲ್ಲವೂ ವ್ಯರ್ಥ ಸಾಹಸಗಳು
ನಿನ್ನ ಅತಿಪ್ರೀತಿ ಉಸಿರುಗಟ್ಟಿಸುವುದು ಕೇಳು
ಕಳೆದುಹೋಗಿದೆ ಬೆಳವಣಿಗೆಯ ಸಹಜ ಮಜಲುಗಳು
ಕಳೆದುಹೋಗುತ್ತವೆ ನೈಜ ಬದುಕಿನ ಸುಖಗಳು


ಗೀತಾಂಜಲಿ - ೯

ಮೂರ್ಖನೇ,
ನಿನ್ನ ಶಿಲುಬೆಯನು ನೀನೇ ಹೊತ್ತು ನಡೆದುಬಿಡು
ಓ ಭಿಕ್ಷುಕನೇ,
ನಿನ್ನ ಮನೆಯಂಗಳದಲ್ಲೇ ನಿಂತು ಭಿಕ್ಷೆ ಬೇಡು

ನಿಮ್ಮ ಎಲ್ಲ ದುಗುಡಗಳನ್ನೂ ಅವನ ಕೈಯ್ಯಲ್ಲಿಟ್ಟುಬಿಡಿ
ಎಂದಿಗೂ ವಿಷಾದದಿಂದ ಹಿಂದಿರುಗಿ ನೋಡದಿರಿ

ಆಸೆಗಳ ನಿಟ್ಟುಸಿರು ದಾರಿ ಬೆಳಗುವ ದೀಪವನ್ನಾರಿಸುತಿದೆ
ಅಶುದ್ಧ ಕೈಗಳಿಂದ ಪವಿತ್ರ ಉಡುಗೊರೆಗಳನ್ನು ಸ್ವೀಕರಿಸಲಾದು

ಗೀತಾಂಜಲಿ - ೧೨

ದೀರ್ಘಕಾಲದ ಪಯಣ ನನ್ನದು: ದಾರಿಯೂ ಅಷ್ಟೇ ದೀರ್ಘವಾಗಿದೆ
ಮೊದಲ ಬೆಳಕಿನ ಪುಂಜದ ರಥವನ್ನೇರಿ ಹೊರಟಿರುವೆ
ಭೂಮ್ಯಾಕಾಶದ ಮೇರೆ ಮೀರಿ ಚಲಿಸುತ್ತಿರುವೆ
ಎಲ್ಲ ತಾರೆ, ಗ್ರಹಗಳ ಮೇಲಿವೆ ನನ್ನ ಹೆಜ್ಜೆಗುರುತು!

ನಿನ್ನೆಡೆಗೆ ಬರುವ ದಾರಿಯೇ ಹಾಗೆ; ದೀರ್ಘ, ಸಂಕೀರ್ಣ
ರಾಗವನು ಅತಿ ಸರಳಗೊಳಿಸಿ ಹಾಡಿದ ಹಾಗೆ
ಎಲ್ಲ ಪರಕೀಯರ ಮನೆಯ ಬಾಗಿಲು ತಟ್ಟಬೇಕು
ನಮ್ಮ ಮನೆಯ ನಾವು ಕಂಡುಕೊಳಲು
ಜಗದ ಸೀಮೆಯನ್ನೆಲ್ಲ ದಾಟಿ ಬರಬೇಕು
ಒಳಗಿನರಿವಿನ ಬೆಳಕ ಸೇರಿಕೊಳಲು

ನನ್ನ ಕಣ್ಣುಗಳ ನೋಟ ದೂರ, ವಿಶಾಲ ಜಗದೆಡೆಗಿತ್ತು
ಕಣ್ಣು ಮುಚ್ಚಿ ಧ್ಯಾನಿಸಿದೆ; ಹೇಳಿದೆ "ಓ ನೀನಿಲ್ಲಿರುವೆ!"
"ಅರೆ! ಎಲ್ಲಿ?" ಪ್ರಶ್ನೆಯ ಕೂಗು ಕರಗಿತು
ಸಾವಿರ ಕಣ್ಣುಗಳ ಆನಂದಾಶ್ರುಗಳಲಿ
ಭರವಸೆಯ ಪ್ರವಾಹ ತೇಲಿಬರುತ್ತಿದೆ "ನಾನಿರುವೆ ಇಲ್ಲಿ!"



ಗೀತಾಂಜಲಿ -೫೯

ಹೌದು, ಇದು ಬರಿಯ ಬೆಳಗಲ್ಲ
ಬೇರೇನೂ ಅಲ್ಲ, ನಿನ್ನ ಪ್ರೀತಿಯ ಹೊರತು
ಈ ಎಲೆಗಳ ಮೇಲೆ ಹೊಳೆವಹೊನ್ನ ಕಿರಣ
ಆಕಾಶದಲ್ಲಿ ತೇಲುತ್ತಿರುವ ಮೋಡಗಳ ತೋರಣ
ನನ್ನ ಮುಖವ ಸೋಕುವ ಈ ತಂಪು ಗಾಳಿ
ಬರಿಯ ಬೆಳಗಲ್ಲವಿದು, ನಿನ್ನ ಅದಮ್ಯ ಪ್ರೀತಿ!

