Saturday, April 24, 2021

ಗೀತಾಂಜಲಿ

ಗೀತಾಂಜಲಿ -೧

ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆ
ನೀನೆನ್ನ ಅನಂತವಾಗಿಸಿರುವೆ
ದೇಹವೆಂಬ ಸಡಿಲ ಹಡಗನು
ಮತ್ತೆ, ಮತ್ತೆ ನಿರ್ವಾತಗೊಳಿಸಿ
ಹೊಸ ಜೀವವ ತುಂಬಿರುವೆ

ಬರಿದೆ ಬಿದ್ದ ಕೊಳಲು ನಾನು
ಗಿರಿ ಗಹ್ವರಕೆ ಕೊಂಡೊಯ್ವೆ ನೀನು
ಹೊಸಗಾಳಿಯ ಉಸಿರ ತುಂಬಿ
ಜೀವರಾಗ ನೀ ನುಡಿಸಿರುವೆ

ನಿನ್ನ ಅಮರ ಕರವು ಸೋಕಿ
ನನ್ನೆದೆಯ ಹರ್ಷ ಎಲ್ಲೆ ಮೀರಿ
ಭಾಷೆಗೆಟುಕದಂತ ಭಾವವ
ಎದೆಯಾಳದಿ ಮೊಳೆಯಿಸಿದೆ ನೀ

ನನ್ನ ಪುಟ್ಟ ಕರದ ತುಂಬ
ನಿನ್ನ ಪ್ರೀತಿ ಕೊಡುಗೆ ಬಿಂಬ
ಕಾಲವೆಷ್ಟು ಉರುಳಿದರೂ
ಖಾಲಿಯುಳಿದಿದೆ ಮತ್ತೆ ಜಾಗ

ಗೀತಾಂಜಲಿ - ೯೩

ದೊರೆಯ ಕರೆಯು ಬಂದಿದೆ, ಓ ಗೆಳೆಯರೇ
ವಿದಾಯ ಕೋರಿ ಬೀಳ್ಕೊಡುವಿರಾ ಪ್ರಾಣಮಿತ್ರರೇ
ಶರಣು ನಿಮಗೆಲ್ಲರಿಗೂ ಅಗಲುತಿರುವೆನು
ನನ್ನ ಬಾಗಿಲ ಬೀಗವಿದೋ ಮರಳಿಸಿರುವೆನು
ಮನೆಯ ಹೊಣೆಯನೆಲ್ಲ ತೊರೆದೆ ಹಗುರವಾದೆನು
ನಿಮ್ಮ ಅಂತಃಕರಣದೊಂದು ನುಡಿಯ ಬಯಸುವೆ

ಹೊರೆಯು ಆಗದಂತ ನೆರೆಯು ನಾವಾದೆವು
ಪಡೆದುದೇ ಅಧಿಕ ನಾನು ಕೊಡುಗೆಗಿಂತಲೂ
ಮನದೊಳಗೆ ಮುಸುಕಿರುವ ತಮಗಳೆಲ್ಲವೂ
ಹೊಸಬೆಳಕಿನ ಪ್ರಭೆಯಲ್ಲಿ ಕರಗಿಹೋದವು
ದೊರೆಯ ಕಡೆಯ ಕರೆಯು ಇಂದು ನನಗೆ ಬಂದಿದೆ
ಹೋಗಿ ಬರುವೆ ಅನಂತ ದಾರಿ ತೆರೆದುಕೊಂಡಿದೆ

ಗೀತಾಂಜಲಿ - 56

ನನ್ನೊಳಗೆ ಹಾಗೆ ತುಂಬಿ ಹೋದೆ ನಿನ್ನ ಹರುಷವ
ನೀನು ನನ್ನ ಬಳಿಗೆ ಇಳಿದು ಬಂದೆ ಓ ಪ್ರಭು

ಜಗದ ಪತಿಯೆ, ಪ್ರೀತಿ ಝರಿಯೆ ನಾನಿಲ್ಲವಾದರೆ
ನಿನ್ನ ಪ್ರೀತಿ ವರ್ಷಧಾರೆ ಸುರಿವುದೆಲ್ಲಿ ಹೇಳು ದೊರೆ?

ನಿನ್ನ ಎಲ್ಲ ಐಸಿರಿಯಲೂ ನನ್ನ ಪಾಲು ನೀಡಿದೆ
ಮೇರೆಯಿರದ ಆನಂದವ ಹೃದಯದಲ್ಲಿ ಇರಿಸಿದೆ
ನೀನು ಮೂರ್ತವಾಗಿರುವೆ ನನ್ನ ಬದುಕ ಫಲುಕಿನಲ್ಲಿ

ರಾಜ, ಮಹಾರಾಜರ ವಿಧಿಯ ಬರೆವ  ದೇವನೆ
ಶೃಂಗರಿಸಿಕೊಂಡೆ  ನನ್ನ ಸೂರೆಗೊಳಲು ನಿನಗೆ ನೀನೆ
ಪ್ರೀತಿ ಮತ್ತು ಪ್ರೀತಿಸಿದವರ ಬೇರೆಯಾಗಿಸಿ
ಪೂರ್ಣ ಪ್ರೀತಿಯರಿವ ತಂದೆ ನನ್ನ ಮಾಗಿಸಿ

ಗೀತಾಂಜಲಿ -45

ಮೆಲ್ಲಹೆಜ್ಜೆಯಿಟ್ಟು ಬರುವ ಸದ್ದು ಕೇಳದೇನು?
ಅವನು ಬರುವ, ಇಂದೂ ಬರುವ, ಬಂದೇ ಬರುವನು

ಎಲ್ಲ ಕ್ಷಣವು, ಎಲ್ಲ ಯುಗವು
ಎಲ್ಲ ಹಗಲು, ಎಲ್ಲ ಇರುಳು
ಅವನು ಬರುವ, ಎಂದೂ ಬರುವ, ಬಂದೇ ಬರುವನು

ಮನದಿ ಸುಳಿವ ರಾಗದಲ್ಲಿ ಅವನ ಸ್ತುತಿಸುವೆ
ಎಲ್ಲ ಸೊಲ್ಲು ಅವನ ಕರುಣೆ ಸಾರುತಿರುವುದು
ಅವನು ಬರುವ, ಇಂದೂ ಬರುವ, ಬಂದೇ ಬರುವನು

ಬಿರುಬಿಸಿಲಿನ ಬೇಸಿಗೆಯಲಿ, ತಂಪು ಕಾಡ ದಾರಿಯಲ್ಲಿ
ಹೂವ ಗಂಧವಾಗಿ ಅವನು ಸುಳಿಯುತಿರುವನು
ಅವನು ಬರುವ, ಎಂದೂ ಬರುವ, ಬಂದೇ ಬರುವನು

ಗುಡುಗು, ಸಿಡಿಲು, ಮಿಂಚು, ಮಳೆಯ
ಕಾರಿರುಳಿನ ರಾತ್ರಿಯಲ್ಲಿ, ಮೋಡದ ಸಾರೋಟನೇರಿ ಬಂದೇ ಬರುವನು
ಅವನು ಬರುವ, ಇಂದೂ ಬರುವ, ಬಂದೇ ಬರುವನು

ದುಗುಡ ಕಳೆದು ಮತ್ತೆ ದುಗುಡ
ಮನವನಾವರಿಸಿರುವ ಗಳಿಗೆ
ಅವನ ಪಾದ ನನ್ನ ಹೃದಯ ಮೆಲ್ಲ ಸೋಕಿತು
ಹೊನ್ನ ಪಾದ ತಾಕಿದಾಗ ದುಗುಡವೆಲ್ಲ  ಅಲ್ಲೇ ಕರಗಿ
ಹರ್ಷದ ಹೊನಲುಕ್ಕಿ ಮತ್ತೆ ತುಂಬಿ ಹರಿಯಿತು
ಅವನು ಬಂದ, ಅಂದೂ ಬಂದ, ಇಂದು ಬರುವನು

