Monday, April 22, 2019

ಎಲ್ಲರಿಗೂ ವಿಶ್ವಪುಸ್ತಕ ದಿನದ ಶುಭಾಶಯಗಳು. ಈ ಸಂದರ್ಭದಲ್ಲಿ ನನ್ನ ಕೆಲವು ಅನಿಸಿಕೆಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಪುಟ್ಟ ಮಕ್ಕಳ ಪಾಲಕರು ಖಂಡಿತ ಓದಿ. ಪುಸ್ತಕವೇ ಆಸ್ತಿಯಾಗಿರಬೇಕಾದ ಅಕಾಡೆಮಿಕ್ ವಲಯದವರಲ್ಲಿ ಕೂಡಾ ಪುಸ್ತಕಗಳ ಬಗ್ಗೆ ತೀರ ಅನಾಸಕ್ತಿಯಿರುವುದನ್ನು ನಾನು ಗಮನಿಸಿದ್ದೇನೆ. ಅವರಿವರಿಂದ ಕೊಡುಗೆಯಾಗಿ ಬರುವ ಪುಕ್ಕಟೆ ಪುಸ್ತಕಗಳನ್ನು ಹರಳಿನ ಕಪಾಟಿನಲ್ಲಿ ಹಿಡಿದಿಟ್ಟು ಶೋ ಕೊಡುವ ಜನರೇ ಹೆಚ್ಚಿದ್ದಾರೆ. ಅನಿವಾರ್ಯವಾಗಿ ಪುಸ್ತಕಕ್ಕೆ ಹಣ ಕೊಡಬೇಕಾದಾಗ ಆ ಹಣವು ಉಪಯೋಗಕ್ಕಿಲ್ಲದೇ ಖರ್ಚಾಯಿತೆಂದು ಕೊರಗುವುದನ್ನು ನಾನು ನೋಡಿದ್ದೇನೆ. ಇನ್ನು ಕೆಲವರಿಗೆ ಓದುವ ಬಗ್ಗೆ ಅತ್ಯಾಸಕ್ತಿಯಿದ್ದರೂ ಆ ಆಸೆಯೆಲ್ಲವೂ ಲೈಬ್ರರಿಯಿಂದ ಪಡೆದ ಅಥವಾ ಬೇರೆಯವರಿಂದ ಎರವಲು ಪಡೆದ ಪುಸ್ತಕಗಳಿಂದಲೇ ಪೂರೈಕೆಯಾಗಬೇಕೆಂಬ ತಪ್ಪು ಗ್ರಹಿಕೆಯಲ್ಲಿರುತ್ತಾರೆ. ಇನ್ನು ಕೆಲವರಿಗಂತೂ ತಮ್ಮ ಕ್ಷೇತ್ರಕ್ಕೆ ಸಂಬಂಧಿಸದ ಪುಸ್ತಕ ಓದುವುದು ಸಮಯದ ವ್ಯರ್ಥ ಎಂದೇ ಭಾವಿಸುತ್ತಾರೆ. ಓದಿನ ಬಗೆಗೆ ನಮ್ಮ ಭಾವನೆಗಳೇನೇ ಇರಲಿ. ಮಕ್ಕಳಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ತಿಳಿದಿರಬೇಕಾಧ್ದು ಅವಶ್ಯ. ತಿಂಡಿ, ಬಟ್ಟೆ, ಅಲಂಕಾರಿಕ ಸಾಮಗ್ರಿಗಳಂತೆ ಪುಸ್ತಕಗಳು ಕೂಡಾ ಮಗುವಿನ ಪ್ರಾಥಮಿಕ ಅವಶ್ಯಕತೆಯಾಗಿದೆ. ಓದುವುದೆಂದರೆ ಅದು ಮಾತನಾಡುವುದೆಂದರೆ ಮುಂದಿನ ಭಾಗ. ಇಡಿಯ ಜಗತ್ತೇ ಮಾತು ಕಳಕೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ ಮಾತನಾಡುವ ಅವಕಾಶವನ್ನು ಓದು ಮಕ್ಕಳಿಗೆ ನೀಡುತ್ತದೆ. ಪುಸ್ತಕಗಳ ಆಯ್ಕೆ ಮಾಡುವಾಗ ತೀರ ಎಚ್ಚರಿಕೆ ಅಗತ್ಯ. ಪ್ರತಿಯೊಂದು ಮಗುವಿನ ಆಸಕ್ತಿಯ ಕ್ಷೇತ್ರ ವಿಭಿನ್ನವಾಗಿರುತ್ತದೆ. ಅದರ ಆಸಕ್ತಿಯನ್ನು ಅರಿಯುವುವವರೆಗೆ ವಿಭಿನ್ನ ಮಾದರಿಯ ಪುಸ್ತಕಗಳು ಮನೆಗೆ ಬರುತ್ತಿಲೇಬೇಕು. ಇಷ್ಟಪಟ್ಟು ನೀವು ಆರಿಸಿದ ಡ್ರೆಸ್ ನ್ನು ನಿಮ್ಮ ಮಗು ಧರಿಸಲು ನಿರಾಕರಿಸಿದಾದ ನೀವೇನು ಮಾಡುತ್ತೀರಿ? ನಿಮಗಿಷ್ಟ ಕಂಡ ಹತ್ತಿರದವರಿಗೆ ನೀಡುತ್ತಿರುವ. ಇಲ್ಲೂ ಅದೇ ನಿಯಮ ಪಾಲಿಸಿ. ಅದನ್ನು ಇಷ್ಟಪಡುವ ಮಕ್ಕಳಿಗೆ ಉಡುಗೊರೆಯಾಗಿ ನೀಡಿ. ಬಲವಂತದಿಂದ ಮಕ್ಕಳನ್ನು ಓದಿಸಲಾಗದು. ಅವರಿರುವ ಸ್ಥಳದ ಸುತ್ತಲೂ ಪುಸ್ತಕಗಳು ಚೆಲ್ಲಾಪಿಲ್ಲಿಯಾಗಿ ಹರಡಿರಲಿ. ಕೆಲವೇ ದಿನಗಲ್ಲಿ ಅದನ್ನವರು ಪ್ರೀತಿಯಿಂದ ಎದೆಗೊತ್ತಿಕೊಳ್ಳುವ ವಿಸ್ಮಯಕ್ಕೆ ನೀವೇ ಬೆರಗಾಗುತ್ತೀರಿ. ದಿನದ ಕೊನೆಯ ಸಂಜೆಯಲ್ಲಿ ಹೀಗೇ ಮನೆಮದಿಯೆಲ್ಲ ಒಂದೊಂದು ಪುಸ್ತಕ ಎತ್ತಿಕೊಂಡು ಮೌನವಾಗುವ ಸಂಪ್ರದಾಯವನ್ನು ಪಾಲಿಸಿ. ಹೀಗೆ ಓದುವುದರಿಂದ ಪರೋಕ್ಷವಾದ ಅನೇಕ ಪ್ರಯೋಜನಗಳಿವೆ. ಓದು ಮಕ್ಕಳ ಮನದೊಳಗೊಂದು ಭಾವಕೋಶವನ್ನು ಬೆಳೆಸುತ್ತದೆ. ಪಠ್ಯಪುಸ್ತಕದ ಓದಿನ ವೇಗವನ್ನು ಅತಿಶಯವಾಗಿ ಹೆಚ್ಚಿಸುತ್ತದೆ. ಅಂತರ್ಜಾಲಗಳು ತೆರೆದಿಡುವ ಭ್ರಮಾಲೋಕದಿಂದ ವಾಸ್ತವಕ್ಕಿಳಿಯಲು ಸಹಾಯ ಮಾಡುತ್ತದೆ. ಅವರ ಬಿಡುವಿನ ವೇಳೆಯನ್ನು ಮೌಲ್ಯಯುತವಾಗಿ ಕಳೆಯುವ ಬಗೆಯನ್ನು ಕಲಿಸುತ್ತದೆ. ಜೀವನದ ಕಠಿಣ ಸನ್ನಿವೇಶದಲ್ಲಿ ಉತ್ತಮ ಜೊತೆಗಾರನಾಗುತ್ತದೆ. ಎದೆಯೊಳಗೊಂದು ಆರ್ದೃ ಲೋಕವನ್ನು ಸೃಷ್ಟಿಸುತ್ತದೆ. ತಮ್ಮ ಆಸಕ್ತಿಯ ಕ್ಷೇತ್ರವನ್ನು ಗುರುತಿಸಲು ನೆರವಾಗುತ್ತದೆ. ಗುರಿಸಾಧನೆಗೆ ಮಾರ್ಗದರ್ಶಿಯಾಗುತ್ತದೆ. ಧರಿಸುವ ಬಟ್ಟೆ ಚಿಕ್ಕದಾದಾಗ ಬದಿಗಿಡುವಂತೆ ಬೆಳೆಯುವ ಮಕ್ಕಳು ಹಿಂದಿನ ಓದನ್ನು ಬದಿಗೆ ಆರಿಸುತ್ತಾರೆ. ಅದನ್ನೇ ಪದೇಪದೇ ಓದಲು ಒತ್ತಾಯೊಸದಿರಿ. ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ದೊಡ್ಡ ಪುಸ್ತಕದ ಮಳಿಗೆಯೊಳಗೆ ನಿಲ್ಲಿಸಿ ಬೇಕಾದ ಪುಸ್ತಕಗಳನ್ನು ಬಾಚಿಕೊಳ್ಳಲು ಹೇಳಿ. ಹಣದ ಲೆಕ್ಕಾಚಾರ ಬೇಡ. ಅದಕ್ಕಿಂತ ದುಪ್ಪಟ್ಟು ಪ್ರತಿಫಲವನ್ನು ಪುಸ್ತಕಗಳು ಖಂಡಿತ ನಿಮಗೆ ನಿಉಡುತ್ತವೆ. ಮನೆಯಲ್ಲಿ ಮಕ್ಕಳಿಗೆಂದೇ ಪ್ರತ್ಯೇಕವಾದ ಪುಟ್ಟ ಲೈಬ್ರರಿಯಿರಲಿ. ಮನೆಗೆ ಬಂದವರೊಂದಿಗೆ ನಿಮ್ಮ ಮಕ್ಕಳು ಈಗ ಓದುತ್ತಿರುವ ಪುಸ್ತಕದ ಬಗ್ಗೆ ಹೇಳಿ. ಅವರ ಪುಸ್ತಕ ಸಂಗ್ರಹವನ್ನೂ ನಿಮ್ಮ ಮನೆಯ ಅಪರೂಪದ ವಸ್ತುವಿನಂತೆ ತೋರಿಸಿ. ಪುಟ್ಟ ಮಕ್ಕಳಿದ್ದರೆ ಅವು ಮಲಗುವ ಮೊದಲು ಹಾಸಿಗೆಯ ತುಂಬೆಲ್ಲ ಪುಸ್ತಕಗಳನ್ನು ಹರಡಿ, ಅದನ್ನು ಆಟವಾಡುತ್ತಲೇ ಅವರು ನಿದ್ರಿಸಲಿ. ಓದು ಕಲಿಸಲು ತಾಳ್ಮೆ, ಆಯ್ಕೆ, ಆಸಕ್ತಿಯ ಅರಿಯುವಿಕೆ, ಮಾದರಿಗಳು ಮುಖ್ಯವೆಂದು ನೆನಪಿಡಿ. ಮಕ್ಕಳ ಹುಟ್ಟುಹಬ್ಬಕ್ಕೆ ಡ್ರೆಸ್ ಗೆಂದು ಸಾವಿರಾರು ರೂಪಾಯಿ ವ್ಯಯಿಸುವ ನಾವು ಅದರರ್ಧ ಹಣವನ್ನು ಪುಸ್ತಕಗಳಿಗೆ ಮೀಸಲಿಟ್ಟರೂ ಸಾಕು. ಮಕ್ಕಳು ಖಂಡಿತ ಒಳ್ಳೆಯ ಓದುಗರಾಗುತ್ತಾರೆ. ಎರವಲು ಪುಸ್ತಕಗಳು ಬಾಡಿಗೆಯ ಮನೆಯಂತೆ. ಓದುವ ಸುಖವನ್ನು ಇಡಿಯಾಗಿ ನೀಡಲಾರವು. ಸ್ವಂತ ಪುಸ್ತಕ ಖರೀದಿಸಿ, ಮಕ್ಕಳ ಓದನ್ನು ಪ್ರೋತ್ಸಾಹಿಸಿ. ಚಿಕ್ಕ ಮಕ್ಕಳಿರುವವರು ಮೇಲೆ ಹೇಳಿರುವುದನ್ನೆಲ್ಲ ಪಾಲಿಸಿದರೆ ಖಂಡಿತ ನಿಮ್ಮ ಮಕ್ಕಳ ಓದಿನ ಚಿಂತೆಯನ್ನು ಮೀರಬಹುದು.

