Sunday, October 02, 2022

ಗಾಂಧೀಜಿಯವರ ಬಗ್ಗೆ ಅಭಿಪ್ರಾಯಗಳು

"ಗಾಂಧೀಜಿಯವರ ಸಮಸ್ಯೆ ಎಂದರೆ ಅವರು ಪೂರ್ಣ ಸತ್ಯವನ್ನು ಹೇಳುತ್ತಾರೆ. ಅದನ್ನು ತಡೆದುಕೊಳ್ಳುವ ಶಕ್ತಿ ಸಮಾಜಕ್ಕೆ ಇಲ್ಲ."- ಡಾ.ಬಿ.ಆರ್.ಅಂಬೇಡ್ಕರ್

" ದಿನದಲಿತರ ಗುಡಿಸಲುಗಳ ಮುಂದೆ ತಲೆಬಾಗಿ ನಿಂತ ಮಹಾತ್ಮನೀತ." - ರವೀಂದ್ರನಾಥ ಠಾಗೋರ್

"ಹೆಣ್ಣು ಮತ್ತು ದೇವರು ನನ್ನ ಬದುಕಿನ ಎರಡು ಮುಖ್ಯ ಕಾಳಜಿಗಳಾಗಿದ್ದವು. ನನಗೆ ಹೆಣ್ಣು ಸಿಗಲಿಲ್ಲ, ದೇವರು ಸಿಗಲಿಲ್ಲ. ಆದರೆ ಹೆಣ್ಣು ಮತ್ತು ದೇವರು ಈ ಇಬ್ಬರ ಸೆಳಕುಗಳ ಸಂಗಮವನ್ನು ನಾನು ಮಹಾತ್ಮ ಗಾಂಧೀಜಿಯವರಲ್ಲಿ ಕಂಡೆ."- ಡಾ.ರಾಮ ಮನೋಹರ ಲೋಹಿಯಾ

" ಬಹುಶಃ ಬುದ್ದನ ನಂತರ ಜಗತ್ತು ಕಂಡ ಅಪೂರ್ವ ವ್ಯಕ್ತಿ ಗಾಂಧಿ." - ಜಾನ್ ಗುಂಥರ್

"ಇಂತಹ ಒಂದು ಚೈತನ್ಯ ದೇಹಧಾರಿಯಾಗಿ ಈ ಭೂಮಿಯ ಮೇಲೆ ನಡೆದಾಡಿತ್ತು ಎಂದು ಮುಂದಿನ ಜನಾಂಗ ನಂಬಲಾರದಂತಹ ವ್ಯಕ್ತಿ ಗಾಂಧಿ." - ಆಲ್ಬರ್ಟ್‌ ಐನ್ ಸ್ಟೀನ್

"ಸಮುದ್ರದ ಒಂದು ಹಿಡಿ ಉಪ್ಪು ತೆಗೆದು ಗಾಂಧಿ ಬ್ರಿಟಿಷರಿಗೆ ಹಾಕಿದ ಸವಾಲು, ಮಹರ್ ಸರೋವರದಿಂದ ಒಂದು ಬೊಗಸೆ ನೀರಿನ್ನು ಎತ್ತಿದ ಅಂಬೇಡ್ಕರ್ ಈ ಇಡೀ ಹಿಂದೂ ಸಮಾಜಕ್ಕೆ ಹಾಕಿದ ಸವಾಲು."- ಜಿ.ಕೆ.ಗೋವಿಂದರಾಯ

"ಬ್ರಿಟಿಷರ ಸಿಂಹ ಕೂಡ ಗಾಂಧಿಯ ಮೇಕೆಯನ್ನು ಕಂಡು ಓಡಿಹೋಗುವುದು."- ಮಿಕೇಲ್ ನೋಯ್ಮಾ(ಅರಬ್ ಕವಿ)

" ಗಾಂಧಿಯವರ ಬದುಕಿನ ಅರ್ಥ ತಿಳಿಯಲು ಅವರ ಜೀವನ ಹಾಗೂ ಕಾರ್ಯಕ್ರಮಗಳಿಗೆ ಹೋಗಬೇಕೆ ಹೊರತು, ಅವರ ಮಾತು ಹಾಗೂ ಬರವಣಿಗೆಗಳಿಗಲ್ಲ."- ಲೋಹಿಯಾ

"ಗಾಂಧೀಜಿಯವರ ಜೀವನ ಹಾಗೂ ಗುರಿಗಳನ್ನು ಸಮಾಜವಾದದ ವಸ್ತ್ರದೊಡನೆ ನೇಯ್ದರೆ ನವೀನ ಸಮಾಜವೊಂದು ನಿರ್ಮಾಣವಾದೀತು."- ಲೋಹಿಯಾ