ಗೀತಾಂಜಲಿ -೧೯

ನೀನು ಮಾತನಾಡದಿದ್ದರೆ.....
ನಿನ್ನ ಮೌನವನು ನಾನು ಧರಿಸುತ್ತೇನೆ
ನನ್ನ ಹೃದಯದೊಳಗೆ ತುಂಬಿಕೊಳ್ಳುತ್ತೇನೆ
ನಿನ್ನ ಮೌನವನು...
ತಾರೆಗಳ ತುಂಬಿಕೊಂಡ ಬಾನು
ನಿನ್ನೆದುರು ತುಸು ಬಾಗಿ ಕಾಯುವಂತೆ
ಕದಲದೆ ಸಹನೆಯಿಂದ ಕಾಯುತ್ತೇನೆ ನಾನು

ಹೊಸಬೆಳಗು ಬಂದೇ ಬರುವುದು
ಕತ್ತಲೆಯ ತೆರೆ ಹರಿದು ಹೋಗುವುದು
ಹೊಮ್ಮುವ ಹೊನ್ನ ಕಿರಣಗಳೊಂದಿಗೆ
ನಿನ್ನ ದನಿಯೂ ತೇಲಿ ಬರುವುದು
ನನ್ನ ಗೂಡಿನ ಎಲ್ಲ ಹಕ್ಕಿಗಳ ರೆಕ್ಕೆ
ಪಡೆದ ನಿನ್ನ ದನಿ ಎತ್ತರಕೆ ಹಾರುವುದು
ಅಗೋ, ನೋಡಲ್ಲಿ ನನ್ನ ತೋಪಿನ
ಹೂಗಳ ತುಂಬೆಲ್ಲಾ ನಿನ್ನ ದನಿಯ ಮಾಧುರ್ಯ!

ಗೀತಾಂಜಲಿ-೭೮
ಸೃಷ್ಟಿಯ ಆರಂಭದ ದಿನ
ಎಲ್ಲ ತಾರೆಗಳೂ ಒಮ್ಮೆಲೆ
ಝಗ್ಗೆಂದು ಮಿನುಗಿದವು!
ಆಗಸದ ತಾರೆಗಳ ಸಭೆಕರೆದು
ಜಗನ್ನಿಯಾಮಕ ಹಾಡು ಹಾಡಿದ
"ಓ... ನನ್ನ ಜಗತ್ತೀಗ ಪರಿಪೂರ್ಣವಾಗಿದೆ
ಪರಿಶುದ್ಧ ಆನಂದ ಇಡೀ ಜಗವ ತುಂಬಿದೆ"
ಇದ್ದಕ್ಕಿದ್ದಂತೆ ಕೇಳಿಬಂತೊಂದು ಕೂಗು!
"ಅಗೋ, ಬೆಳಕಿನ ರೇಖೆ ತುಂಡಾಗಿದೆ
ಎಲ್ಲೋ ಒಂದು ತಾರೆಯ ಅವಸಾನವಾಗಿದೆ"

ಕಾಲದ ವೀಣೆಯ ಚಿನ್ನದ ತಂತಿ ತುಂಡಾಯಿತು
ಮಂಜುಳ ಗಾನವು ಮೌನಕ್ಕೆ ಜಾರಿತು

ಎಲ್ಲರೂ ನಿರಾಸೆಯಿಂದ ಹಾಡಿದರು
"ಹೌದು, ಘನ ನಕ್ಷತ್ರದ ಸಾವಾಗಿದೆ
ಸ್ವರ್ಗದ ಘನತೆಗೆ ಕುಂದಾಗಿದೆ"

ಅಂದಿನಿಂದಲೂ ಹುಡುಕುತ್ತಲೇ ಇದ್ದಾರೆ
ಕುಂದಿಲ್ಲದ ಜಗದ ಮಹದಾನಂದವನ್ನು
ಹುಡುಕಾಟ ತಲೆಮಾರುಗಳ ದಾಟುತ್ತಲೇ ಬಂದಿದೆ
ಇಡಿಯ ಲೋಕದ ತುಂಬೆಲ್ಲಾ ಚಾಚಿಕೊಂಡಿದೆ
ಜಗತ್ತು ನೆಮ್ಮದಿಯನ್ನು ಕಳಕೊಂಡಿದೆ

ಕಡುಗತ್ತಲೆಯ ನಿಶ್ಶಬ್ದ ಇರುಳಿನಲ್ಲಿ
ತಾರೆಗಳು ತಮ್ಮಲ್ಲಿಯೇ ಪಿಸುಗುಡುತ್ತವೆ
ತಾವೇ ಕಣ್ಣುಮಿಟುಕಿಸಿ ನಗುತ್ತವೆ
"ಬಿರುಕಿಲ್ಲದ ಪೂರ್ಣತೆಯ ಹುಡುಕಾಟ
ಆಹಾ! ಅದೆಷ್ಟು ವ್ಯರ್ಥ!"


[25/04, 00:44] : ಗೀತಾಂಜಲಿ -೨

ಹಾಡನೊಂದು ಹಾಡು ಎಂದು
ನೀನು ನನ್ನ ಕೇಳಿದಾಗ
ಎದೆಯ ತುಂಬ ಆನಂದರಾಗ
ತುಂಬಿಹೋಯ್ತು ಧನ್ಯತೆಯಲಿ
ಆಸೆಯಿಂದ ನಿನ್ನ ಮೊಗವ
ದಿಟ್ಟಿಸುವೆನು ನನ್ನ ದೊರೆಯೆ
ನಿರಾಸೆ ಮೋಡ ಕಳಚಿ ಕಣ್ಣ
ತುಂಬಿ ಬಂತು ಆನಂದಬಿಂದು

ಬಾಳ ದುಃಖ ದುಗುಡವೆಲ್ಲ
ಸಿಹಿಯ ರಾಗದಲ್ಲಿ ಕರಗಿ
ನಿನ್ನ ಆರಾಧನೆಯ ಸೊಲ್ಲು
ಹಕ್ಕಿ ರೆಕ್ಕೆಯಂತೆ ಒದಗಿ
ಬಾನಾಡಿಯಾಗಿ ಹಾರಿದೆನು
ಸ್ವಚ್ಛಂದ ಬಾನಿನಗಲದಿ

ನೀ ಬಯಸುವೆ ನನ್ನ ಗಾನ
ಎಂಬ ಮಾತೇ ಅಮೃತ ಸಮಾನ
ಹಾಡ ರೆಕ್ಕೆ ಧರಿಸಿ ನಾನು
ನಿನ್ನ ಪಾದ ಸೋಕುವೆನು
ನಿನ್ನ ಸೇರುವ ಬಯಕೆ ಸ್ವಪ್ನ
ನಿಜವಾದುದಿಂತು ಗಾನದಿಂದ

ಗಾನದಾನಂದವೆಂಬ
ಸೋಮರಸವ ಕುಡಿದೆ ದೇವ
ನನ್ನ ನಾನು ಮರೆತೆ ಹೋದೆ
ನಿನ್ನೊಡನೆ ನಾನು ಐಕ್ಯವಾದೆ
ನನ್ನ ದೇವನ ಚಿತ್ರಿಸಿರುವ
ಜಗದ ಸಿರಿಗೆ ಶರಣು ಎಂದೆ
[25/04, 01:07] : 

ಗೀತಾಂಜಲಿ - ೩

ಎಂಥ ಮಧುರ ಸಂಗೀತ
ದೇವ ನಿನ್ನ ಎದೆಯ ಗೀತ
ಕೇಳಿದಾಗಲೆಲ್ಲ ನಾನು ಮೂಕವಿಸ್ಮಿತ!