ಬೆಳಗಿನ ಬೆಳಕು ನನ್ನ ಕಣ್ತುಂಬಿದೆ
ನಿನ್ನ ಸಂದೇಶವನು ನನ್ನೆದೆಗೆ ದಾಟಿಸಿವೆ
ನಿನ್ನ ಮೊಗವೀಗ ನನ್ನೆಡೆಗೆ ಚಾಚಿದೆ
ನಿನ್ನ ಕಣ್ಣುಗಳು ನನ್ನ ಕಣ್ಣುಗಳ ದಿಟ್ಟಿಸಿವೆ
ನನ್ನ ಹೃದಯವೀಗ ನಿನ್ನ ಪಾದಗಳ ತಾಕಿದೆ
ಮತ್ತಿದು ಬರಿಯ ಬೆಳಗಲ್ಲ,  ನಿನ್ನ ಪ್ರೀತಿಯ ಹೊರತು


ಗೀತಾಂಜಲಿ - ೧೪

ನೂರಾರು ಆಸೆಗಳು ನನಗೆ
ಅದಕೆಂದೇ ಗೋಳಿಡುವೆ ಪ್ರತಿದಿನವೂ
ಮತ್ತೆ ನೀನು?
ಪ್ರತಿಸಲವೂ ನಿರಾಕರಣೆಯೆಂಬ ಸುತ್ತಿಗೆಯಲಿ
ಬಡಿದು ಹದವಾಗಿಸುತ್ತಿರುವೆ ದಿನವೂ

ನನ್ನ ಸರಳಗೊಳಿಸುತ್ತಿರುವೆ ದಿನ ದಿನವೂ
ನಿನ್ನ ನಂಬಿಗಸ್ತನಾಗಿಸಲು
ಈ ಆಗಸ, ಬೆಳಕು ನಿನ್ನದೇ ಕೊಡುಗೆ
ಕೇಳದೆಯೂ ನನಗದನು ನೀ ನೀಡಿರುವೆ
ಅಂತೆಯೇ ಈ ದೇಹ, ಜೀವನ, ಮನಸ್ಸುಗಳನೂ
ಆದರೆ...
ಅತೀವ ಬಯಕೆಯ ಅಪಾಯದಿಂದ
ನನ್ನನ್ನು ರಕ್ಷಿಸಿರುವೆ ಪ್ರತಿಬಾರಿಯೂ

ನಾನು ದಣಿದು ಕಾಲಹರಣ ಮಾಡುವಾಗಲೂ
ಎಚ್ಚರಗೊಂಡು ಗುರಿಯ ಬೆನ್ನತ್ತಿದಾಗಲೂ
ನೀನು ಎದುರು ಬಾರದೇ ಅಡಗಿ ಕುಳಿತು
ಕ್ರೂರವಾಗಿಯೇ ವರ್ತಿಸಿರುವೆ

ನನ್ನನ್ನೂ ಎಂದೆಂದಿಗೂ ನಿರಾಕರಿಸಿ
ದುರ್ಬಲ ಅಶಾಶ್ವತ ಆಸೆಗಳಿಂದ ಮುಕ್ತಗೊಳಿಸಿ
ದಿನದಿಂದ ದಿನಕ್ಕೆ ನಂಬಿಗಸ್ತನನ್ನಾಗಿಸಿರುವೆ ನೀನು

ಗೀತಾಂಜಲಿ -೧೬

ಈ ಜಗದ ಉತ್ಸವಕೆ ನನ್ನನ್ನು ಆಹ್ವಾನಿಸಿರುವೆ
ಪ್ರಭುವೇ, ನಾನು ನಿಜಕ್ಕೂ ಆಶೀರ್ವದಿಸಲ್ಪಟ್ಟುವೆ
ನನ್ನ ಕಣ್ಣಗಳಿಗೀಗ ದಿವ್ಯ ಕಾಣ್ಕೆ
ನನ್ನ ಕಿವಿಗಳಿಗೆ ಶ್ರಾವ್ಯ ಯೋಗ

ನನ್ನ ತಂಬೂರಿಯನು ಶ್ರತಿಗೊಳಿಸುತ್ತಿರುವೆ
ಈ ಉತ್ಸವದಲ್ಲಿ ನನಗೂ ಸ್ಥಾನವಿದೆ
ನನ್ನಿಂದಾಗುವ ಎಲ್ಲವನ್ನೂ ಮಾಡಬೇಕಿದೆ

ಈಗ ನಾನು ಕೇಳಿಕೊಳ್ಲಕುತ್ತಿದ್ದೇನೆ
ನನ್ನ ಕೊನೆಗಾಲದಲ್ಲಿ ನಿನ್ನ ದರ್ಶನವಾಗಬಹುದೆ?
ನನ್ನ ಮೌನ ಪ್ರಾರ್ಥನೆ ನಿನ್ನ ತಲುಪಬಹುದೆ?

ಗೀತಾಂಜಲಿ - ೧೭

ನಾನು ಪ್ರೀತಿಗಾಗಿ ಮಾತ್ರವೇ ಕಾಯುತ್ತಿದ್ದೇನೆ
ಅಂತಿಮವಾಗಿ ನನ್ನ ನಾನೇ ಅರ್ಪಿಸಿಕೊಳ್ಳಲು
ಅದಕ್ಕೆಂದೇ ಇಷ್ಟು ನಿಧಾನಿಸುತ್ತಿದ್ದೇನೆ
ನನ್ನ ಲೋಪಗಳ ಬಗ್ಗೆ ಪಶ್ಚಾತ್ತಾಪವಿದೆ

ಅವರು ನನ್ನ ಬಂಧಿಸಲು ಬರುತ್ತಾರೆ
ತಮ್ಮ ಕಾನೂನು ಕಟ್ಟಳೆಗಳ ಹತಿಯಾರದೊಂದಿಗೆ
ನಾನು ಸದಾ ತಪ್ಪಿಸಿಕೊಂಡೇ ತಿರುಗುತ್ತೇನೆ
ನಾನು ಪ್ರೀತಿಗಾಗಿಯೇ ಕಾಯುತ್ತಿದ್ದೇನೆ
ಅಂತಿಮವಾಗಿ ಅದರ ತೋಳಿನಲ್ಲಿರಲು