" ಗಾಂಧಿಯವರು ಬರೆದ ಒಂದೇ ಒಂದು ತತ್ವ ಅಥವಾ ತರ್ಕಬದ್ಧವಾದ ಪ್ರಣಾಳಿಕೆ ಎಂದರೆ, ಯಾರಾದರೂ ಅಪರೂಪವಾಗಿ ಓದುವ 'ಹಿಂದ್ ಸ್ವರಾಜ್' ಒಂದೇ. ಗಾಂಧಿಯವರು ಭಾರತೀಯರನ್ನು ಹಾಗೂ ಜಗತ್ತನ್ನು ಪ್ರಭಾವಿತಗೊಳಿಸುವುದು ತಮ್ಮ ವ್ಯವಸ್ಥಿತ ಬರವಣಿಗಳಿಂದ ಅಲ್ಲವೇ ಅಲ್ಲ! ಅವರ ಜೀವನ ವಿಧಾನ ಮತ್ತು ಕಾರ್ಯಗಳಿಂದ ಮಾತ್ರ."- ಲೋಹಿಯಾ

"ಅಣುಬಾಂಬ್ ಮತ್ತು ಗಾಂಧೀಜಿ ಈ ಶತಮಾನದ ಎರಡು ಅಧ್ಬುತಗಳು. ಅಣುಬಾಂಬ್ ಒಂದು ನಾಗರಿಕತೆಯ ಅವನತಿಗೆ ಪ್ರತೀಕವಾದರೆ, ಗಾಂಧೀಜಿ ಅಲ್ಲೇ ಹೊಸ ಚಿಗುರು ಕಾಣಿಸಿಕೊಂಡಿರುವುದರ ಸಂಕೇತ."- ಲೋಹಿಯಾ

" ಮಾನವ ಸಂಕುಲದ ಅಭ್ಯುದಯವಾಗಬೇಕೆಂದರೆ ಅಲ್ಲಿ ಗಾಂಧಿ ಇರಲೇಬೇಕು. ಮಾನವೀಯತೆಯ ಬೆಳಕಿನಲ್ಲಿ ವಿಶ್ವಶಾಂತಿ ಮತ್ತು ಸೌಹಾರ್ದಯುತ ಬಾಳ್ವೆಯನ್ನು ಅವರು ಕೇವಲ ಪ್ರತಿಪಾದಿಸಲಿಲ್ಲ, ಅದರಂತೆ ಬಾಳಿ ತೋರಿಸಿ, ಜಯ ಗಳಿಸಿದರು. ಅವರನ್ನು ಕಡೆಗಣಿಸುವುದೆಂದರೆ ನಮ್ಮ ಬದುಕನ್ನು ಗಂಡಾಂತರಕೊಡ್ಡಿದಂತೆ."- ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

"ಬುದ್ಧನ ನಂತರ ಭಾರತವು ಯಾವ ವ್ಯಕ್ತಿಯನ್ನೂ ಇಷ್ಟು ದೈವೀಕವಾಗಿ ಕಂಡಿರಲಿಲ್ಲ. ಸರಳ ಬದುಕು, ಶತ್ರುಗಳನ್ನೂ ಆದರಿಸುವ, ವಿಷಯಾಸಕ್ತರಲ್ಲದ, ಅಪರಿಗ್ರಹಿ ಈ ಗಾಂಧಿ. ತನ್ನ ತತ್ವ ಸಿದ್ದಾಂತ, ಬಾಳ್ವೆಯ ಮೂಲಕ ಇಡೀ ವಿಶ್ವವನ್ನೇ ಬೆರಗಾಗಿಸಿದ ಶಾಂತಿಯುತ ಕ್ರಾಂತಿಕಾರಿ ಸಂತ."- ವಿಲ್ ಡ್ಯೂರಾಂಡ್ (ಅಮೇರಿಕನ್ ಲೇಖಕ, ಇತಿಹಾಸಕಾರ, ತತ್ವಜ್ಞಾನಿ)

" ಮಹಾತ್ಮಾ ಗಾಂಧಿ ಒಬ್ಬ ಮಹಾನ್ ವ್ಯಕ್ತಿ. ಅವರಿಗೆ ಮನುಷ್ಯರ ಗುಣಾಣುಗುಣಗಳ ಆಮೂಲಾಗ್ರ ತಿಳವಳಿಕೆ ಇದ್ದಿತು. ಅವರು ವ್ಯಕ್ತಿಗಳ ಸಕಾರಾತ್ಮಕ ಗುಣಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಮೂಲಕ ಸಮಾಜದಲ್ಲಿನ ನಕಾರಾತ್ಮಕ ಆಲೋಚನೆಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರು. ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಅವರ ಜೀವನಕ್ರಮದಿಂದ ಸ್ಪೂರ್ತಿ ಪಡೆದಿದ್ದೇನೆ."- ದಲಾಯ್ ಲಾಮಾ(ಟಬೆಟಿಯನ್ನರ ಧರ್ಮಗುರು)

"ನನಗೆ ನಿಮ್ಮ ಕುರಿತು ಅದೆಂಥದೋ ಒಂದು ವಿಶೇಷ ಸೆಳೆತ. ನಿಮ್ಮ ನಿಲುವು, ಆದರ್ಶ, ಮಾತುಗಾರಿಕೆ, ಜೀವನ ಶೈಲಿ ನಮ್ಮನ್ನು ಆಪ್ತರನ್ನಾಗಿಸುವುದಲ್ಲದೆ, ನಾವು ಈ ವಿಶ್ವದ ಚಿಕ್ಕ ಕುಟುಂಬದಲ್ಲಿದ್ದೇವೆ ಎಂಬ ಆಪ್ಯಾಯ ಭಾವನೆ ಆವರಿಸಲು ಕಾರಣರಾಗಿದ್ದೀರಿ." - ಜಾರ್ಜ್ ಬರ್ನಾರ್ಡ್ ಷಾ