ನಿನ್ನ ಗಾನದ ಬೆಳಕ ಪಡೆದು
ಇಡಿಯ ಜಗವು ಬೆಳಗುತಿಹುದು
ಹಲವು ಲೋಕಗಳನು ದಾಟಿ
ಗಾನಪ್ರವಾಹ ಹರಿಯುತಿಹುದು
ಎಡರು ತೊಡರುಗಳನು ಮೀರಿ
ದಿವ್ಯಗಾನ ಪ್ರವಹಿಸುವುದು
ಕೇಳಿದಾಗಲೆಲ್ಲ ನಾನು ಮೂಕವಿಸ್ಮಿತ!

ನನ್ನ ದನಿಯು ನಿನ್ನ ದನಿಗೆ
ಬೆರೆಯಬಯಸಿ ಹಾಡುತಿಹುದು
ಬರಿಯ ಮಾತು ಮಾತ್ರವಾಗಿ
ಹಾಡಾಗಲು ಸೋಲುತಿಹುದು
ನಿನ್ನ ಮಧುರ ಗಾನದ ಬಲೆ
ಯಲ್ಲಿ ಸಿಲುಕಿದ ಮೀನು ನಾನು
ನಿನ್ನ ಗಾನದೊಡನೆ ನನ್ನ ದನಿಯ ಸೇರಿಸು
ನಿನ್ನ ಹಾಡಿನಲ್ಲಿ ನನ್ನ ಲೀನವಾಗಿಸು


[27/04, 23:59] : ಗೀತಾಂಜಲಿ -೪

ಜಗದ ಆದಿ ಚೈತನ್ಯವೆ
ನಿನಗೆ ನನ್ನಯ ಪ್ರಾರ್ಥನೆ

ನಿನ್ನ ಅಮೃತ ಸ್ಪರ್ಶ ನನ್ನ
ಅಂಗಾಂಗಗಳ ಆವರಿಸಿದೆ
ಅದಕೆ ನನ್ನ ಇಡಿಯ ದೇಹವ
ನಿರ್ಮಲವಾಗಿಡಲು ಬಯಸುವೆ

ನನ್ನ ಮನದ ತುಂಬ ತುಂಬಿದೆ
ನಿನ್ನ ಸತ್ಯದ ಕರುಣೆ ಬೆಳಕು
ಅದಕೆ ಸುಳ್ಳಿನ ಸುಖದ ಬಯಕೆಯು
ನನ್ನ ಭಾವದ ಹೊರಗಿದೆ

ನನ್ನ ಹೃದಯದ ಆಳದಲ್ಲಿ
ನಿನ್ನ ಬಿಂಬವು ಹುದುಗಿದೆ
ಅದಕೆ ಎದೆಯ ಕೊಳೆಯನೆಲ್ಲ
ತೊಳೆದು ಹೂ ಗಂಧವ ಧರಿಸಿದೆ

ನನ್ನ ಈ ಚೈತನ್ಯವೆಲ್ಲ
ನಿನ್ನ ಕೊಡುಗೆಯು ಹೇ ಪ್ರಭು
ಅದಕೆ ನನ್ನ ಕಾರ್ಯದಲ್ಲಿ
ನೀನು ಸಾಕಾರಗೊಂಡಿಹೆ

[28/04, 00:53] : ಗೀತಾಂಜಲಿ -೫

ನಾನು ಕ್ಷಣದ ಬಯಕೆಯನು ನಿನ್ನೆದುರು ಹರಡಿ ಕುಳಿತಿರುವೆ
ಕಾಯುತ್ತಿರುವ ನೂರು ಕೆಲಸಗಳನ್ನು ಮುಗಿಸುವೆ ಮತ್ತೆ

ನಿನ್ನ ನೋಟದಿಂದ ಮರೆಯಾದ ಕ್ಷಣ
ನನ್ನ ಹೃದಯಕ್ಕಿಲ್ಲ ಒಂದಿನಿತೂ ನೆಮ್ಮದಿ, ವಿರಾಮ
ದಡವಿಲ್ಲದ ಶ್ರಮ ಸಾಗರದಂತೆ
ನನ್ನ ಕೆಲಸಗಳೆಲ್ಲವೂ ಮುಗಿಯದ ಪಾಡಾಗುತ್ತವೆ

ಇಂದು ಬೇಸಿಗೆ ನನ್ನ ಕಿಡಕಿಯಲ್ಲಿಣುಕುತ್ತಿದೆ
ಅದರ ನಿಟ್ಟುಸಿರು, ಗೊಣಗಾಟ ನನ್ನ ಕಲಕಿದೆ
ಹೂ ತೋಪಿನ ಒಡ್ಡೋಲಗದಲ್ಲಿ
ದುಂಬಿಗಳು ಅಲೆಮಾರಿಯ ಹಾಡು ಹಾಡುತ್ತಿವೆ

ನಿನ್ನೊಂದಿಗೆ ಮುಖಾಮುಖಿಯಾಗಿ ಕುಳಿತಿರುವೆ ಪ್ರಭುವೆ
ಗಾಢ ಮೌನವನು ಕ್ಷಣಗಳು ಹೊದ್ದುಕೊಂಡಿವೆ
ಉಕ್ಕಿ ಹರಿಯುವ ಈ ವಿರಾಮ ಕಾಲದಲ್ಲಿ
ಬದುಕ ಸಮರ್ಪಣೆಯ ಹಾಡ ಹಾಡಬೇಕಿದೆ

ಕಾಯುತ್ತಿರುವ ಕೆಲಸಗಳನ್ನೆಲ್ಲ ಮತ್ತೆ ಮುಗಿಸುವೆ
ಈ ಕ್ಷಣವನ್ನು ನಿನ್ನೆದುರು ಹರಡಿ ಕುಳಿತಿರುವೆ

[28/04, 01:13] : ಗೀತಾಂಜಲಿ -೬

ಕಿತ್ತುಬಿಡು ಈ ಹೂವನ್ನು, ಕೈಗೆತ್ತಿಕೋ, ತಡಮಾಡಬೇಡ
ವಾಲುತ್ತಿದೆ ನೋಡು ನೆಲದೆಡೆಗೆ, ಬೀಳುವ ಮುನ್ನ ಧೂಳಿನೊಳಗೆ, ಕೊಯ್ದುಬಿಡು ನೀನು

ಹೂಮಾಲೆಯಲಿ ಜಾಗವಿಲ್ಲದಿರಬಹುದು ಅದಕೆ
ನಿನ್ನ ಕೈಯ್ಯ ಸ್ಪರ್ಶಕ್ಕೆ ಹಂಬಲಿಸಿದೆ, ಕೊಯ್ದುಕೋ
ಸಮರ್ಪಣೆಯ ಸಮಯವೀಗ ಜಾರಿ ಹೋಗುತ್ತಿದೆ
ದಿನವು ಮುಗಿಯುವ ಮುನ್ನ ಕಿತ್ತುಬಿಡು ಹೂವನ್ನ

ಹೂ ಬಣ್ಣ ಅಷ್ಟೇನೂ ಗಾಢವಿಲ್ಲದಿರಬಹುದು
ಮೈ ಮರೆಸುವ ಸುಗಂಧವ ಚೆಲ್ಲದಿರಬಹುದು
ನಿನ್ನ ಸೇವೆಗೆಂದೇ ಅರಳಿದೆ ಈ ಹೂವು
ಸಮಯ ಉರುಳುವ ಮುನ್ನ ಕೊಯ್ದುಬಿಡು ಅದನ
[29/04, 22:46] : ಗೀತಾಂಜಲಿ - ೭

ನನ್ನ ಹಾಡು ತನ್ನೆಲ್ಲ ಬೆಡಗಿನ ಪೋಷಾಕು ಕಳಚಿದೆ
ಶೃಂಗಾರದ ಬೆರಗ ಹೆಮ್ಮೆಯ ಬದಿಗೆ ಸರಿಸಿದೆ
ಆಭರಣಗಳು ನಡುವೆ ಬಂದು ದೂರವಾಗಿಸಬಹುದು
ಅದರ ಸದ್ದು ನಮ್ಮ ಪಿಸುದನಿಯ ಕಸಿಯಬಹುದು