ನನ್ನ ಅಜಾಗರೂಕತೆಗಾಗಿ ಜನರು ಶಪಿಸುತ್ತಾರೆ 
ಅವರ ಬೈಗುಳದಲ್ಲಿ ಸತ್ಯವಿದೆಯೆಂದು ನನಗನಿಸುವುದಿಲ್ಲ

ಸಂತೆ ಮುಗಿದಿದೆ ಮತ್ತು ಕೆಲಸವೂ ಅವಸರದಲ್ಲಿ
ನನ್ನ ಕರೆಯಬಂದವರು ಕೋಪದಿಂದ ಹಿಂದಿರುಗಿದ್ದಾರೆ
ನಾನು ಬರಿಯ ಪ್ರೀತಿಗಾಗಿ ಕಾಯುತ್ತಿದ್ದೇನೆ
ಅಂತಿಮವಾಗಿ ಪ್ರೀತಿಯ ಬಂಧಿಯಾಗಲು

ಗೀತಾಂಜಲಿ - ೧೮

ದಟ್ಟ ಕಾರ್ಮೋಡ ಕವಿಯುತ್ತಿದೆ
ಸುತ್ತ ಕತ್ತಲೆ ಮುಸುಕುತ್ತಿದೆ
ಓ ಪ್ರೀತಿಯೇ,
ಯಾಕೆ ನನ್ನನ್ನಿನ್ನೂ ಬಾಗಿಲ ಬಳಿಯೇ
ಒಂಟಿಯಾಗಿ ಕಾಯುವಂತೆ ಮಾಡುತ್ತಿರುವೆ?

ದಿನದ ದಂದುಗದ ಒತ್ತಡದ ಗಳಿಗೆಗಳಲ್ಲಿ
ನಾನು ಜನಸಂದಣಿಯಲ್ಲಿ ಕಳೆದುಹೋಗುತ್ತೇನೆ
ಈ ಒಂಟಿತನದ ಕತ್ತಲ ರಾತ್ರಿಯಲಿ
ನಿನ್ನ ಸಂಗಾತಕ್ಕಾಗಿ ಎಚ್ಚರವಿದ್ದು ಕಾಯುತ್ತೇನೆ

ನಿನ್ನ ಮುಖದರ್ಶನದ ಭಾಗ್ಯವಿಲ್ಲದಿದ್ದರೆ
ನಿನೇ ನಿರ್ಲಕ್ಷದಿಂದ ಬದಿಗೆ ಸರಿಸಿದರೆ
ಈ ದೀರ್ಘಮಳೆರಾತ್ರಿಗಳನು ಒಂಟಿಯಾಗಿ
ಹೇಗೆ ಕಳೆಯುವುದೆಂದು ತಿಳಿಯೆ ನಾನು

ದೂರ ದಿಗಂತದೆಡೆಗೆ ನನ್ನ ದೃಷ್ಟಿ ಹರಿಸುತ್ತೇನೆ
ಸುಳಿದಾಡುವ ಗಾಳಿಯಂತೆ ಹೃದಯವೀಗ ಹೊಯ್ದಾಡುತ್ತಿದೆ

[14/05, 11:26] : ಗೀತಾಂಜಲಿ -೨೦

ಆಹಾ! ಕಮಲವೊಂದು ಅರಳಿದ ಆ ದಿನ
ಯಾಕೋ ಅರಿಯೆ, ನನ್ನ ಮನಸ್ಸು ದಾರಿ ತಪ್ಪಿತು
ನನ್ನ ಹೂದಾನಿ ಖಾಲಿಯಾಗಿತ್ತು ಮತ್ತು
ಹೂವು ಗಮನಕ್ಕೆ ಬಾರದೇ ಉಳಿಯಿತು

ಆಗೀಗ ಬೇಸರದ ಛಾಯೆ ಮುಸುಕಿದಾಗ
ನಾನು ಕನಸುಗಳ ಬೆಂಬತ್ತಿ ಹೊರಟೆ
ದಕ್ಷಿಣದ ಗಾಳಿಯಲಿ ವಿಚಿತ್ರ ಮಾಧುರ್ಯದ ಸೆಳೆತವಿತ್ತು

ದೀರ್ಘಕಾಲದ ಅಸ್ಪಷ್ಟ ಮಾಧುರ್ಯ
ನನ್ನ ಹೃದಯವನ್ನು ನೋಯಿಸಿತು
ಉತ್ಸಾಹೀ ಬೇಸಗೆಯ ಉಸಿರು ಪೂರ್ಣಗೊಳ್ಳಲು ಹಪಹಪಿಸುತ್ತಿತ್ತು

ನನಗೆ ತಿಳಿದಿರಲಿಲ್ಲ ಮಾಧುರ್ಯ ಎಲ್ಲಿದೆಯೆಂದು
ಅದು ಅಷ್ಟು ಹತ್ತಿರದಲ್ಲಿತ್ತು, ನನ್ನೊಳಗೇ
ನನ್ನ ಹೃದಯದಾಳದಿಂದಲೇ ಅರಳಿ ಬಂದಿತ್ತು
[14/05, 11:36] : ಗೀತಾಂಜಲಿ -೨೧

ವಸಂತ ಅದಾಗಲೇ ಹೂವನರಳಿಸೊದ್ದ
ಎಲೆಗಳ ತೆರಿಗೆ ಪಡೆದುಕೊಂಡು
ಪಕಳೆಯುದುರಿದ ಹೂಗಳ ನಿರರ್ಥಕತೆಯ ಧರಿಸಿ
ನಾನು ಕಾಯುತ್ತಿದ್ದೆ ಲಂಗರು ಹಿಡಿದುಕೊಂಡು

ನಾನು ನನ್ನ ನಾವೆಯನ್ನು ನಡೆಸಬೇಕಿತ್ತು
ನಿರರ್ಥಕ ಘಳಿಗೆಗಳು ದಾಟಿ ಹೋಗುತ್ತಿದ್ದವು
ಓಹ್! ಅವೆಲ್ಲವೂ ನನ್ನದಾಗಿದ್ದವು!