Wednesday, September 14, 2022

ಕವಿತೆ

ಮುತ್ತುಗಳ ಲೆಕ್ಕವಿಡಬೇಡ
ಮೆತ್ತಗೆ ನೀನುಸಿರದ ಮಾತು
ಮತ್ತೆ ಮತ್ತೆ ಮಾರ್ದನಿಸುತ್ತದೆ
ಅಂದು ನಾವು ಸೇರಿದ ಇರುಳು
ಬಾನಿಗೂ ಉಬ್ಬರ!
ಗುಡುಗು, ಮಿಂಚು ಮೌನ 
ಮೀರುವ ಅಬ್ಬರದ ನಡುವೆ
ಸುರಿವ ಮಳೆಹನಿಯಂತೆ ಮುತ್ತು
ಧಾರೆಯಾಗಿ ಸುರಿಯುತ್ತಲಿತ್ತು
ಲೆಕ್ಕ ಮೀರಿತು ಎಂದವಳಿಗೆ
ಮತ್ತದೇ ಉತ್ತರ ಲೆಕ್ಕವಿಡಬೇಡ
ಮುಟ್ಟುವುದು, ಬೆತ್ತಲಾಗುವುದು
ಲೆಕ್ಕವನು ಮೀರಿದ್ದು 
ಆತ್ಮದ ಬೆಸುಗೆಗಲ್ಲದೇ ದೇಹ
ಬೆಸೆದುಕೊಳ್ಳುವುದೆ? ನಿನ್ನ
ಒಡಲೊಳಗೆ ನಾನು ನದಿಯಂತೆ
ಹರಿದಾಗ ಕ್ಷಣಕ್ಷಣವೂ ತುಂಬಿ
ಕೊಂಡೆ ಆಳ ಅಗಾಧಗಳನು
ಹೊರಲೋಕದ ಗೊಡವೆ ಮೀರಿದ
ಆ ರಾತ್ರಿಯಲಿ ದಿಗ್ಗನೆ ಬೆಳಕು
ಮನದೊಳಗೆ ಹೊತ್ತಿ ಬೆರಳು
ಹೊಸಪದವೊಂದನು ಟಂಕಿಸಿತು
ಬೆಳಕಿನ ರಾತ್ರಿ

Friday, May 20, 2022

ಸದ್ದಿಲ್ಲದೇ ಸಮಾಜಸೇವೆ ಮಾಡುತ್ತಿರುವ ಜಿ. ಎಸ್. ಜಯದೇವ

ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ ಮತ್ತು ರುದ್ರಾಣಿಯವರ ಮಗನಾಗಿ 1951ರಲ್ಲಿ ಜನಿಸಿದ ಜಿ. ಎಸ್. ಜಯದೇವ ಅವರು ಪ್ರಚಾರಗಳಿಂದ ದೂರವಿರುವ ಸಾಮಾಜಿಕ ಕಾರ್ಯಕರ್ತರು. ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಮೈಸೂರಿನ ಪ್ರತಿಷ್ಠಿತ ಜೆ.ಎಸ್.ಎಸ್. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸವನ್ನು ನಿರ್ವಹಿಸಿದವರು. ಮ್ಯಾಗ್ಸೆಸೆ ಪ್ರಶಸ್ತಿ ವಿಜೇತರಾದ ಡಾ. ಸುದರ್ಶನ ಅವರ ಸಂಪರ್ಕಕ್ಕೆ ಬಂದ ಅವರು ತಮ್ಮ ಉದ್ಯೋಗವನ್ನು ತ್ಯಜಿಸಿ, ಗಿರಿಜನರ ಮತ್ತು ದೀನದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡರು. ಮೈಸೂರಿನ ಸುತ್ತಮುತ್ತಲ ಗಿರಿಜನರೊಡನೆ ಸಂಪರ್ಕವನ್ನಿಟ್ಟುಕೊಂಡು ಅವರ ಸಂಕಷ್ಟಗಳನ್ನು ಅರಿತರು. ಚಾಮರಾಜನಗರದ ಅನೇಕ ಸರಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡು ಅಲ್ಲಿನ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದರು.

ಅನಾಥ ಮಕ್ಕಳ ದುಃಖಕ್ಕೆ ಮರುಗಿದ ಅವರು ಮಕ್ಕಳಿಗಾಗಿ ದೀನ ಬಂಧು ಮಕ್ಕಳ ಮನೆ ಎಂಬ ಅನಾಥಾಶ್ರಮವನ್ನು ತೆರೆದರು. ಬಾಡಿಗೆ ಕಟ್ಟಡದಲ್ಲಿ ಮಕ್ಕಳನ್ನು ಪೋಷಿಸುತ್ತಾ, ಅವರ ಸಮಗ್ರ ಕಲ್ಯಾಣಕ್ಕಾಗಿ ದೀನಬಂಧು ಟ್ರಸ್ಟ್ ಶ್ರಮಿಸುತ್ತಿದೆ. ಚಾಮರಾಜನಗರದಲ್ಲಿಂದು ಇಂತಹ ನಾಲ್ಕು ಮಕ್ಕಳ ಮನೆಗಳಿದ್ದು, ಪ್ರತಿ ಮನೆಯಲ್ಲಿಯೂ ಹನ್ನೆರಡು ಮಕ್ಕಳು ಮದರ್ ಅಥವಾ ಫಾದರ್ ಎಂಬ ಪೋಷಕರೊಂದಿಗೆ ವಾಸಿಸುತ್ತಾರೆ. ಈ ಮಕ್ಕಳ ಸೃಜನಶೀಲ ಶಿಕ್ಷಣಕ್ಕಾಗಿ ಅವರು ರಾಮಸಮುದ್ರದಲ್ಲಿ ಒಂದು ಶಾಲೆಯನ್ನು ಕೂಡಾ ತೆರೆದಿದ್ದಾರೆ.