ನಿನ್ನೆದುರು ನನ್ನ ಕವಿತನದ ವೈಯ್ಯಾರ ನಾಚಿ ಅಳಿಯಿತು
ಓ ಜಗದ ಕವಿಯೆ, ನಿನ್ನೆದುರು ನನ್ನ ಶಿರವು ಮಣಿಯಿತು
ಮಧುರಗಾನ ಮಿಡಿವ ನಿನ್ನ ಕೊಳಲ ರಂಧ್ರದಂತೆ
ನೇರ, ಸರಳವಿರಿಸು ನನ್ನ ಬದುಕ ಬೇಡಿಕೊಂಬೆ

[29/04, 23:18] : ಗೀತಾಂಜಲಿ - ೮

ಮುದ್ದು ಮಗುವಿಗಿಲ್ಲಿ ರಾಜಕುಮಾರನ ಪೋಷಾಕು ತೊಡಿಸಲಾಗಿದೆ
ಚಿನ್ನದ ಕಂಠೀಹಾರ ತರಳನ ಕೊರಳ ಬಳಸಿದೆ
ಹೆಜ್ಜೆಯಿಡಲೂ ಅಡ್ಡಿಪಡಿಸುತ್ತಿದೆ ಈ ಪೋಷಾಕು
ಬಾಲ್ಯದಾಟದ ಖುಶಿಯ ಕಳಕೊಂಡಿದೆ ಬದುಕು

ಝರಿಯಂಚು ಹರಿದೀತೆಂಬ ಭಯ
ಅಂಗಿ ಕೊಳೆಯಾದೀತೆಂಬ ಆತಂಕ
ಸಹಜ ಬದುಕಿನ ಕೊಂಡಿ ಕಳಚಿದೆ
ಭಯದ ನೆರಳಲ್ಲಿ ಹೆಜ್ಜೆ ಹಿಂಜರಿದಿದೆ

ಅಮ್ಮಾ, ಇವೆಲ್ಲವೂ ವ್ಯರ್ಥ ಸಾಹಸಗಳು
ನಿನ್ನ ಅತಿಪ್ರೀತಿ ಉಸಿರುಗಟ್ಟಿಸುವುದು ಕೇಳು
ಕಳೆದುಹೋಗಿದೆ ಬೆಳವಣಿಗೆಯ ಸಹಜ ಮಜಲುಗಳು
ಕಳೆದುಹೋಗುತ್ತವೆ ನೈಜ ಬದುಕಿನ ಸುಖಗಳು


ಗೀತಾಂಜಲಿ - ೯

ಮೂರ್ಖನೇ,
ನಿನ್ನ ಶಿಲುಬೆಯನು ನೀನೇ ಹೊತ್ತು ನಡೆದುಬಿಡು
ಓ ಭಿಕ್ಷುಕನೇ,
ನಿನ್ನ ಮನೆಯಂಗಳದಲ್ಲೇ ನಿಂತು ಭಿಕ್ಷೆ ಬೇಡು

ನಿಮ್ಮ ಎಲ್ಲ ದುಗುಡಗಳನ್ನೂ ಅವನ ಕೈಯ್ಯಲ್ಲಿಟ್ಟುಬಿಡಿ
ಎಂದಿಗೂ ವಿಷಾದದಿಂದ ಹಿಂದಿರುಗಿ ನೋಡದಿರಿ

ಆಸೆಗಳ ನಿಟ್ಟುಸಿರು ದಾರಿ ಬೆಳಗುವ ದೀಪವನ್ನಾರಿಸುತಿದೆ
ಅಶುದ್ಧ ಕೈಗಳಿಂದ ಪವಿತ್ರ ಉಡುಗೊರೆಗಳನ್ನು ಸ್ವೀಕರಿಸಲಾದು

ಗೀತಾಂಜಲಿ - ೧೨

ದೀರ್ಘಕಾಲದ ಪಯಣ ನನ್ನದು: ದಾರಿಯೂ ಅಷ್ಟೇ ದೀರ್ಘವಾಗಿದೆ
ಮೊದಲ ಬೆಳಕಿನ ಪುಂಜದ ರಥವನ್ನೇರಿ ಹೊರಟಿರುವೆ
ಭೂಮ್ಯಾಕಾಶದ ಮೇರೆ ಮೀರಿ ಚಲಿಸುತ್ತಿರುವೆ
ಎಲ್ಲ ತಾರೆ, ಗ್ರಹಗಳ ಮೇಲಿವೆ ನನ್ನ ಹೆಜ್ಜೆಗುರುತು!

ನಿನ್ನೆಡೆಗೆ ಬರುವ ದಾರಿಯೇ ಹಾಗೆ; ದೀರ್ಘ, ಸಂಕೀರ್ಣ
ರಾಗವನು ಅತಿ ಸರಳಗೊಳಿಸಿ ಹಾಡಿದ ಹಾಗೆ
ಎಲ್ಲ ಪರಕೀಯರ ಮನೆಯ ಬಾಗಿಲು ತಟ್ಟಬೇಕು
ನಮ್ಮ ಮನೆಯ ನಾವು ಕಂಡುಕೊಳಲು
ಜಗದ ಸೀಮೆಯನ್ನೆಲ್ಲ ದಾಟಿ ಬರಬೇಕು
ಒಳಗಿನರಿವಿನ ಬೆಳಕ ಸೇರಿಕೊಳಲು

ನನ್ನ ಕಣ್ಣುಗಳ ನೋಟ ದೂರ, ವಿಶಾಲ ಜಗದೆಡೆಗಿತ್ತು
ಕಣ್ಣು ಮುಚ್ಚಿ ಧ್ಯಾನಿಸಿದೆ; ಹೇಳಿದೆ "ಓ ನೀನಿಲ್ಲಿರುವೆ!"
"ಅರೆ! ಎಲ್ಲಿ?" ಪ್ರಶ್ನೆಯ ಕೂಗು ಕರಗಿತು
ಸಾವಿರ ಕಣ್ಣುಗಳ ಆನಂದಾಶ್ರುಗಳಲಿ
ಭರವಸೆಯ ಪ್ರವಾಹ ತೇಲಿಬರುತ್ತಿದೆ "ನಾನಿರುವೆ ಇಲ್ಲಿ!"



ಗೀತಾಂಜಲಿ -೫೯

ಹೌದು, ಇದು ಬರಿಯ ಬೆಳಗಲ್ಲ
ಬೇರೇನೂ ಅಲ್ಲ, ನಿನ್ನ ಪ್ರೀತಿಯ ಹೊರತು
ಈ ಎಲೆಗಳ ಮೇಲೆ ಹೊಳೆವಹೊನ್ನ ಕಿರಣ
ಆಕಾಶದಲ್ಲಿ ತೇಲುತ್ತಿರುವ ಮೋಡಗಳ ತೋರಣ
ನನ್ನ ಮುಖವ ಸೋಕುವ ಈ ತಂಪು ಗಾಳಿ
ಬರಿಯ ಬೆಳಗಲ್ಲವಿದು, ನಿನ್ನ ಅದಮ್ಯ ಪ್ರೀತಿ!