ಅಲೆಗಳ ಅಬ್ಬರ ಜೋರಾಗಿಯೇ ಇತ್ತು
ನೆರಳಿನ ದಂಡೆಯಲಿ ಹಳದಿ ಎಲೆಗಳಿದ್ದವು
ಅದುರುತ್ತಿದ್ದವು ಮತ್ತು ಉದುರುತ್ತಿದ್ದವು

ಯಾವ ಖಾಲಿತನವನ್ನು ಎದುರು ನೋಡುತ್ತಿರುವೆ?
ಆಚೆಯ ದಡದಿಂದ ಬೀಸಿ ಬರುತ್ತಿರುವ
ಗಾಳಿಯೊಂದಿಗೆ ತೇಲಿಬಂದ ಗಾನದೊಳಗೆ
ಮುಳಿಗಿಹೋಗುವುದು ರೋಮಾಂಚಕವೆನಿಸುತ್ತಿಲ್ಲವೆ ನಿನಗೆ?
[14/05, 11:41] : ಗೀತಾಂಜಲಿ -೨೨

ಜುಲೈ ತಿಂಗಳ ಮಳೆಯ ರಾತ್ರಿಗಳಲ್ಲಿ
ನಿನ್ನ ರಹಸ್ಯ ಹೆಜ್ಜೆಗಳು
ರಾತ್ರಿಯಷ್ಟೇ ಮೌನವಾಗಿ
ವೀಕ್ಷಕರ ಕಣ್ಣು ತಪ್ಪಿಸಿ ಚಲಿಸುತ್ತವೆ

ಇಂದಿನ ಬೆಳಗು ಕಣ್ಣುಗಳನ್ನು ಮುಚ್ಚಿಕೊಂಡಿದೆ
ಪೂರ್ವದ ಗಾಳಿಯ ಕರೆಯು ಭೋರ್ಗರೆಯುತ್ತಿದೆ!
ಸದಾ ಎಚ್ಚರವಿರುವ ನೀಲಿಯ ಆಗಸಕ್ಕೆ
ಗಾಢವಾದ ಮುಸುಕನ್ನು ಎಳೆಯಲಾಗಿದೆ
ಕಾಡುಗಳು ಎದೆಯ ಹಾಡುಗಳನ್ನು ಅಡಗಿಸಿವೆ
ಎಲ್ಲರ ಮನೆಯ ಬಾಗಿಲುಗಳೂ ಮುಚ್ಚಿವೆ

ನಿರ್ಜನವಾದ ಓಣಿಯಲ್ಲಿ ನೀನೊಬ್ಬನೇ ಪಥಿಕ
ಓ ನನ್ನ ಒಬ್ಬನೇ ಗೆಳೆಯನೇ, ಪರಮಾಪ್ತ ಸ್ನೇಹಿತನೇ,
ನನ್ನ ಮನೆಯ ಬಾಗಿಲುಗಳು ತೆರೆದೇ ಇವೆ
ಕನಸಿನಂತೆ ಸುಳಿದು ಹೋಗಬೇಡ

ಸೃಷ್ಟಿಯ ಆರಂಭದ ದಿನ
ಎಲ್ಲ ತಾರೆಗಳೂ ಒಮ್ಮೆಲೆ
ಝಗ್ಗೆಂದು ಮಿನುಗಿದವು!
ಆಗಸದ ತಾರೆಗಳ ಸಭೆಕರೆದು
ಜಗನ್ನಿಯಾಮಕ ಹಾಡು ಹಾಡಿದ
"ಓ... ನನ್ನ ಜಗತ್ತೀಗ ಪರಿಪೂರ್ಣವಾಗಿದೆ
ಪರಿಶುದ್ಧ ಆನಂದ ಇಡೀ ಜಗವ ತುಂಬಿದೆ"
ಇದ್ದಕ್ಕಿದ್ದಂತೆ ಕೇಳಿಬಂತೊಂದು ಕೂಗು!
"ಅಗೋ, ಬೆಳಕಿನ ರೇಖೆ ತುಂಡಾಗಿದೆ
ಎಲ್ಲೋ ಒಂದು ತಾರೆಯ ಅವಸಾನವಾಗಿದೆ"

ಕಾಲದ ವೀಣೆಯ ಚಿನ್ನದ ತಂತಿ ತುಂಡಾಯಿತು
ಮಂಜುಳ ಗಾನವು ಮೌನಕ್ಕೆ ಜಾರಿತು

ಎಲ್ಲರೂ ನಿರಾಸೆಯಿಂದ ಹಾಡಿದರು
"ಹೌದು, ಘನ ನಕ್ಷತ್ರದ ಸಾವಾಗಿದೆ
ಸ್ವರ್ಗದ ಘನತೆಗೆ ಕುಂದಾಗಿದೆ"

ಅಂದಿನಿಂದಲೂ ಹುಡುಕುತ್ತಲೇ ಇದ್ದಾರೆ
ಕುಂದಿಲ್ಲದ ಜಗದ ಮಹದಾನಂದವನ್ನು
ಹುಡುಕಾಟ ತಲೆಮಾರುಗಳ ದಾಟುತ್ತಲೇ ಬಂದಿದೆ
ಇಡಿಯ ಲೋಕದ ತುಂಬೆಲ್ಲಾ ಚಾಚಿಕೊಂಡಿದೆ
ಜಗತ್ತು ನೆಮ್ಮದಿಯನ್ನು ಕಳಕೊಂಡಿದೆ