ಹೆಣ್ಣುಮಕ್ಕಳ ಶಿಕ್ಷಣ ಮತ್ತು ಸ್ವಯಂಉದ್ಯೋಗ ಕಲಿಕೆಗಾಗಿ ಅವರು ಹೆಣ್ಣುಮಕ್ಕಳ ಹಸಿರುಮನೆ ಶಿಕ್ಷಣ ಕಾರ್ಯಕ್ರಮ ಎಂಬ ಯೋಜನೆಯನ್ನು ರೂಪಿಸಿದ್ದಾರೆ. ಪರಿಸರದ ಬಗ್ಗೆಯೂ ಅವರದು ಕೊನೆಯಿಲ್ಲದ ಕಾಳಜಿ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಬಿಳಿಗಿರಿರಂಗನ ಬೆಟ್ಟದ ಜೀವವೈವಿಧ್ಯಗಳ  ದಾಖಲಾತಿ ಕಾರ್ಯಕ್ರಮದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಮೈಸೂರಿನ ಶಕ್ತಿಧಾಮ ಎಂಬ ಮಹಿಳೆಯರ ಪುನರ್ವಸತಿ ಕೇಂದ್ರದ ಕಾರ್ಯನಿರ್ವಾಹಕ ಧರ್ಮದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿವೇಕಾನಂದ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಹೌದು.

ಪ್ರಸಿದ್ಧ ಕವಿಯ ಪುತ್ರನಾದ ಜಯದೇವ ಅವರು ಉತ್ತಮ ಲೇಖಕರೂ ಹೌದು. ಶಕ್ತಿಧಾಮದ ಸತ್ಯ ಕಥೆಗಳು, ಮಕ್ಕಳ ಬೆಳವಣಿಗೆ ಮತ್ತು ನಾವು, ಹಳ್ಳಿಹಾದಿ ಇವು ಅವರು ರಚಿಸಿದ ಕೃತಿಗಳು. ಗಾಂಧೀಜಿಯವರ ಗ್ರಾಮಭಾರತದ ಕನಸನ್ನು ನನಸಾಗಿಸಲು ಶ್ರಮಿಸುತ್ತಿರುವ ಅವರಿಗೆ 2019ರಲ್ಲಿ ಪ್ರತಿ಼ಷ್ಠಿತ ಮಹಾತ್ಮಗಾಂಧಿ ಸೇವಾರತ್ನ ಪ್ರಶಸ್ತಿ ದೊರಕಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಅರ್ಹವಾಗಿಯೇ ಸಂದಿವೆ. 

Thursday, May 19, 2022

ಹಳ್ಳಿಗಳ ಆತ್ಮಕಥನ ಬರೆಯುತ್ತಿರುವ ಪಿ. ಸಾಯಿನಾಥ

ಮಾಧ್ಯಮವೆಂದರೆ ಟಿ. ಆರ್. ಪಿ. ಎಂದು ಎಲ್ಲರೂ ನಂಬುತ್ತಿರುವಾಗ ಇವರು ಮಾಧ್ಯಮವೆಂದರೆ ಬಹುಜನರ ನೈಜಬದುಕನ್ನು ಅರ್ಥಮಾಡಿಕೊಳ್ಳುವುದು ಎಂದರು. ರಾಜಕಾರಣಿಗಳ ವಿಚಾರಗಳನ್ನು, ವಿವರಗಳನ್ನು ಜನರಿಗೆ ತಿಳಿಸುವುದೇ ಪತ್ರಿಕೋದ್ಯಮ ಎಂದಾಗ ಇವರು ಭಾರತದ ಅದ್ಯಾವುದೋ ಹಳ್ಳಿಯ ಮೂಲೆಯ ಜನರ ತಲ್ಲಣವನ್ನು ರಾಜಕಾರಣಿಗಳಿಗೆ ಕೇಳಿಸುವ ಧಾವಂತದಲ್ಲಿದ್ದರು. ಪ್ರಸಿದ್ಧ ಪತ್ರಕರ್ತರೆಲ್ಲಾ ನಗರದಲ್ಲಿ ಸ್ಥಿರವಾಗಲು ಯತ್ನಿಸುತ್ತಿರುವಾಗ ಇವರು ನಗರಕ್ಕೆ ಬೆನ್ನು ತಿರುಗಿಸಿ ಗ್ರಾಮಭಾರತದೆಡೆಗೆ ಮುಖಮಾಡಿದರು. ಬರವೆಂದರೆ ಜನರಿಗೆ ಕಷ್ಟ ಎಂದು ಹಾಡಿದ ರಾಗವನ್ನೇ ವರದಿಗಾರರು ಹಾಡುತ್ತಿದ್ದಾಗ ಬರದ ನಾಡಿನ ಬಹು ಆಯಾಮಗಳನ್ನು ಸಂಗ್ರಹಿಸಿ  'ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂಬ ಅದ್ಭುತ ಪುಸ್ತಕವನ್ನು ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದರು. ಪಿ. ಸಾಯಿನಾಥ ಎಂಬ ಪತ್ರಕರ್ತರೊಬ್ಬರ ಸಾಹಸಯಾನವಿದು.