#Copositive# ಬಿಪಾಸಿಟಿವ್#
ಈ ಹಾಶ್ ಟ್ಯಾಗನಲ್ಲಿ ಕೊರೋನಾ ಬಂದು ಗುಣವಾದವರ ಅನಿಸಿಕೆಗಳನ್ನು ಹಂಚಿಕೊಳ್ಳಲು Gayathri HN ಸೂಚಿಸಿರುತ್ತಾರೆ. ಕೊರೊನಾ ಬಂದಿದೆಯೆಂಬುದು ಅಪರಾಧವೆಂಬಂತೆ ಬಿಂಬಿಸುತ್ತಿದ್ದ ಕಾಲದಲ್ಲೇ ನಾನು ಆ ಬಗ್ಗೆ ಅಂತರ್ಜಾಲ ಪತ್ರಿಕೆಯಲ್ಲಿ ವಿವರವಾದ ಲೇಖನವನ್ನು ಬರೆದಿದ್ದೆ. ಅದರ ಸಂಕ್ಷಿಪ್ತ ವಿವರ ಹೀಗಿದೆ...

ಕಳೆದ ವರ್ಷ ಕರೋನಾ ಪೀಕ್ ನಲ್ಲಿರುವಾಗಲೇ ಎಸ್. ಎಸ್. ಎಲ್. ಸಿ. ಮೌಲ್ಯಮಾಪನಕ್ಕೆಂದು ಹೋಗುತ್ತಿದ್ದ ನನ್ನ ಸಂಗಾತಿ ಮೌಲ್ಯಮಾಪನ ಕೆಲಸ ಮುಗಿದ ದಿನವೇ ಜ್ವರದಿಂದ ಬಳಲಿದರು. ಮೊದಲು ಮಳೆಯಲ್ಲಿ ನೆನೆದಿದ್ದರಿಂದ ಬಂದ ಜ್ವರವೆಂದುಕೊಂಡರೂ ಮೂರು ದಿನಗಳ ನಂತರ ರಾತ್ರಿ ಉಸಿರಾಡಲು ಚೂರು ಕಷ್ಟವೆನಿಸಿದ್ದರಿಂದ ಕರೋನಾ ಟೆಸ್ಟ್ ಮಾಡಿಸಿದರು. ಫಲಿತಾಂಶ ಪಾಸಿಟಿವ್ ಎಂದು ಬಂತು. ಅವರಿಗೆ ಇನ್ಯಾವುದೇ ಖಾಯಿಲೆಗಳಿಲ್ಲದಿರುವುದರಿಂದ ಮತ್ತು ಆಸ್ಪತ್ರೆಗಳು ಸರಿಸುಮಾರಾಗಿ ಆಗ ತುಂಬಿರುವುದರಿಂದ ಮನೆಯಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆವು. ನಾಲ್ಕಾರು ದಿನ ಒಟ್ಟಿಗೇ ಇದ್ದುದರಿಂದ ಇಬ್ಬರು ಮಕ್ಕಳು ಮತ್ತು ನಾನು ಕೂಡಾ ಪಾಸಿಟಿವ್ ಇರಬಹುದು ಅನಿಸಿದರೂ ಇಲಾಖೆಯವರು ಮನೆಯನ್ನು ಸಂಪೂರ್ಣ ಸೀಲ್ಡೌನ್ ಮಾಡಿದ್ದರಿಂದ ನಮ್ಮ ಪರೀಕ್ಷೆಯನ್ನು ಮಾಡಿಸಲಾಗಲಿಲ್ಲ. ಅವರಲ್ಲಿ ವಿನಂತಿಸಿದರೂ ಅವರೂ ಪರೀಕ್ಷೆ ಮಾಡಲಿಲ್ಲ. ನಮ್ಮ ಎಚ್ಚರದಲ್ಲಿ ನಾವಿರಬೇಕೆಂದು ನಾವು ಮುಂದಿನ ಹದಿನೈದು ದಿನ ಪಾಲಿಸಿದ ನಿಯಮಗಳು ಹೀಗಿವೆ..