ಕಡುಗತ್ತಲೆಯ ನಿಶ್ಶಬ್ದ ಇರುಳಿನಲ್ಲಿ
ತಾರೆಗಳು ತಮ್ಮಲ್ಲಿಯೇ ಪಿಸುಗುಡುತ್ತವೆ
ತಾವೇ ಕಣ್ಣುಮಿಟುಕಿಸಿ ನಗುತ್ತವೆ
"ಬಿರುಕಿಲ್ಲದ ಪೂರ್ಣತೆಯ ಹುಡುಕಾಟ
ಆಹಾ! ಅದೆಷ್ಟು ವ್ಯರ್ಥ!"

ರವೀಂದ್ರನಾಥ ಟ್ಯಾಗೋರ್
ಗೀತಾಂಜಲಿ ೭೮



Monday, April 12, 2021

ಯುಗಾದಿ ಕವನಗಳು

‘ಯುಗಾದಿ’ಯ ಕವಿತೆಗಳು

 ◆ ಎಲ್ಲರಿಗೂ ಯುಗಾದಿಯ ಶುಭಾಶಯಗಳು. 

ಸ್ನೇಹಿತರ್ಯಾರೋ ಸಂಗ್ರಹಿಸಿ ಆನ್ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ ಕವಿತೆಗಳಿವು. ಕನ್ನಡ ಕವಿಗಳ ಯುಗಾದಿ ಕವಿತೆಗಳನ್ನು ಓದಿ ಸಂತಸಪಡುವ ಅವಕಾಶ ಮಾಡಿದ ಆ ಅಜ್ಞಾತರಿಗೆ ಧನ್ಯವಾದಗಳು.

ೱೱೱೱೱೱೱೱೱೱೱೱೱೱೱ

◆ ವರಕವಿ ದ.ರಾ. ಬೇಂದ್ರೆಯವರ 
           ‘ಯುಗಾದಿ’

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಿಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.
ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರಯ
ನಮಗದಷ್ಟೆ ಏತಕೆ?
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

(ಕೃಪೆ: ಔದುಂಬರ ಗಾಥೆ, ಸಂಪುಟ-೪. 
ಸಂಪಾದಕರು: ವಾಮನ ಬೇಂದ್ರೆ)

◆ ರಸಋಷಿ ಕುವೆಂಪು ಅವರ
            ‘ಯುಗಾದಿ’

ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು!

ಗೀತೆಯ ಘೋಷದಿ ನವ ಅತಿಥಿಯ ಕರೆ;
ಹೃದಯ ದ್ವಾರವನಗಲಕೆ ತೆರೆ, ತೆರೆ!
ನವ ಜೀವನ ರಸ ಬಾಳಿಗೆ ಬರಲಿ,
ನೂತನ ಸಾಹಸವೈತರಲಿ!

ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು; ಮರೆ;
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ವತ್ಸರವನು ಕೂಗಿ ಕರೆ!

ಸಂಶಯ ದ್ವೇಷಾಸೂಯೆಯ ದಬ್ಬು;
ಸುಖಶ್ರದ್ಧಾ ಧೈರ್ಯಗಳನು ತಬ್ಬು,
ಉರಿಯಲಿ ಸತ್ಯದ ಊದಿನಕಡ್ಡಿ,
ಚಿರ ಸೌಂದರ್ಯದ ಹಾಲ್ಮಡ್ಡಿ!

ತೊಲಗಲಿ ದುಃಖ, ತೊಲಗಲಿ ಮತ್ಸರ,
ಪ್ರೇಮಕೆ ಮೀಸಲು ನವ ಸಂವತ್ಸರ!
ನಮ್ಮೆದೆಯಲ್ಲಿದೆ ಸುಖನಿಧಿ ಎಂದು
ಹೊಸ ಹೂಣಿಕೆಯನು ತೊಡಗಿಂದು!

ಮಾವಿನ ಬೇವಿನ ತೋರಣ ಕಟ್ಟು,
ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವೂಬೆಲ್ಲ;
ಎರಡೂ ಸವಿವನೆ ಕಲಿ ಮಲ್ಲ!

ಹೊಸ ಮರದಲಿ ಹೂ ತುಂಬಿದೆ ನೋಡು!
ಆಲಿಸು! ಜೇನಿನ ಹಬ್ಬದ ಹಾಡು!
ಜೀವನವೆಂಬುದು ಹೂವಿನ ಬೀಡು;
ಕವಿಯೆದೆ ಹೆಜ್ಜೇನಿನ ಗೂಡು!

ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!

(ಕೃಪೆ: ಕುವೆಂಪು ಸಮಗ್ರಕಾವ್ಯ , ಸಂಪುಟ-೧. ಸಂಪಾದಕರು: ಡಾ.ಕೆ.ಶಿವಾರೆಡ್ಡಿ)

◆ ಮಲ್ಲಿಗೆಯ ಕವಿ 
ಕೆ.ಎಸ್.ನರಸಿಂಹಸ್ವಾಮಿಯವರ        
      ‘ಯುಗಾದಿ’

ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು.

ಹೊಸತು ವರುಷ, ಹೊಸತು ಹರುಷ-
ಹೊಸತು ಬಯಕೆ ನಮ್ಮವು
ತಳಿರ ತುಂಬಿದಾಸೆಯೆಲ್ಲ,
ಹರಕೆಯೆಲ್ಲ ನಮ್ಮವು.