ಭಾರತದ ರಾಷ್ರ್ಟಾಧ್ಯಕ್ಷರಾಗಿದ್ದ ವಿ.ವಿ.ಗಿರಿಯವರ ಮೊಮ್ಮಗನಾದ ಸಾಯಿನಾಥ ಅವರು ಜನಿಸಿದ್ದು 1957ರಲ್ಲಿ, ಮದ್ರಾಸಿನಲ್ಲಿ. ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಅವರು ದೆಹಲಿಯ ಜೆ. ಎನ್ ಯು. ಕಾಲೇಜಿನಲ್ಲಿ ಇತಿಹಾಸವನ್ನು ಅಭ್ಯಾಸ ಮಾಡಿದರು. ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಳೆದುಹೋಗಬಹುದಾದ ಅವರು ಆಕಸ್ಮಿಕವಾಗಿ ಪತ್ರಿಕೋದ್ಯಮದ ಕಡೆಗೆ ಹೊರಳಿದರು. ಯು.ಎನ್. ಐ. ಸುದ್ಧಿ ಸಂಸ್ತೆ ಹಾಗೂ ದ ಡೈಲಿ ಪತ್ರಿಕೆಯ ವಿದೇಶ ಸಂಪಾದಕರಾಗಿ ಕೆಲಸ ಮಾಡಿದರು. ಗೆಳೆಯ ಸುಧೀಂದ್ರ ಕುಲಕರ್ಣಿಯವರೊಂದಿಗೆ ಸೇರಿ ಜಗತ್ತಿನ ಮಾಧ್ಯಮಗಳ ಹುಳುಕುಗಳನ್ನು ಬಯಲಿಗೆಳೆಯುವ 'ಕೌಂಟರ್ ಮೀಡಿಯಾ' ಎಂಬ ಪತ್ರಿಕೆಯನ್ನೂ ಕೆಲಕಾಲ ಹೊರತಂದರು. 'ಬ್ಲಿಟ್ಸ್' ಪತ್ರಿಕೆಯ ಉಪಸಂಪಾದಕರಾಗಿಯೂ ಕೆಲಸ ನಿರ್ವಹಿಸಿದರು. ಆಗಲೇ ದೇಶದ ಹತ್ತು ರಾಜ್ಯಗಳು ಭೀಕರ ಬರದ ದವಡೆಗೆ ಸಿಕ್ಕಿ ನರಳುತ್ತಿದ್ದವು. ಸಾಯಿನಾಥ ಅವರಿಗೆ ತನ್ನ ಕೆಲಸವಿರುವುದು ಅಂತಹ ಜಾಗದಲ್ಲಿ ಅನಿಸತೊಡಗಿತು. 'ಬ್ಲಿಟ್ಸ್' ಗೆ ರಾಜೀನಾಮೆ ರವಾನಿಸಿ ಹಳ್ಳಿಗಳೆಡೆಗೆ ಹೊರಟೇಬಿಟ್ಟರು. ಹತ್ತು ವರ್ಷಗಳ ಪತ್ರಿಕೋದ್ಯಮದ ಅನುಭವದಲ್ಲಿ ಅವರಿಗೆ ತೀವ್ರವಾಗಿ ಅನಿಸಿದ್ದೆಂದರೆ ಭಾರತದ ಮೂರನೇ ಎರಡರಷ್ಟಿರುವ ಗ್ರಾಮೀಣ ಭಾರತವನ್ನು ಯಾವ ಮಾಧ್ಯಮಗಳೂ ಸ್ಪರ್ಶಿಸುತ್ತಿಲ್ಲವೆಂಬ ಕಹಿಸತ್ಯ. ಟೈಮ್ಸ್ ಆಫ್ ಇಂಡಿಯಾದ ಫೆಲೋಶಿಪ್ ಪಡೆದ ಅವರು ಗ್ರಾಮಭಾರತದಲ್ಲಿ ಸುಮಾರು ಒಂದು ಲಕ್ಷ ಕಿ. ಮೀ. ದೂರವನ್ನು 16 ವಿವಿಧ ಸಾರಿಗೆ ವ್ಯವಸ್ಥೆಯ ಮೂಲಕ ಮತ್ತು 5,000ಕಿ. ಮೀ. ದೂರವನ್ನು ಕಾಲ್ನಡಿಯಿಂದ ಕ್ರಮಿಸಿದರು. ಗ್ರಾಮಭಾರತದ ಆತ್ಮಕಥನವನ್ನು ಹೊರಜಗತ್ತಿಗೆ ಬಗೆದು ತೋರಿದರು. ಅಲ್ಲಿ ವಲಸೆಯ ತಲ್ಲಣಗಳು, ದಲಿತರ ಸಂಕಷ್ಟ, ಆದಿವಾಸಿಗಳ ತಲ್ಲಣ, ಪ್ರಕೃತಿಪ್ರೇಮ, ಕೂಲಿಗಳ ಶೋಷಣೆ, ಹೆಣ್ಣುಗಳ ಗಟ್ಟಿತನ, ಉಳ್ಳವರ ದರ್ಪ, ಆಳುವವರ ವಂಚನೆ ಹೀಗೆ ಚಿತ್ರವಿಚಿತ್ರ ಕಥಾನಕಗಳಿದ್ದವು. ಹಾಗೆ ಬರೆದ ಕಥೆಗಳನ್ನೆಲ್ಲ ಒಂದುಗೂಡಿಸಿ 'ಎವರಿಬಡಿ ಲವ್ಸ್ ಅ ಗುಡ್ ಡ್ರಾಟ್' ಎನ್ನುವ ಪುಸ್ತಕವನ್ನು ಬರೆದರು. ಈ ಅಪೂರ್ವ ಕೆಲಸಕ್ಕಾಗಿ ಅವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ದೊರೆಯಿತು. ನಲವತ್ತಕ್ಕಿಂತ ಹೆಚ್ಚು ಮುದ್ರಣಗಳನ್ನು ಕಂಡ ಈ ಪುಸ್ತಕ ಭಾರತದ ಹತ್ತಕ್ಕಿಂತಲೂ ಹೆಚ್ಚು ಭಾಷೆಗೆ ಅನುವಾದಗೊಂಡಿದೆ. ಭಾರತದ ನಕಾಶೆಯಲ್ಲಿ ಮಾತ್ರವೇ ಇದ್ದ ಹಳ್ಳಿಗಳಿಗೆ ಪ್ರಧಾನಿಯೂ ಸೇರಿದಂತೆ ರಾಜಕಾರಣಿಗಳು ಭೇಟಿಕೊಡುವಂತಾಯಿತು. ತಮಿಳುನಾಡು, ಓರಿಸ್ಸಾ ಮೊದಲಾದ ರಾಜ್ಯಗಳು ತಮ್ಮ ಆಡಳಿತ ಪಾಲಿಸಿಗಳಲ್ಲಿ ಅವರ ಕ್ಷೇತ್ರಕಾರ್ಯಗಳ ಫಲಿತವನ್ನು ಅಳವಡಿಸಿಕೊಳ್ಳುವಂತಾಯಿತು. ಈ ಪುಸ್ತಕವನ್ನು ಜಿ. ಎನ್. ಮೋಹನ್ ಅವರು 'ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಸಾಯಿನಾಥ ಕೇವಲ ಹಳ್ಳಿಗಳ ಬಗ್ಗೆ ಮಾತ್ರವೇ ಚಿಂತಿಸಿದವರಲ್ಲ. ಹಳ್ಗಳಿಳಿಂದ ಹೊರತಳ್ಳಲ್ಪಟ್ಟ ದಲಿತರ ಬಗ್ಗೆ 'ದಿ ಹಿಂದೂ' ಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಬರೆದರು. ಎಲೈಟ್ ನೋಟದ ನಗರಕೇಂದ್ರಿತ ಪತ್ರಕರ್ತರಿಗೆ ಗ್ರಾಮಭಾರತವನ್ನು ನೋಡಬೇಕಾದ ಪರಿಕ್ರಮಗಳ ಬಗ್ಗೆ ಹೇಳಿಕೊಟ್ಟರು. ಹಾಗೆ ನೋಡುವ ಯುವ ಪತ್ರಕರ್ತರ ಪಡೆಯನ್ನೇ ತನ್ನೊಂದಿಗೆ ಕರೆದೊಯ್ಯತೊಡಗಿದರು. 'ಪತ್ರಿಕೋದ್ಯಮವಿರುವುದು ಜನರಿಗಾಗಿ, ಬಂಡವಾಳಶಾಹಿಗಳಿಗಾಗಿಯಲ್ಲ' ಎಂಬ ಬದ್ಧತೆಯೊಂದಿಗೆ 2014ರಲ್ಲಿ 'ಪೀಪಲ್ ಆರ್ಕೈವ್ ಆಫ್ ರೂರಲ್ ಇಂಡಿಯಾ' ಅಂದರೆ 'ಪರಿ'ಎಂಬ ಮಾಧ್ಯಮಸಂಸ್ತೆಯೊಂದನ್ನು ಹುಟ್ಟುಹಾಕಿದರು. ಗ್ರಾಮೀಣ ಜನರು ಅನುಭವಿಸುತ್ತಿರುವ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ, ಅಲ್ಲಿನ ಪ್ರಸ್ತುತ ವಿದ್ಯಮಾನಗಳು ಮತ್ತು ಜಾಗತೀಕರಣದ ನಂತರದ ಪರಿಣಾಮಗಳ ಬಗ್ಗೆ ಪರಿ ನಿರಂತರ ಶೋಧಗಳನ್ನು ನಡೆಸುತ್ತಾ, ವರದಿಗಳನ್ನು ಪ್ರಕಟಿಸುತ್ತದೆ. ಜೊತೆಯಲ್ಲಿ ಆದಿವಾಸಿ ಜನಾಂಗ ಮತ್ತು ಜಾನಪದ ಲೋಕದಲ್ಲಿ ಮರೆಯಾಗುತ್ತಿರುವ ಅನೇಕ ಮೌಖಿಕ ಕಥಾನಕಗಳನ್ನು ಸಂಗ್ರಹಿಸಿ, ದಾಖಲಿಸಿಡುವ ಕೆಲಸವನ್ನೂ ಮಾಡುತ್ತಿದೆ. ದೇಶವಿದೇಶಗಳ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಸಾಯಿನಾಥ ಸಾರ್ಥಕ ಪತ್ರಿಕೋದ್ಯಮದ ಪಾಠವನ್ನು ಮಾಡುತ್ತಾರೆ.

