Sunday, October 02, 2022

ಗಾಂಧೀಜಿಯವರ ಬಗ್ಗೆ ಅಭಿಪ್ರಾಯಗಳು

"ಗಾಂಧೀಜಿಯವರ ಸಮಸ್ಯೆ ಎಂದರೆ ಅವರು ಪೂರ್ಣ ಸತ್ಯವನ್ನು ಹೇಳುತ್ತಾರೆ. ಅದನ್ನು ತಡೆದುಕೊಳ್ಳುವ ಶಕ್ತಿ ಸಮಾಜಕ್ಕೆ ಇಲ್ಲ."- ಡಾ.ಬಿ.ಆರ್.ಅಂಬೇಡ್ಕರ್

" ದಿನದಲಿತರ ಗುಡಿಸಲುಗಳ ಮುಂದೆ ತಲೆಬಾಗಿ ನಿಂತ ಮಹಾತ್ಮನೀತ." - ರವೀಂದ್ರನಾಥ ಠಾಗೋರ್

"ಹೆಣ್ಣು ಮತ್ತು ದೇವರು ನನ್ನ ಬದುಕಿನ ಎರಡು ಮುಖ್ಯ ಕಾಳಜಿಗಳಾಗಿದ್ದವು. ನನಗೆ ಹೆಣ್ಣು ಸಿಗಲಿಲ್ಲ, ದೇವರು ಸಿಗಲಿಲ್ಲ. ಆದರೆ ಹೆಣ್ಣು ಮತ್ತು ದೇವರು ಈ ಇಬ್ಬರ ಸೆಳಕುಗಳ ಸಂಗಮವನ್ನು ನಾನು ಮಹಾತ್ಮ ಗಾಂಧೀಜಿಯವರಲ್ಲಿ ಕಂಡೆ."- ಡಾ.ರಾಮ ಮನೋಹರ ಲೋಹಿಯಾ

" ಬಹುಶಃ ಬುದ್ದನ ನಂತರ ಜಗತ್ತು ಕಂಡ ಅಪೂರ್ವ ವ್ಯಕ್ತಿ ಗಾಂಧಿ." - ಜಾನ್ ಗುಂಥರ್

"ಇಂತಹ ಒಂದು ಚೈತನ್ಯ ದೇಹಧಾರಿಯಾಗಿ ಈ ಭೂಮಿಯ ಮೇಲೆ ನಡೆದಾಡಿತ್ತು ಎಂದು ಮುಂದಿನ ಜನಾಂಗ ನಂಬಲಾರದಂತಹ ವ್ಯಕ್ತಿ ಗಾಂಧಿ." - ಆಲ್ಬರ್ಟ್‌ ಐನ್ ಸ್ಟೀನ್

"ಸಮುದ್ರದ ಒಂದು ಹಿಡಿ ಉಪ್ಪು ತೆಗೆದು ಗಾಂಧಿ ಬ್ರಿಟಿಷರಿಗೆ ಹಾಕಿದ ಸವಾಲು, ಮಹರ್ ಸರೋವರದಿಂದ ಒಂದು ಬೊಗಸೆ ನೀರಿನ್ನು ಎತ್ತಿದ ಅಂಬೇಡ್ಕರ್ ಈ ಇಡೀ ಹಿಂದೂ ಸಮಾಜಕ್ಕೆ ಹಾಕಿದ ಸವಾಲು."- ಜಿ.ಕೆ.ಗೋವಿಂದರಾಯ

"ಬ್ರಿಟಿಷರ ಸಿಂಹ ಕೂಡ ಗಾಂಧಿಯ ಮೇಕೆಯನ್ನು ಕಂಡು ಓಡಿಹೋಗುವುದು."- ಮಿಕೇಲ್ ನೋಯ್ಮಾ(ಅರಬ್ ಕವಿ)

" ಗಾಂಧಿಯವರ ಬದುಕಿನ ಅರ್ಥ ತಿಳಿಯಲು ಅವರ ಜೀವನ ಹಾಗೂ ಕಾರ್ಯಕ್ರಮಗಳಿಗೆ ಹೋಗಬೇಕೆ ಹೊರತು, ಅವರ ಮಾತು ಹಾಗೂ ಬರವಣಿಗೆಗಳಿಗಲ್ಲ."- ಲೋಹಿಯಾ

"ಗಾಂಧೀಜಿಯವರ ಜೀವನ ಹಾಗೂ ಗುರಿಗಳನ್ನು ಸಮಾಜವಾದದ ವಸ್ತ್ರದೊಡನೆ ನೇಯ್ದರೆ ನವೀನ ಸಮಾಜವೊಂದು ನಿರ್ಮಾಣವಾದೀತು."- ಲೋಹಿಯಾ

" ಗಾಂಧಿಯವರು ಬರೆದ ಒಂದೇ ಒಂದು ತತ್ವ ಅಥವಾ ತರ್ಕಬದ್ಧವಾದ ಪ್ರಣಾಳಿಕೆ ಎಂದರೆ, ಯಾರಾದರೂ ಅಪರೂಪವಾಗಿ ಓದುವ 'ಹಿಂದ್ ಸ್ವರಾಜ್' ಒಂದೇ. ಗಾಂಧಿಯವರು ಭಾರತೀಯರನ್ನು ಹಾಗೂ ಜಗತ್ತನ್ನು ಪ್ರಭಾವಿತಗೊಳಿಸುವುದು ತಮ್ಮ ವ್ಯವಸ್ಥಿತ ಬರವಣಿಗಳಿಂದ ಅಲ್ಲವೇ ಅಲ್ಲ! ಅವರ ಜೀವನ ವಿಧಾನ ಮತ್ತು ಕಾರ್ಯಗಳಿಂದ ಮಾತ್ರ."- ಲೋಹಿಯಾ