ಬೆಳಗಿನ ಬೆಳಕು ನನ್ನ ಕಣ್ತುಂಬಿದೆ
ನಿನ್ನ ಸಂದೇಶವನು ನನ್ನೆದೆಗೆ ದಾಟಿಸಿವೆ
ನಿನ್ನ ಮೊಗವೀಗ ನನ್ನೆಡೆಗೆ ಚಾಚಿದೆ
ನಿನ್ನ ಕಣ್ಣುಗಳು ನನ್ನ ಕಣ್ಣುಗಳ ದಿಟ್ಟಿಸಿವೆ
ನನ್ನ ಹೃದಯವೀಗ ನಿನ್ನ ಪಾದಗಳ ತಾಕಿದೆ
ಮತ್ತಿದು ಬರಿಯ ಬೆಳಗಲ್ಲ,  ನಿನ್ನ ಪ್ರೀತಿಯ ಹೊರತು


ಗೀತಾಂಜಲಿ - ೧೪

ನೂರಾರು ಆಸೆಗಳು ನನಗೆ
ಅದಕೆಂದೇ ಗೋಳಿಡುವೆ ಪ್ರತಿದಿನವೂ
ಮತ್ತೆ ನೀನು?
ಪ್ರತಿಸಲವೂ ನಿರಾಕರಣೆಯೆಂಬ ಸುತ್ತಿಗೆಯಲಿ
ಬಡಿದು ಹದವಾಗಿಸುತ್ತಿರುವೆ ದಿನವೂ

ನನ್ನ ಸರಳಗೊಳಿಸುತ್ತಿರುವೆ ದಿನ ದಿನವೂ
ನಿನ್ನ ನಂಬಿಗಸ್ತನಾಗಿಸಲು
ಈ ಆಗಸ, ಬೆಳಕು ನಿನ್ನದೇ ಕೊಡುಗೆ
ಕೇಳದೆಯೂ ನನಗದನು ನೀ ನೀಡಿರುವೆ
ಅಂತೆಯೇ ಈ ದೇಹ, ಜೀವನ, ಮನಸ್ಸುಗಳನೂ
ಆದರೆ...
ಅತೀವ ಬಯಕೆಯ ಅಪಾಯದಿಂದ
ನನ್ನನ್ನು ರಕ್ಷಿಸಿರುವೆ ಪ್ರತಿಬಾರಿಯೂ

ನಾನು ದಣಿದು ಕಾಲಹರಣ ಮಾಡುವಾಗಲೂ
ಎಚ್ಚರಗೊಂಡು ಗುರಿಯ ಬೆನ್ನತ್ತಿದಾಗಲೂ
ನೀನು ಎದುರು ಬಾರದೇ ಅಡಗಿ ಕುಳಿತು
ಕ್ರೂರವಾಗಿಯೇ ವರ್ತಿಸಿರುವೆ

ನನ್ನನ್ನೂ ಎಂದೆಂದಿಗೂ ನಿರಾಕರಿಸಿ
ದುರ್ಬಲ ಅಶಾಶ್ವತ ಆಸೆಗಳಿಂದ ಮುಕ್ತಗೊಳಿಸಿ
ದಿನದಿಂದ ದಿನಕ್ಕೆ ನಂಬಿಗಸ್ತನನ್ನಾಗಿಸಿರುವೆ ನೀನು

ಗೀತಾಂಜಲಿ -೧೬

ಈ ಜಗದ ಉತ್ಸವಕೆ ನನ್ನನ್ನು ಆಹ್ವಾನಿಸಿರುವೆ
ಪ್ರಭುವೇ, ನಾನು ನಿಜಕ್ಕೂ ಆಶೀರ್ವದಿಸಲ್ಪಟ್ಟುವೆ
ನನ್ನ ಕಣ್ಣಗಳಿಗೀಗ ದಿವ್ಯ ಕಾಣ್ಕೆ
ನನ್ನ ಕಿವಿಗಳಿಗೆ ಶ್ರಾವ್ಯ ಯೋಗ

ನನ್ನ ತಂಬೂರಿಯನು ಶ್ರತಿಗೊಳಿಸುತ್ತಿರುವೆ
ಈ ಉತ್ಸವದಲ್ಲಿ ನನಗೂ ಸ್ಥಾನವಿದೆ
ನನ್ನಿಂದಾಗುವ ಎಲ್ಲವನ್ನೂ ಮಾಡಬೇಕಿದೆ

ಈಗ ನಾನು ಕೇಳಿಕೊಳ್ಲಕುತ್ತಿದ್ದೇನೆ
ನನ್ನ ಕೊನೆಗಾಲದಲ್ಲಿ ನಿನ್ನ ದರ್ಶನವಾಗಬಹುದೆ?
ನನ್ನ ಮೌನ ಪ್ರಾರ್ಥನೆ ನಿನ್ನ ತಲುಪಬಹುದೆ?

ಗೀತಾಂಜಲಿ - ೧೭

ನಾನು ಪ್ರೀತಿಗಾಗಿ ಮಾತ್ರವೇ ಕಾಯುತ್ತಿದ್ದೇನೆ
ಅಂತಿಮವಾಗಿ ನನ್ನ ನಾನೇ ಅರ್ಪಿಸಿಕೊಳ್ಳಲು
ಅದಕ್ಕೆಂದೇ ಇಷ್ಟು ನಿಧಾನಿಸುತ್ತಿದ್ದೇನೆ
ನನ್ನ ಲೋಪಗಳ ಬಗ್ಗೆ ಪಶ್ಚಾತ್ತಾಪವಿದೆ

ಅವರು ನನ್ನ ಬಂಧಿಸಲು ಬರುತ್ತಾರೆ
ತಮ್ಮ ಕಾನೂನು ಕಟ್ಟಳೆಗಳ ಹತಿಯಾರದೊಂದಿಗೆ
ನಾನು ಸದಾ ತಪ್ಪಿಸಿಕೊಂಡೇ ತಿರುಗುತ್ತೇನೆ
ನಾನು ಪ್ರೀತಿಗಾಗಿಯೇ ಕಾಯುತ್ತಿದ್ದೇನೆ
ಅಂತಿಮವಾಗಿ ಅದರ ತೋಳಿನಲ್ಲಿರಲು

ನನ್ನ ಅಜಾಗರೂಕತೆಗಾಗಿ ಜನರು ಶಪಿಸುತ್ತಾರೆ 
ಅವರ ಬೈಗುಳದಲ್ಲಿ ಸತ್ಯವಿದೆಯೆಂದು ನನಗನಿಸುವುದಿಲ್ಲ

ಸಂತೆ ಮುಗಿದಿದೆ ಮತ್ತು ಕೆಲಸವೂ ಅವಸರದಲ್ಲಿ
ನನ್ನ ಕರೆಯಬಂದವರು ಕೋಪದಿಂದ ಹಿಂದಿರುಗಿದ್ದಾರೆ
ನಾನು ಬರಿಯ ಪ್ರೀತಿಗಾಗಿ ಕಾಯುತ್ತಿದ್ದೇನೆ
ಅಂತಿಮವಾಗಿ ಪ್ರೀತಿಯ ಬಂಧಿಯಾಗಲು

ಗೀತಾಂಜಲಿ - ೧೮

ದಟ್ಟ ಕಾರ್ಮೋಡ ಕವಿಯುತ್ತಿದೆ
ಸುತ್ತ ಕತ್ತಲೆ ಮುಸುಕುತ್ತಿದೆ
ಓ ಪ್ರೀತಿಯೇ,
ಯಾಕೆ ನನ್ನನ್ನಿನ್ನೂ ಬಾಗಿಲ ಬಳಿಯೇ
ಒಂಟಿಯಾಗಿ ಕಾಯುವಂತೆ ಮಾಡುತ್ತಿರುವೆ?