ಪತ್ರಕರ್ತರಾದವರು ಸರಕಾರದ ಕಾರ್ಯಗಳ ವಿಮರ್ಶಕರೂ ಆಗಿರುವುದರಿಂದ ಸರಕಾರ ಕೊಡುವ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸಬಾರದೆಂಬುದು ಸಾಯಿನಾಥ ಅವರ ಅಭಿಪ್ರಾಯ. ಹಾಗಾಗಿ ಪ್ರತಿಷ್ಠಿತ ಪದ್ಮಭೂಷಣವೂ ಸೇರಿದಂತೆ ಎಲ್ಲ ರಾಜ್ಯ ಮತ್ತು ರಾಷ್ರ್ಟಮಟ್ಟದ ಪ್ರಶಸ್ತಿಗಳನ್ನವರು ನಿರಾಕರಿಸಿದ್ದಾರೆ. ಅವರ ಕಾರ್ಯಯೋಜನೆಗಳಿಗೆ ಸರಕಾರ ಅಥವಾ ಬಂಡವಾಳಗಾರರಿಂದ ನೇರ ಹಣಸಹಾಯವನ್ನೂ ಅವರು ಪಡೆಯುವುದಿಲ್ಲ. ಆದರೆ ಗ್ರಾಮೀಣ ಪ್ರದೇಶದ ವರದಿಗಳ ಬಗೆಗೇ ಅವರಿಗೆ 13ಪ್ರತಿಷ್ಠಿತ ಪ್ರಶಸ್ತಿಗಳು ದೊರಕಿವೆ. 2021ರ ಪುಕವೋಕಾ ಗ್ರ್ಯಾಂಡ್ ಫ್ರೈಜ್ ಅವರಿಗೆ ಸಂದಿದೆ. ಪತ್ರಿಕೋದ್ಯಮ ವಿಭಾಗದಿಂದ ಈ ಪ್ರಶಸ್ತಿ ಪಡೆದ ಮೊದಲಿಗರು ಅವರು. ಯುರೋಪಿಯನ್ ಕಮೀಷನ್ ನೀಡುವ ಲಾರೆಂಜೋ ನೆಟಾಲಿ ಫ್ರೈಜ್ ಪಡೆದ ಮೊದಲ ಭಾರತೀಯರೂ ಹೌದು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ 2009ರಲ್ಲಿ ಅವರನ್ನು ವರ್ಷದ ಪತ್ರಕರ್ತ ಪ್ರಶಸ್ತಿ ನೀಡಿ ಗೌರವಿಸಿದೆ. ಅವರೊಬ್ನ ಉತ್ತಮ ಛಾಯಾಗ್ರಾಹಕರೂ ಹೌದು. ತಮ್ಮ ಕ್ಯಾಮರಾವನ್ನು ಹಳ್ಳಿಗಾಡಿನ ಹೆಂಗಸರ ಕೊರಳಲ್ಲಿ ನೇತಾಡಿಸಿ ಅವರ ಕಣ್ಣಿನಿಂದಲೂ ಚಿತ್ರಗಳನ್ನವರು ಸಂಗ್ರಹಿಸಿದ್ದಾರೆ. ಅವರ 'ವಿಸಿಬಲ್ ವರ್ಕ್, ಇನವಿಸಿಬಲ್ ವುಮೆನ್ ಎಂಡ್ ವರ್ಕ ಇನ್ ರೂರಲ್ ಇಂಡಿಯಾ' ಎಂಬ ಚಿತ್ರಗ್ಯಾಲರಿಯನ್ನು ಆರು ಲಕ್ಷ ಭಾರತೀಯರು ವೀಕ್ಷಿಸಿದ್ದಾರೆ. ಕೆನಡಾದ ಡಾಕ್ಯುಮೆಂಟರಿ ನಿರ್ದೇಶಕ ಜಿಯೋ ಮೌಲಿನ್ಸ್ ಅವರ ಬಗ್ಗೆ ನಿರ್ಮಿಸಿದ ಸಾಕ್ಷಚಿತ್ರವು ಅಂತರಾಷ್ಟ್ರೀಯ ಪಿಲ್ಮ ಫೆಸ್ಟಿವಲ್ ನಲ್ಲಿ ಪ್ರಥಮ ಬಹುಮಾನ ಗಳಿಸಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ  ಭಾರತೀಯ   ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್ ಅವರನ್ನು 'ಸ್ತ್ರೀಲೋಕ ಮತ್ತು ಹಸಿವಿನ ಜಗತ್ತಿನ ಶ್ರೇಷ್ಠ ಪರಿಣಿತ' ಎಂದು ಬಣ್ಣಿಸಿದ್ದಾರೆ. 