ಬಂಜೆ ನೆಲಕೆ ನೀರನೂಡಿ
ಹೊಳೆಯ ದಿಕ್ಕು ಬದಲಿಸಿ
ಕಾಡ ಕಡಿದು ದಾರಿ ಮಾಡಿ
ಬೆಟ್ಟ ಸಾಲ ಕದಲಿಸಿ.

ಹಿಮಾಚಲ ನೆತ್ತಿಯಲಿ
ಧ್ವಜವನಿಟ್ಟು ಬಂದೆವು;
ಧ್ರುವಗಳಲ್ಲಿ ಹೆಜ್ಜೆಯೂರಿ
ಹೊಸನೆಲೆಗಳ ಕಂಡೆವು.

ಬಾನಸೆರೆಯ ಕಲ್ಪಲತೆಗೆ
ನಮ್ಮ ಕಿಡಿಯ ಮುತ್ತಿಗೆ.
ಮುಗಿಯಬಹುದು ನಾಳೆಯೊಳಗೆ
ದೇವತೆಗಳ ಗುತ್ತಿಗೆ!

ಹುಟ್ಟು ಬೆಂಕಿ ನಮ್ಮ ತಾಯಿ;
ಉಟ್ಟ ಸೀರೆ ಸಾಗರ.
ಅವಳ ಮುಗಿಲ ತುರುಬಿನಲ್ಲಿ
ಹೆಡೆಯ ತೆರೆದ ನಾಗರ.

ಅವಳ ಪ್ರೀತಿ ನಮಗೆ ದೀಪ;
ಅವಳ ಕಣ್ಣು ಕಾವಲು.
ಬಿಸಿಲ ತಾಪ, ಮಳೆಯ ಕೋಪ-
ಸಂತೋಷವೇ ಆಗಲೂ.

ಹೆಜ್ಜೆಗೊಂದು ಹೊಸ ಯುಗಾದಿ-
ಚೆಲುವು ನಮ್ಮ ಜೀವನ!
ನಮ್ಮ ಹಾದಿಯೋ ಅನಾದಿ,
ಪಯಣವೆಲ್ಲ ಪಾವನ.

◆ ‘ಯುಗಾದಿ ‘೮೭’ ಕವನದ 
ಎರಡು ಪದ್ಯಗಳು

ಹೊಸ ವರುಷ ಬಂತು ಮಾಂದಳಿರಿನಲ್ಲಿ,
ಮುಗಿವಿರದ ಚೆಲುವಿನಲ್ಲಿ,
ಹೂಬಿಸಿಲಿನಲ್ಲಿ, ಉಪವನಗಳಲ್ಲಿ,
ಎದೆ ತುಂಬಿದೊಲವಿನಲ್ಲಿ.

ಹೊಸ ವರುಷ ಬಂತು! ನಾನಿಲ್ಲಿ ನಿಂತು
ಹಾಡೊಂದ ನೂಲುತಿಹೆನು.
ಅಲ್ಲೊಂದು ಹಕ್ಕಿ ಇಲ್ಲೊಂದು ಹೂವು!-
ನಾನವನು ನೋಡುತಿಹೆನು.

(ಕೃಪೆ: ಮಲ್ಲಿಗೆಯ ಮಾಲೆ)

◆ ಪು.ತಿ.ನರಸಿಂಹಚಾರ್ ಅವರ 
‘ಹೊಸ ವರುಷ ಬಹುದೆಂದಿಗೆ’ 
ಕವಿತೆಯ ಎರಡು ಪದ್ಯಗಳು

ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ-

ಜಾಣ ಜಿತೇಂದ್ರಿಯ ಧಿರನಾವನೋ
ಚಾಣಿಕ್ಯನ ತೆರ ನಲ್ ಕೇಣದ ನೆಲೆಮತಿ
ಅಂಥವ ತರಬಲ್ಲನು ಹೊಸ ವರುಷ
ಅಂಥಿಂಥವರಿಂ ಬರಿ ಕಲುಷ

(ಕೃಪೆ: ಪುತಿನ ಸಮಗ್ರ ಕವನಗಳು)

◆ ಗೋಪಾಲಕೃಷ್ಣ ಅಡಿಗರ 
‘ಯುಗಾದಿ’ ಕವಿತೆಯ 
ಎರಡು ಪದ್ಯಗಳು

ಯುಗಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ
ಹೊಸಹೊಸವು ಪ್ರತಿ ವರುಷವು;
ಒಳಗೆ ಅದೋ ಕಾಣುತಿದೆ ಚೆಲುವಿರದ ನಲವಿರದ
ಕೊಳೆಯ ಬೆಳೆ;- ರಂಗಮಂದಿರವು!

ಈ ಯುಗಾದಿಯ ಮಾತು ಕೇಳುತಿದೆ ಮರಮರಳಿ
ಮೊದಲಾಗುತ್ತಿದೆ ಯುಗವು, ನರನ ಜಗವು;
ವರುಷವರುಷವು ನಮ್ಮ ಪಯಣ ಮೊದಲಾಗುತ್ತಿದೆ;
ಇದಕು ಮಿಗಿಲಿಲ್ಲ, ಹಾ, ನರಗೆ ಸೊಗವು!

(ಕೃಪೆ: ಸಮಗ್ರ ಕಾವ್ಯ)

◆ ಕೆ.ಎಸ್.ನಿಸಾರ್ ಆಹಮದ್
    ಅವರ ‘ವರ್ಷಾದಿ’

ವರ್ಷಾದಿಯ ತಿಳಿನಗೆಯ ಮೊಗವೆ
ಶುಭ ಯುಗಾದಿ ಕರೆವ ಸೊಗವೆ
ಋತುಗಳ ಗಣನಾಯಕ
ಶರಣೆನ್ನುವೆ ಶುಭದಾಯಕ.