ದಿನದ ದಂದುಗದ ಒತ್ತಡದ ಗಳಿಗೆಗಳಲ್ಲಿ
ನಾನು ಜನಸಂದಣಿಯಲ್ಲಿ ಕಳೆದುಹೋಗುತ್ತೇನೆ
ಈ ಒಂಟಿತನದ ಕತ್ತಲ ರಾತ್ರಿಯಲಿ
ನಿನ್ನ ಸಂಗಾತಕ್ಕಾಗಿ ಎಚ್ಚರವಿದ್ದು ಕಾಯುತ್ತೇನೆ

ನಿನ್ನ ಮುಖದರ್ಶನದ ಭಾಗ್ಯವಿಲ್ಲದಿದ್ದರೆ
ನಿನೇ ನಿರ್ಲಕ್ಷದಿಂದ ಬದಿಗೆ ಸರಿಸಿದರೆ
ಈ ದೀರ್ಘಮಳೆರಾತ್ರಿಗಳನು ಒಂಟಿಯಾಗಿ
ಹೇಗೆ ಕಳೆಯುವುದೆಂದು ತಿಳಿಯೆ ನಾನು

ದೂರ ದಿಗಂತದೆಡೆಗೆ ನನ್ನ ದೃಷ್ಟಿ ಹರಿಸುತ್ತೇನೆ
ಸುಳಿದಾಡುವ ಗಾಳಿಯಂತೆ ಹೃದಯವೀಗ ಹೊಯ್ದಾಡುತ್ತಿದೆ

[14/05, 11:26] : ಗೀತಾಂಜಲಿ -೨೦

ಆಹಾ! ಕಮಲವೊಂದು ಅರಳಿದ ಆ ದಿನ
ಯಾಕೋ ಅರಿಯೆ, ನನ್ನ ಮನಸ್ಸು ದಾರಿ ತಪ್ಪಿತು
ನನ್ನ ಹೂದಾನಿ ಖಾಲಿಯಾಗಿತ್ತು ಮತ್ತು
ಹೂವು ಗಮನಕ್ಕೆ ಬಾರದೇ ಉಳಿಯಿತು

ಆಗೀಗ ಬೇಸರದ ಛಾಯೆ ಮುಸುಕಿದಾಗ
ನಾನು ಕನಸುಗಳ ಬೆಂಬತ್ತಿ ಹೊರಟೆ
ದಕ್ಷಿಣದ ಗಾಳಿಯಲಿ ವಿಚಿತ್ರ ಮಾಧುರ್ಯದ ಸೆಳೆತವಿತ್ತು

ದೀರ್ಘಕಾಲದ ಅಸ್ಪಷ್ಟ ಮಾಧುರ್ಯ
ನನ್ನ ಹೃದಯವನ್ನು ನೋಯಿಸಿತು
ಉತ್ಸಾಹೀ ಬೇಸಗೆಯ ಉಸಿರು ಪೂರ್ಣಗೊಳ್ಳಲು ಹಪಹಪಿಸುತ್ತಿತ್ತು

ನನಗೆ ತಿಳಿದಿರಲಿಲ್ಲ ಮಾಧುರ್ಯ ಎಲ್ಲಿದೆಯೆಂದು
ಅದು ಅಷ್ಟು ಹತ್ತಿರದಲ್ಲಿತ್ತು, ನನ್ನೊಳಗೇ
ನನ್ನ ಹೃದಯದಾಳದಿಂದಲೇ ಅರಳಿ ಬಂದಿತ್ತು
[14/05, 11:36] : ಗೀತಾಂಜಲಿ -೨೧

ವಸಂತ ಅದಾಗಲೇ ಹೂವನರಳಿಸೊದ್ದ
ಎಲೆಗಳ ತೆರಿಗೆ ಪಡೆದುಕೊಂಡು
ಪಕಳೆಯುದುರಿದ ಹೂಗಳ ನಿರರ್ಥಕತೆಯ ಧರಿಸಿ
ನಾನು ಕಾಯುತ್ತಿದ್ದೆ ಲಂಗರು ಹಿಡಿದುಕೊಂಡು

ನಾನು ನನ್ನ ನಾವೆಯನ್ನು ನಡೆಸಬೇಕಿತ್ತು
ನಿರರ್ಥಕ ಘಳಿಗೆಗಳು ದಾಟಿ ಹೋಗುತ್ತಿದ್ದವು
ಓಹ್! ಅವೆಲ್ಲವೂ ನನ್ನದಾಗಿದ್ದವು!

ಅಲೆಗಳ ಅಬ್ಬರ ಜೋರಾಗಿಯೇ ಇತ್ತು
ನೆರಳಿನ ದಂಡೆಯಲಿ ಹಳದಿ ಎಲೆಗಳಿದ್ದವು
ಅದುರುತ್ತಿದ್ದವು ಮತ್ತು ಉದುರುತ್ತಿದ್ದವು

ಯಾವ ಖಾಲಿತನವನ್ನು ಎದುರು ನೋಡುತ್ತಿರುವೆ?
ಆಚೆಯ ದಡದಿಂದ ಬೀಸಿ ಬರುತ್ತಿರುವ
ಗಾಳಿಯೊಂದಿಗೆ ತೇಲಿಬಂದ ಗಾನದೊಳಗೆ
ಮುಳಿಗಿಹೋಗುವುದು ರೋಮಾಂಚಕವೆನಿಸುತ್ತಿಲ್ಲವೆ ನಿನಗೆ?
[14/05, 11:41] : ಗೀತಾಂಜಲಿ -೨೨

ಜುಲೈ ತಿಂಗಳ ಮಳೆಯ ರಾತ್ರಿಗಳಲ್ಲಿ
ನಿನ್ನ ರಹಸ್ಯ ಹೆಜ್ಜೆಗಳು
ರಾತ್ರಿಯಷ್ಟೇ ಮೌನವಾಗಿ
ವೀಕ್ಷಕರ ಕಣ್ಣು ತಪ್ಪಿಸಿ ಚಲಿಸುತ್ತವೆ

ಇಂದಿನ ಬೆಳಗು ಕಣ್ಣುಗಳನ್ನು ಮುಚ್ಚಿಕೊಂಡಿದೆ
ಪೂರ್ವದ ಗಾಳಿಯ ಕರೆಯು ಭೋರ್ಗರೆಯುತ್ತಿದೆ!
ಸದಾ ಎಚ್ಚರವಿರುವ ನೀಲಿಯ ಆಗಸಕ್ಕೆ
ಗಾಢವಾದ ಮುಸುಕನ್ನು ಎಳೆಯಲಾಗಿದೆ
ಕಾಡುಗಳು ಎದೆಯ ಹಾಡುಗಳನ್ನು ಅಡಗಿಸಿವೆ
ಎಲ್ಲರ ಮನೆಯ ಬಾಗಿಲುಗಳೂ ಮುಚ್ಚಿವೆ

ನಿರ್ಜನವಾದ ಓಣಿಯಲ್ಲಿ ನೀನೊಬ್ಬನೇ ಪಥಿಕ
ಓ ನನ್ನ ಒಬ್ಬನೇ ಗೆಳೆಯನೇ, ಪರಮಾಪ್ತ ಸ್ನೇಹಿತನೇ,
ನನ್ನ ಮನೆಯ ಬಾಗಿಲುಗಳು ತೆರೆದೇ ಇವೆ
ಕನಸಿನಂತೆ ಸುಳಿದು ಹೋಗಬೇಡ

ಸೃಷ್ಟಿಯ ಆರಂಭದ ದಿನ
ಎಲ್ಲ ತಾರೆಗಳೂ ಒಮ್ಮೆಲೆ
ಝಗ್ಗೆಂದು ಮಿನುಗಿದವು!
ಆಗಸದ ತಾರೆಗಳ ಸಭೆಕರೆದು
ಜಗನ್ನಿಯಾಮಕ ಹಾಡು ಹಾಡಿದ
"ಓ... ನನ್ನ ಜಗತ್ತೀಗ ಪರಿಪೂರ್ಣವಾಗಿದೆ
ಪರಿಶುದ್ಧ ಆನಂದ ಇಡೀ ಜಗವ ತುಂಬಿದೆ"
ಇದ್ದಕ್ಕಿದ್ದಂತೆ ಕೇಳಿಬಂತೊಂದು ಕೂಗು!
"ಅಗೋ, ಬೆಳಕಿನ ರೇಖೆ ತುಂಡಾಗಿದೆ
ಎಲ್ಲೋ ಒಂದು ತಾರೆಯ ಅವಸಾನವಾಗಿದೆ"