"ಅಣುಬಾಂಬ್ ಮತ್ತು ಗಾಂಧೀಜಿ ಈ ಶತಮಾನದ ಎರಡು ಅಧ್ಬುತಗಳು. ಅಣುಬಾಂಬ್ ಒಂದು ನಾಗರಿಕತೆಯ ಅವನತಿಗೆ ಪ್ರತೀಕವಾದರೆ, ಗಾಂಧೀಜಿ ಅಲ್ಲೇ ಹೊಸ ಚಿಗುರು ಕಾಣಿಸಿಕೊಂಡಿರುವುದರ ಸಂಕೇತ."- ಲೋಹಿಯಾ

" ಮಾನವ ಸಂಕುಲದ ಅಭ್ಯುದಯವಾಗಬೇಕೆಂದರೆ ಅಲ್ಲಿ ಗಾಂಧಿ ಇರಲೇಬೇಕು. ಮಾನವೀಯತೆಯ ಬೆಳಕಿನಲ್ಲಿ ವಿಶ್ವಶಾಂತಿ ಮತ್ತು ಸೌಹಾರ್ದಯುತ ಬಾಳ್ವೆಯನ್ನು ಅವರು ಕೇವಲ ಪ್ರತಿಪಾದಿಸಲಿಲ್ಲ, ಅದರಂತೆ ಬಾಳಿ ತೋರಿಸಿ, ಜಯ ಗಳಿಸಿದರು. ಅವರನ್ನು ಕಡೆಗಣಿಸುವುದೆಂದರೆ ನಮ್ಮ ಬದುಕನ್ನು ಗಂಡಾಂತರಕೊಡ್ಡಿದಂತೆ."- ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್

"ಬುದ್ಧನ ನಂತರ ಭಾರತವು ಯಾವ ವ್ಯಕ್ತಿಯನ್ನೂ ಇಷ್ಟು ದೈವೀಕವಾಗಿ ಕಂಡಿರಲಿಲ್ಲ. ಸರಳ ಬದುಕು, ಶತ್ರುಗಳನ್ನೂ ಆದರಿಸುವ, ವಿಷಯಾಸಕ್ತರಲ್ಲದ, ಅಪರಿಗ್ರಹಿ ಈ ಗಾಂಧಿ. ತನ್ನ ತತ್ವ ಸಿದ್ದಾಂತ, ಬಾಳ್ವೆಯ ಮೂಲಕ ಇಡೀ ವಿಶ್ವವನ್ನೇ ಬೆರಗಾಗಿಸಿದ ಶಾಂತಿಯುತ ಕ್ರಾಂತಿಕಾರಿ ಸಂತ."- ವಿಲ್ ಡ್ಯೂರಾಂಡ್ (ಅಮೇರಿಕನ್ ಲೇಖಕ, ಇತಿಹಾಸಕಾರ, ತತ್ವಜ್ಞಾನಿ)

" ಮಹಾತ್ಮಾ ಗಾಂಧಿ ಒಬ್ಬ ಮಹಾನ್ ವ್ಯಕ್ತಿ. ಅವರಿಗೆ ಮನುಷ್ಯರ ಗುಣಾಣುಗುಣಗಳ ಆಮೂಲಾಗ್ರ ತಿಳವಳಿಕೆ ಇದ್ದಿತು. ಅವರು ವ್ಯಕ್ತಿಗಳ ಸಕಾರಾತ್ಮಕ ಗುಣಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಮೂಲಕ ಸಮಾಜದಲ್ಲಿನ ನಕಾರಾತ್ಮಕ ಆಲೋಚನೆಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರು. ನಾನು ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ಅವರ ಜೀವನಕ್ರಮದಿಂದ ಸ್ಪೂರ್ತಿ ಪಡೆದಿದ್ದೇನೆ."- ದಲಾಯ್ ಲಾಮಾ(ಟಬೆಟಿಯನ್ನರ ಧರ್ಮಗುರು)

"ನನಗೆ ನಿಮ್ಮ ಕುರಿತು ಅದೆಂಥದೋ ಒಂದು ವಿಶೇಷ ಸೆಳೆತ. ನಿಮ್ಮ ನಿಲುವು, ಆದರ್ಶ, ಮಾತುಗಾರಿಕೆ, ಜೀವನ ಶೈಲಿ ನಮ್ಮನ್ನು ಆಪ್ತರನ್ನಾಗಿಸುವುದಲ್ಲದೆ, ನಾವು ಈ ವಿಶ್ವದ ಚಿಕ್ಕ ಕುಟುಂಬದಲ್ಲಿದ್ದೇವೆ ಎಂಬ ಆಪ್ಯಾಯ ಭಾವನೆ ಆವರಿಸಲು ಕಾರಣರಾಗಿದ್ದೀರಿ." - ಜಾರ್ಜ್ ಬರ್ನಾರ್ಡ್ ಷಾ