ಹೊಸ ಬಟ್ಟೆಯ ತೊಟ್ಟು ಚೈತ್ರ
ಜಲದರ್ಪಣ ಮಗ್ನ ನೇತ್ರ
ಮುಗಿಲಿನ ಪಂಚಾಂಗ ತೆರೆಸಿ
ಕುಳಿತಿಹ ಫಲ ತಿಳಿಯ ಬಯಸಿ.

ಬೆವರ ಹೀರಿ ಬೆಳೆದ ಪೈರು
ಕಣಕಣದಲಿ ಹೊನ್ನ ತೇರು.
ಕಣಜ ತುಂಬಿ ತುಳುಕಿ ಹಿಗ್ಗಿ
ನಾಡಿಗೊದಗಿ ಬಂತು ಸುಗ್ಗಿ.

ಪ್ರತಿ ಯುಗಾದಿ ವಿಜಯದೊಸಗೆ
ಸತ್ವ ರಜೋಗುಣದ ಬೆಸುಗೆ
ಅಸುರ ವಧೆಯ ವೀರಗಾಥೆ
ಕನ್ನಡಿಗರ ಗೆಲವ ಗೀತೆ.

ಎರಡು ದಿನದ ಹಬ್ಬದಂದು
ಬೆಳಕಿನಲ್ಲಿ ಬಾಳು ಮಿಂದು
ಮೊದಲ ಚಂದ್ರ ವೀಕ್ಷಣೆ
ಜನಕೆ ತರಲಿ ರಕ್ಷಣೆ.

◆ ‘ಯುಗಾದಿ : ೧೯೯೦’ 
ಕವಿತೆಯ ಎರಡು ಪದ್ಯಗಳು

ಹಳೆ ಯುಗಾದಿಯ ಹಾದಿ ಈ ಯುಗಾದಿಯು ಹಿಡಿದು
ಏರಿದೆ ಭವಾದ್ರಿಯನು ಏದಿ, ಏದಿ.
ಯಾವ ಉಡುಗೊರೆ ಜಗಕೆ ನೀಡಲಿಹುದೋ ಕಾಣೆ
ಪ್ರಮೋದೂತ ನಾಮದ ಸ್ವೈರತಾಮೋದಿ.

ಚೈತ್ರ ಮಾಂತ್ರಿಕ ಸ್ಪರ್ಶಕೆಲ್ಲ ಉದ್ಯಾನವನ
ಪಲ್ಲವಿಸಿ, ಕರೆಯೋಲೆ ಕಳಿಸುವಂತೆ-
ಸೌಭಾಂಗ್ಯ ಪಕ್ಷಿಕುಲ ಪ್ರತಿ ಬಾಳ್ವೆಯಲಿ ಸಂದು
ಹೊಸ ವರ್ಷ ನೆರೆಸಿರಲಿ ಸೊಗದ ಸಂತೆ.

(ಕೃಪೆ: ಸಮಗ್ರ ಕವಿತೆಗಳು)

◆ ಜಿ.ಎಸ್.ಶಿವರುದ್ರಪ್ಪ ಅವರ 
      ‘ಯುಗಾದಿಯ ಹಾಡು’

ಬಂದ ಚೈತ್ರದ ಹಾದಿ ತೆರೆದಿದೆ
ಬಣ್ಣ-ಬೆಡಗಿನ ಮೋಡಿಗೆ
ಹೊಸತು ವರ್ಷದ ಹೊಸತು ಹರ್ಷದ
ಬೇವು-ಬೆಲ್ಲದ ಬೀಡಿಗೆ.

ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಆನಂದಕೆ!

ಇದ್ದುದೆಲ್ಲವು ಬಿದ್ದುಹೋದರು
ಎದ್ದು ಬಂದಿದೆ ಸಂಭ್ರಮ.
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.

ಒಳಿತು ಕೆಡುಕೋ ಏನು ಬಂದರು
ಇರಲಿ ಎಲ್ಲಕು ಸ್ವಾಗತ
ಸ್ಪರ್ಧೆಯಿಲ್ಲದ ಶ್ರದ್ಧೆಯೊಂದೇ
ಸ್ಫೂರ್ತಿಯಾಗಲಿ ಸಂತತ.

ಹಳತು-ಹೊಸತೂ ಕೂಡಿ ಮೂಡಿಸುವಂಥ
ಪಾಕವ ನೋಡಿರಿ
ಎಲ್ಲ ರುಚಿಗೂ ರಸನೆಯಾಗುತ
ಪುಟ್ಷಿಗೊಳ್ಳುತ ಬಾಳಿರಿ.

ಯುಗ ಯುಗಾದಿಗೆ ಹೊಸತು ಹರ್ಷವು
ಬರಲಿ, ಬಾರದೆ ಹೋಗಲಿ;
ಬಂದ ಚೈತ್ರ ಚಿಗುರಿನಂದದ
ಮಂದಹಾಸವೆ ಉಳಿಯಲಿ.

◆ ‘ಯುಗಾದಿಯ ಪ್ರಶ್ನೆಗಳು’ 
ಕವಿತೆಯ ಒಂದು ಪದ್ಯ

ನಾನು, ನನ್ನಪ್ಪ, ಅವರಪ್ಪನಪ್ಪ,
ಮಗ, ಮೊಮ್ಮೊಗ, ಮರಿಮಗ, ಗಿರಿಮಗ
ಈ ಗಿರಿಗಿರಿ ತಿರುಗವೀ ಪುನರಪಿ
ಜನನಂ ಪುನರಪಿ ಮರಣಂ ಚಕ್ರ
ಗತಿಯೊಳಗೆ ದಿನಾ ಬೆಳಕಿಗೆ ಎದ್ದು
ಕತ್ತಲೆಗೆ ಬಿದ್ದು ಸುತ್ತುತ್ತಲೇ ಇರುವ
ಈ ಭವ ಭವದ ಮಧ್ಯೆ ಪ್ರಭವ
ನಾಮ ಸಂವತ್ಸರದಲ್ಲಿ ನಿಂತಿರುವ ಈ ನನಗೆ
ಯಾವುದು ಮೊದಲು, ಯಾವುದು ಕೊನೆ?