ಕಾಲದ ವೀಣೆಯ ಚಿನ್ನದ ತಂತಿ ತುಂಡಾಯಿತು
ಮಂಜುಳ ಗಾನವು ಮೌನಕ್ಕೆ ಜಾರಿತು

ಎಲ್ಲರೂ ನಿರಾಸೆಯಿಂದ ಹಾಡಿದರು
"ಹೌದು, ಘನ ನಕ್ಷತ್ರದ ಸಾವಾಗಿದೆ
ಸ್ವರ್ಗದ ಘನತೆಗೆ ಕುಂದಾಗಿದೆ"

ಅಂದಿನಿಂದಲೂ ಹುಡುಕುತ್ತಲೇ ಇದ್ದಾರೆ
ಕುಂದಿಲ್ಲದ ಜಗದ ಮಹದಾನಂದವನ್ನು
ಹುಡುಕಾಟ ತಲೆಮಾರುಗಳ ದಾಟುತ್ತಲೇ ಬಂದಿದೆ
ಇಡಿಯ ಲೋಕದ ತುಂಬೆಲ್ಲಾ ಚಾಚಿಕೊಂಡಿದೆ
ಜಗತ್ತು ನೆಮ್ಮದಿಯನ್ನು ಕಳಕೊಂಡಿದೆ

ಕಡುಗತ್ತಲೆಯ ನಿಶ್ಶಬ್ದ ಇರುಳಿನಲ್ಲಿ
ತಾರೆಗಳು ತಮ್ಮಲ್ಲಿಯೇ ಪಿಸುಗುಡುತ್ತವೆ
ತಾವೇ ಕಣ್ಣುಮಿಟುಕಿಸಿ ನಗುತ್ತವೆ
"ಬಿರುಕಿಲ್ಲದ ಪೂರ್ಣತೆಯ ಹುಡುಕಾಟ
ಆಹಾ! ಅದೆಷ್ಟು ವ್ಯರ್ಥ!"

ರವೀಂದ್ರನಾಥ ಟ್ಯಾಗೋರ್
ಗೀತಾಂಜಲಿ ೭೮



Monday, April 12, 2021

ಯುಗಾದಿ ಕವನಗಳು

‘ಯುಗಾದಿ’ಯ ಕವಿತೆಗಳು

 ◆ ಎಲ್ಲರಿಗೂ ಯುಗಾದಿಯ ಶುಭಾಶಯಗಳು. 

ಸ್ನೇಹಿತರ್ಯಾರೋ ಸಂಗ್ರಹಿಸಿ ಆನ್ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ ಕವಿತೆಗಳಿವು. ಕನ್ನಡ ಕವಿಗಳ ಯುಗಾದಿ ಕವಿತೆಗಳನ್ನು ಓದಿ ಸಂತಸಪಡುವ ಅವಕಾಶ ಮಾಡಿದ ಆ ಅಜ್ಞಾತರಿಗೆ ಧನ್ಯವಾದಗಳು.

ೱೱೱೱೱೱೱೱೱೱೱೱೱೱೱ

◆ ವರಕವಿ ದ.ರಾ. ಬೇಂದ್ರೆಯವರ 
           ‘ಯುಗಾದಿ’

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಿಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.
ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರಯ
ನಮಗದಷ್ಟೆ ಏತಕೆ?
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

(ಕೃಪೆ: ಔದುಂಬರ ಗಾಥೆ, ಸಂಪುಟ-೪. 
ಸಂಪಾದಕರು: ವಾಮನ ಬೇಂದ್ರೆ)

◆ ರಸಋಷಿ ಕುವೆಂಪು ಅವರ
            ‘ಯುಗಾದಿ’

ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು!

ಗೀತೆಯ ಘೋಷದಿ ನವ ಅತಿಥಿಯ ಕರೆ;
ಹೃದಯ ದ್ವಾರವನಗಲಕೆ ತೆರೆ, ತೆರೆ!
ನವ ಜೀವನ ರಸ ಬಾಳಿಗೆ ಬರಲಿ,
ನೂತನ ಸಾಹಸವೈತರಲಿ!

ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು; ಮರೆ;
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ವತ್ಸರವನು ಕೂಗಿ ಕರೆ!

ಸಂಶಯ ದ್ವೇಷಾಸೂಯೆಯ ದಬ್ಬು;
ಸುಖಶ್ರದ್ಧಾ ಧೈರ್ಯಗಳನು ತಬ್ಬು,
ಉರಿಯಲಿ ಸತ್ಯದ ಊದಿನಕಡ್ಡಿ,
ಚಿರ ಸೌಂದರ್ಯದ ಹಾಲ್ಮಡ್ಡಿ!

ತೊಲಗಲಿ ದುಃಖ, ತೊಲಗಲಿ ಮತ್ಸರ,
ಪ್ರೇಮಕೆ ಮೀಸಲು ನವ ಸಂವತ್ಸರ!
ನಮ್ಮೆದೆಯಲ್ಲಿದೆ ಸುಖನಿಧಿ ಎಂದು
ಹೊಸ ಹೂಣಿಕೆಯನು ತೊಡಗಿಂದು!

ಮಾವಿನ ಬೇವಿನ ತೋರಣ ಕಟ್ಟು,
ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವೂಬೆಲ್ಲ;
ಎರಡೂ ಸವಿವನೆ ಕಲಿ ಮಲ್ಲ!

ಹೊಸ ಮರದಲಿ ಹೂ ತುಂಬಿದೆ ನೋಡು!
ಆಲಿಸು! ಜೇನಿನ ಹಬ್ಬದ ಹಾಡು!
ಜೀವನವೆಂಬುದು ಹೂವಿನ ಬೀಡು;
ಕವಿಯೆದೆ ಹೆಜ್ಜೇನಿನ ಗೂಡು!

ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!

(ಕೃಪೆ: ಕುವೆಂಪು ಸಮಗ್ರಕಾವ್ಯ , ಸಂಪುಟ-೧. ಸಂಪಾದಕರು: ಡಾ.ಕೆ.ಶಿವಾರೆಡ್ಡಿ)

◆ ಮಲ್ಲಿಗೆಯ ಕವಿ 
ಕೆ.ಎಸ್.ನರಸಿಂಹಸ್ವಾಮಿಯವರ        
      ‘ಯುಗಾದಿ’

ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು.

ಹೊಸತು ವರುಷ, ಹೊಸತು ಹರುಷ-
ಹೊಸತು ಬಯಕೆ ನಮ್ಮವು
ತಳಿರ ತುಂಬಿದಾಸೆಯೆಲ್ಲ,
ಹರಕೆಯೆಲ್ಲ ನಮ್ಮವು.

ಬಂಜೆ ನೆಲಕೆ ನೀರನೂಡಿ
ಹೊಳೆಯ ದಿಕ್ಕು ಬದಲಿಸಿ
ಕಾಡ ಕಡಿದು ದಾರಿ ಮಾಡಿ
ಬೆಟ್ಟ ಸಾಲ ಕದಲಿಸಿ.

ಹಿಮಾಚಲ ನೆತ್ತಿಯಲಿ
ಧ್ವಜವನಿಟ್ಟು ಬಂದೆವು;
ಧ್ರುವಗಳಲ್ಲಿ ಹೆಜ್ಜೆಯೂರಿ
ಹೊಸನೆಲೆಗಳ ಕಂಡೆವು.

ಬಾನಸೆರೆಯ ಕಲ್ಪಲತೆಗೆ
ನಮ್ಮ ಕಿಡಿಯ ಮುತ್ತಿಗೆ.
ಮುಗಿಯಬಹುದು ನಾಳೆಯೊಳಗೆ
ದೇವತೆಗಳ ಗುತ್ತಿಗೆ!

ಹುಟ್ಟು ಬೆಂಕಿ ನಮ್ಮ ತಾಯಿ;
ಉಟ್ಟ ಸೀರೆ ಸಾಗರ.
ಅವಳ ಮುಗಿಲ ತುರುಬಿನಲ್ಲಿ
ಹೆಡೆಯ ತೆರೆದ ನಾಗರ.