೧. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಫೋನ್ ನಂ ಸಂಗ್ರಹಿಸಿಟ್ಟುಕೊಂಡೆವು. ತೀರಾ ಆತ್ಮೀಯರಾದ ಒಬ್ಬರು ಖಾಸಗಿ ವೈದ್ಯರಿಗೆ ವಿಷಯ ತಿಳಿಸಿ ಸಲಹೆ ಪಡೆದೆವು.
೨. ಉಸಿರಾಡಲು ತೊಂದರೆಯಾದರೆ ಎಂದು ಒಂದು ಹಬೆ ತೆಗೆದುಕೊಳ್ಳುವ ಯಂತ್ರವನ್ನು ತರಿಸಿ ದಿನಕ್ಕೆ ಮೂರು ಬಾರಿ ಹಬೆ ತೆಗೆದುಕೊಂಡರು.
೩. ನನ್ನವರಿಗೆ ಆಯುರ್ವೇದ ಕಷಾಯಗಳಲ್ಲಿ ಬಹಳ ನಂಬಿಕೆಯಿದ್ದುದರಿಂದ ಶುಂಠಿಯೇ ಮೊದಲಾದ ಹಲವು ಬಗೆಯ ಮಸಾಲೆ ವಸ್ತುಗಳ ಕಷಾಯವನ್ನು ಬಹಳ ಸಲ ಕುಡಿಯುವುದರಿಂದಾಗುವ ಏರುಪೇರಿನ ಬಗ್ಗೆ ಅರಿವಿದ್ದ ನಾನು ಸಾಧ್ಯವಾದಷ್ಟು ನೆಲನೆಲ್ಲಿ, ಅಮೃತಬಳ್ಳಿ ಮೊದಲಾದ ಗಿಡಮೂಲಿಕೆಗಳ ಕಷಾಯವನ್ನು ಬೆಳಿಗ್ಗೆ ಮತ್ತು ರಾತ್ರಿ ಮಾತ್ರ ಕುಡಿಯಲು ಕೊಡುತ್ತಿದ್ದೆ.
೪. ಇನ್ನುಳಿದಂತೆ ಪ್ಯಾರಾಸಿಟಮೋಲ್ ಮತ್ತು ವಿಟಾಮಿನ್ ಸಿ ಮಾತ್ರೆಯನ್ನು ಐದು ದಿನಗಳ ಕಾಲ ತೆಗೆದುಕೊಂಡಿದ್ದಾರೆ.
೫. ವಿಟಾಮಿನ್ ಸಿ ಮಾತ್ರೆಯನ್ನು ನಾವೆಲ್ಲರೂ ತೆಗೆದುಕೊಂಡಿದ್ದೇವೆ.
೬. ನಮ್ಮಲ್ಲಿಯೂ ಯಾರು ಬೇಕಾದರೂ ಪಾಸಿಟಿವ್ ಇರಬಹುದಾದ್ದರಿಂದ, ಮತ್ತು ನಮ್ಮನೆಯಲ್ಲಿ ಎಲ್ಲರಿಗೂ ಸಾಕಾಗುವಷ್ಟು ಕೊಠಡಿಗಳಿದ್ದರಿಂದ ಎಲ್ಲರೂ ಆದಷ್ಟು ದೂರದೂರವೇ ಉಳಿದೆವು.
೭. ನಾನು ಕೆಲವು ದಿನಗಳವರೆಗೆ ರಾತ್ರಿ ಅನೇಕ ಸಲ ಎಲ್ಲರ ಕೊಠಡಿಯಲ್ಲಿ ಇಣುಕಿ, ನಿದ್ರಿಸಿರುವುದನ್ನು ಖಾತ್ರಿಗೊಳಿಸಿಕೊಂಡದ್ದುಂಟು.