(ಕೃಪೆ: ಸಮಗ್ರ ಕಾವ್ಯ)

◆ ಎಚ್.ಎಸ್.ವೆಂಕಟೇಶಮೂರ್ತಿ 
       ಅವರ ‘ಯುಗಾದಿ’

ನಾವು ನಮ್ಮೂರಿಂದ
ನಿಮ್ಮ ಊರಿಗೆ ಹೊರಟ ದಾರಿಯಲ್ಲಿ
ಇದು ಒಂದು ಮೈಲಿಗಲ್ಲು!
ಸಿರಿವಂತ ಕಾರಿನಲಿ,
ಬಡವ ಬರಿಗಾಲಿನಲಿ
ನಡೆದು ಬಂದುದು ಇದೇ ದಾರಿಯಲ್ಲಿ!

ಇಂಥ ಒನ್ ವೇ ಟ್ರಾಫಿಕ್ಕಿನಲ್ಲಿ
ಕಲ್ಲು ಹೂಗಳ ಚೆಲ್ಲಿ,
ಮುಳ್ಳು ಮರಗಳ ನೆಟ್ಟು,
ಅದರ ನಡುವೆಯೆ ಮಧುರ ಸವಿಜೇನ ಹಲ್ಲೆಗಳ
ಜೋಲಿಯಾಡಲು ಬಿಟ್ಟು,
ದಾರಿಯಲಿ ಅಲ್ಲಲ್ಲಿ,
ಗುಂಡಿಗಳ ತೋಡಿ,
ಮೇಲೆ ಹುಲ್ಲನು ಹಾಸಿ
ಜೀವಿಗಳ ಖೇಡ್ಡಾ ನೋಡುವ ಸಾರಿಗೇ ಸಂಸ್ಥೆಯ ಒಡೆಯ
ಯಾರೆಂಬುದೇ ಯಾರೂ ಅರಿಯದಂತಹ ಗುಟ್ಟು!
ಅದು ರಟ್ಟಾಗದಂತೆ
ಮುಂದೆ ಇಬ್ಬನಿ ತುಂಬಿ ದಟ್ಟವಾಗಿದೆಯಂತೆ!

ಇಷ್ಟು ದೂರವ ಹೇಗೋ ನಡೆದು ಬಂದೆವು ನಾವು.
ನಮ್ಮ ಕಣ್ಣೆದುರಿಗೇ ಬಿದ್ದವರು ಬಿದ್ದರು.
ಬಿಸಿಲಿನಲಿ, ಮಳೆಯಲ್ಲಿ
ರಾತ್ರಿಯಲಿ ಹಗಲಲ್ಲಿ
ನಡೆದಿದ್ದೆ ನಡೆದಿದ್ದು
ಹತ್ತಿದ್ದು, ಇಳಿದಿದ್ದು,
ಮುಗ್ಗುರಿಸಿ ಬಿದ್ದು ಎದ್ದದ್ದು,
ಹೊಸ ಹೊಣೆಯ ಹೆತ್ತದ್ದು, ಹೊತ್ತದ್ದು,
ಮಳೆಯಲ್ಲಿ ನೆಂದು ಬಿಸಿಲಲ್ಲಿ ಒಣಗಿ

ಆದರೂ ಹೆಣಗಿ
ಮುಳ್ಳು ಮರದಡಿಯೇ ತುಸು ಮಲಗಿ
ಮಗುವಾಗಿ
ಆತ್ತು ನಕ್ಕಿದ್ದು!

-ಎಲ್ಲಾ ಇಂದು ಹೆಗಲ ಮೇಲಿನ ಗಟ್ಟಿ ಪೆಟ್ಟಿಗೆಯ ತಳದಲ್ಲಿ ನುಸಿ ಹಿಡಿದು ನವೆಯುತ್ತ
ಅಲ್ಲೊಂದು ಇಲ್ಲೊಂದು ಉಳಿದಿದ್ದು!
ಹಳೆಯ ಫೈಲಿನ ಮಸುಕು ಹಾಳೆಯಂತೆ.

ಮಂಜು ಆವರಿಸಿರುವ ಮುಂದಿರುವ ದಾರಿಯಲಿ
ನಡೆದವರೆ ಇಲ್ಲ!
ಇನ್ನು ನಡೆ-ನಡೆದಂತೆ ಹೆಜ್ಜೆ-ಹೆಜ್ಜೆಯ ಗುರುತು
ಹೂವಾಗಿ ಅರಳಬೇಕು!
ಅಥವಾ-
ಹಾವಾಗಿ ಹೊರಳಬೇಕು!

ಬಗೆಬಗೆಯ ಆ ಗುರುತ
ನನ್ನ ಕೈ ಕ್ಯಾಮರದಿ ಹಿಡಿಯಬೇಕು!
ಅದಕಾಗಿಯೇ ನೀವು, ನಾವು ಅವರೂ ಕೂಡ
ಮುಂದೆ ಸಿಗಬಹುದಾದ ಮೈಲುಗಲ್ಲಿನವರೆಗೆ
ನಡೆಯಬೇಕು!

(ಕೃಪೆ: ಮೂವತ್ತು ಮಳೆಗಾಲ, ಸಂಪುಟ-೧)