ಇಡಿಯ ಜಗತ್ತು ಕೊರೊನಾವೆಂಬ ಸಾಂಕ್ರಾಮಿಕಕ್ಕೆ ಬಲಿಯಾದಾಗಲೂ ಸಾಯಿನಾಥರ ಲೇಖನಿ ಮತ್ತು ಕ್ಯಾಮರಾ ಕ್ವಾರೈಂಟೈನ್ ನಲ್ಲಿರಲಿಲ್ಲ. ಸರಕಾರ ಮತ್ತು ಆಡಳಿತ ಯಂತ್ರಗಳು ಕೊರೊನಾ ನಿಯಂತ್ರಣದಲ್ಲಿ ತೋರಿದ ಲಕ್ಷ, ನಿರ್ಲಕ್ಷ ಎಲ್ಲವನ್ನೂ ಅವರು ನಿರಂತರವಾಗಿ ದಾಖಲಿಸಿದ್ದಾರೆ. ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಹಿಡಿದು ಪರಿಹಾರ ನೀಡಿಕೆಯಲ್ಲಿನ ತಾರತಮ್ಯದವರೆಗೆ ಎಲ್ಲವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ದೇಶದಲ್ಲಿ ತನಿಖಾ ಪತ್ರಿಕೋದ್ಯಮ ಹಳ್ಳಹಿಡಿದಿದೆ ಎಂಬ ಮುಖ್ಯನ್ಯಾಯಾಧೀಶರ ಭಾಷಣಕ್ಕೆ ಅವರು ನೀಡಿದ ಪ್ರತಿಕ್ರಿಯೆ ಪ್ರಸ್ತುತ ಭಾರತದ ಮಾಧ್ಯಮಲೋಕದ ನೈಜಚಿತ್ರಣವೂ ಹೌದೂ. ಬಂಡವಾಳಶಾಹಿಗಳ ಹಿಡಿತ, ಆಡಳಿತಾರೂಢ ಪಕ್ಷಗಳ ಬೆದರಿಕೆ ಮತ್ತು ಬದ್ಧತೆಯ ಕೊರತೆ ಹೇಗೆ ಎಲ್ಲರನ್ನೂ ಜನಪ್ರಿಯ ಪತ್ರಿಕೋದ್ಯಮದ ಕಡೆಗೆ ಸೆಳೆಯುತ್ತಿದೆ ಎಂಬುದನ್ನವರು ಕೂಲಂಕುಷವಾಗಿ ವಿವರಿಸಿದ್ದಾರೆ. ಭಾರತವು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ವಿಶ್ವದ ಯಾದಿಯಲ್ಲಿ 142ನೇ ಸ್ಥಾನದಲ್ಲಿದೆ ಎಂಬುದು ನಿಜಕ್ಕೂ ಆತಂಕಕಾರಿ. 