೮. ಯಾವುದೇ ಸನ್ನಿವೇಶವನ್ನು ಎದುರಿಸಲು ಅನುಕೂಲವಾಗುವಂತೆ ಅಗತ್ಯ ಊಟದ ತಯಾರಿಯ ಬಗ್ಗೆ ಎಲ್ಲರೂ ಸಿದ್ಧರಾದೆವು. ಸಾಮಾನುಗಳೆಲ್ಲ ಎಲ್ಲಿವೆಯೆಂದು ಎಲ್ಲರೂ ಖಾತ್ರಿಪಡಿಸಿಕೊಂಡು, ಸುಲಭ ಅಡುಗೆ ಯಾವುದೆಂದು ಗುರುತು ಹಾಕಿಕೊಂಡೆವು.
೯. ಸ್ನೇಹಿತರಿಗೆ ಕರೆಮಾಡಿ ಒಂದು ತಿಂಗಳಿಗಾಗುವಷ್ಟು ದಿನಸಿಯನ್ನು ವಾಟ್ಸಾಫ್ ಮಾಡಿ ತರಿಸಿಟ್ಟುಕೊಂಡೆವು.
೧೦. ಬಿಸಿಯಾದ, ಜಿಡ್ಡಿಲ್ಲದ, ರುಚಿಯಾದ ಅಡುಗೆಯನ್ನು ಮೂರೂ ಹೊತ್ತು ತಯಾರಿಸಿ ಉಂಡೆವು.
೧೧. ನನ್ನವರು ಯೋಗ ಪರಿಣಿತರಾದ್ದರಿಂದ ಬೆಳಗಿನ ಕೆಲವು ಸಮಯವನ್ನು ಅದಕ್ಕೆ ಮೀಸಲಿಟ್ಟರು. ಎಲ್ಲ ಬಂಧುಗಳಿಗೆ ಕರೆಮಾಡಿ ಮಾತನಾಡಿ ಸಮಯ ಕಳೆದರು.
೧೨. ನಡುನಡುವೆ ನಮಗೆ ಶೀತ, ಚೂರು ಜ್ವರ, ತಲೆನೋವು ಎಲ್ಲಾ ಕಾಡಿತಾದರೂ ಭಯಗೊಳ್ಳದೇ ಅದಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ತಿಂದೆವು.
೧೩. ಟಿ. ವಿ. ವಾರ್ತೆಗಳನ್ನು ಸಾಧ್ಯವಾದಷ್ಟು ಕಡಿಮೆ ನೋಡಿ ಆತಂಕದಿಂದ ದೂರವಿದ್ದೆವು. 
ಹೀಗೆ ಹದಿನೇಳು ದಿನಗಳನ್ನು ಕಳೆದಮೇಲೆ ನಮ್ಮೆಲ್ಲರ ಪರೀಕ್ಷಾ ವರದಿ ನೆಗೆಟಿವ್ ಅಂತ ಬಂತು. ನನ್ನವರಿಗೆ ಬೆಸ್ಡ್ ಕ್ವಾರೈಂಟೈನ್ ಪೇಶಂಟ್ ಎಂದು ಜಿಲ್ಲಾಡಳಿತದಿಂದ ಸನ್ಮಾನವೂ ಆಯಿತು. ನನ್ನ ಅನುಭವದಿಂದ ಹೇಳುವುದಾದರೆ ಕೋವಿಡ್ ಕಾಲದಲ್ಲಿ ಆ ಕ್ಷಣದ ತೊಂದರೆಯ ಬಗ್ಗೆ ಯೋಚಿಸಿ, ಅದರ ನಿವಾರಣೆಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಸಾಕು. ಉಸಿರಾಟದ ತೊಂದರೆಯಾದಲ್ಲಿ ಮಾತ್ರ ತುರ್ತು ನೆರವು ಸಿಗುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಅದೇ ಗುಂಗಿನಲ್ಲಿರದೇ ಮಾಮೂಲಿಯಂತೆ ಚಟುವಟಿಕೆಯಲ್ಲಿದ್ದರೆ ಬೇಗ ಮೊದಲಿನಂತಾಗಬಹುದು....