ಯಾವುದೇ ಘಟನೆಯನ್ನು ವರದಿಗಾರನೊಬ್ಬ ನೋಡಬೇಕಾಗಿದ್ದು ಒಂದು ಪ್ರಕರಣವಾಗಿಯಲ್ಲ, ಬದಲಾಗಿ ಒಮನದು ಪ್ರಕ್ರಿಯೆಯಾಗಿ, ಯಾಕೆಂದರೆ ಇಲ್ಲಿರುವುದು ಕೇವಲ ಸಂಖ್ಯೆಯಲ್ಲ, ಮನುಷ್ಯರು ಮಬ ಸೂಕ್ಮಗ್ರಹಿಕೆಯನ್ನು ಪತ್ರಿಕೋದ್ಯಮಕ್ಕೆ ನೀಡಿದ ಸಾಯಿನಾಥ ಉತ್ತಮ ವಾಗ್ಮಿಯೂ ಹೌದು. ಸಾಕ್ಷಾಧಾರಗಳ ಸಹಿತವಾಗಿ, ಸಚಿತ್ರವಾಗಿ ಅವರು ಗ್ರಾಮ್ಯಭಾರತದ ಕಥಾನಕಗಳನ್ನು ತಮ್ಮ ಲಘುಹಾಸ್ಯ ಮತ್ತು ಲೇವಡಿಯ ಧಾಟಿಯಲ್ಲಿ ಹೇಳುತ್ತಾ ಹೋದರೆ ಗಂಟೆಗಳೇನು? ದಿನಗಳು ಸರಿದದ್ದೂ ಗೊತ್ತಾಗದು. ಕೇಡಿಗಳೇ ಹಿರೋಗಳಾಗುತ್ತಿರುವ ಈ ಕಾಲದಲ್ಲೂ ಸಾಯಿನಾಥ ಹಲವರ ಹೀರೋ ಆಗಿರುವುದಂತೂ ಸುಳ್ಳಲ್ಲ.