ಅವಳ ಪ್ರೀತಿ ನಮಗೆ ದೀಪ;
ಅವಳ ಕಣ್ಣು ಕಾವಲು.
ಬಿಸಿಲ ತಾಪ, ಮಳೆಯ ಕೋಪ-
ಸಂತೋಷವೇ ಆಗಲೂ.

ಹೆಜ್ಜೆಗೊಂದು ಹೊಸ ಯುಗಾದಿ-
ಚೆಲುವು ನಮ್ಮ ಜೀವನ!
ನಮ್ಮ ಹಾದಿಯೋ ಅನಾದಿ,
ಪಯಣವೆಲ್ಲ ಪಾವನ.

◆ ‘ಯುಗಾದಿ ‘೮೭’ ಕವನದ 
ಎರಡು ಪದ್ಯಗಳು

ಹೊಸ ವರುಷ ಬಂತು ಮಾಂದಳಿರಿನಲ್ಲಿ,
ಮುಗಿವಿರದ ಚೆಲುವಿನಲ್ಲಿ,
ಹೂಬಿಸಿಲಿನಲ್ಲಿ, ಉಪವನಗಳಲ್ಲಿ,
ಎದೆ ತುಂಬಿದೊಲವಿನಲ್ಲಿ.

ಹೊಸ ವರುಷ ಬಂತು! ನಾನಿಲ್ಲಿ ನಿಂತು
ಹಾಡೊಂದ ನೂಲುತಿಹೆನು.
ಅಲ್ಲೊಂದು ಹಕ್ಕಿ ಇಲ್ಲೊಂದು ಹೂವು!-
ನಾನವನು ನೋಡುತಿಹೆನು.

(ಕೃಪೆ: ಮಲ್ಲಿಗೆಯ ಮಾಲೆ)

◆ ಪು.ತಿ.ನರಸಿಂಹಚಾರ್ ಅವರ 
‘ಹೊಸ ವರುಷ ಬಹುದೆಂದಿಗೆ’ 
ಕವಿತೆಯ ಎರಡು ಪದ್ಯಗಳು

ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ-

ಜಾಣ ಜಿತೇಂದ್ರಿಯ ಧಿರನಾವನೋ
ಚಾಣಿಕ್ಯನ ತೆರ ನಲ್ ಕೇಣದ ನೆಲೆಮತಿ
ಅಂಥವ ತರಬಲ್ಲನು ಹೊಸ ವರುಷ
ಅಂಥಿಂಥವರಿಂ ಬರಿ ಕಲುಷ

(ಕೃಪೆ: ಪುತಿನ ಸಮಗ್ರ ಕವನಗಳು)

◆ ಗೋಪಾಲಕೃಷ್ಣ ಅಡಿಗರ 
‘ಯುಗಾದಿ’ ಕವಿತೆಯ 
ಎರಡು ಪದ್ಯಗಳು

ಯುಗಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ
ಹೊಸಹೊಸವು ಪ್ರತಿ ವರುಷವು;
ಒಳಗೆ ಅದೋ ಕಾಣುತಿದೆ ಚೆಲುವಿರದ ನಲವಿರದ
ಕೊಳೆಯ ಬೆಳೆ;- ರಂಗಮಂದಿರವು!

ಈ ಯುಗಾದಿಯ ಮಾತು ಕೇಳುತಿದೆ ಮರಮರಳಿ
ಮೊದಲಾಗುತ್ತಿದೆ ಯುಗವು, ನರನ ಜಗವು;
ವರುಷವರುಷವು ನಮ್ಮ ಪಯಣ ಮೊದಲಾಗುತ್ತಿದೆ;
ಇದಕು ಮಿಗಿಲಿಲ್ಲ, ಹಾ, ನರಗೆ ಸೊಗವು!

(ಕೃಪೆ: ಸಮಗ್ರ ಕಾವ್ಯ)

◆ ಕೆ.ಎಸ್.ನಿಸಾರ್ ಆಹಮದ್
    ಅವರ ‘ವರ್ಷಾದಿ’

ವರ್ಷಾದಿಯ ತಿಳಿನಗೆಯ ಮೊಗವೆ
ಶುಭ ಯುಗಾದಿ ಕರೆವ ಸೊಗವೆ
ಋತುಗಳ ಗಣನಾಯಕ
ಶರಣೆನ್ನುವೆ ಶುಭದಾಯಕ.

ಹೊಸ ಬಟ್ಟೆಯ ತೊಟ್ಟು ಚೈತ್ರ
ಜಲದರ್ಪಣ ಮಗ್ನ ನೇತ್ರ
ಮುಗಿಲಿನ ಪಂಚಾಂಗ ತೆರೆಸಿ
ಕುಳಿತಿಹ ಫಲ ತಿಳಿಯ ಬಯಸಿ.

ಬೆವರ ಹೀರಿ ಬೆಳೆದ ಪೈರು
ಕಣಕಣದಲಿ ಹೊನ್ನ ತೇರು.
ಕಣಜ ತುಂಬಿ ತುಳುಕಿ ಹಿಗ್ಗಿ
ನಾಡಿಗೊದಗಿ ಬಂತು ಸುಗ್ಗಿ.

ಪ್ರತಿ ಯುಗಾದಿ ವಿಜಯದೊಸಗೆ
ಸತ್ವ ರಜೋಗುಣದ ಬೆಸುಗೆ
ಅಸುರ ವಧೆಯ ವೀರಗಾಥೆ
ಕನ್ನಡಿಗರ ಗೆಲವ ಗೀತೆ.

ಎರಡು ದಿನದ ಹಬ್ಬದಂದು
ಬೆಳಕಿನಲ್ಲಿ ಬಾಳು ಮಿಂದು
ಮೊದಲ ಚಂದ್ರ ವೀಕ್ಷಣೆ
ಜನಕೆ ತರಲಿ ರಕ್ಷಣೆ.

◆ ‘ಯುಗಾದಿ : ೧೯೯೦’ 
ಕವಿತೆಯ ಎರಡು ಪದ್ಯಗಳು

ಹಳೆ ಯುಗಾದಿಯ ಹಾದಿ ಈ ಯುಗಾದಿಯು ಹಿಡಿದು
ಏರಿದೆ ಭವಾದ್ರಿಯನು ಏದಿ, ಏದಿ.
ಯಾವ ಉಡುಗೊರೆ ಜಗಕೆ ನೀಡಲಿಹುದೋ ಕಾಣೆ
ಪ್ರಮೋದೂತ ನಾಮದ ಸ್ವೈರತಾಮೋದಿ.

ಚೈತ್ರ ಮಾಂತ್ರಿಕ ಸ್ಪರ್ಶಕೆಲ್ಲ ಉದ್ಯಾನವನ
ಪಲ್ಲವಿಸಿ, ಕರೆಯೋಲೆ ಕಳಿಸುವಂತೆ-
ಸೌಭಾಂಗ್ಯ ಪಕ್ಷಿಕುಲ ಪ್ರತಿ ಬಾಳ್ವೆಯಲಿ ಸಂದು
ಹೊಸ ವರ್ಷ ನೆರೆಸಿರಲಿ ಸೊಗದ ಸಂತೆ.

(ಕೃಪೆ: ಸಮಗ್ರ ಕವಿತೆಗಳು)

◆ ಜಿ.ಎಸ್.ಶಿವರುದ್ರಪ್ಪ ಅವರ 
      ‘ಯುಗಾದಿಯ ಹಾಡು’

ಬಂದ ಚೈತ್ರದ ಹಾದಿ ತೆರೆದಿದೆ
ಬಣ್ಣ-ಬೆಡಗಿನ ಮೋಡಿಗೆ
ಹೊಸತು ವರ್ಷದ ಹೊಸತು ಹರ್ಷದ
ಬೇವು-ಬೆಲ್ಲದ ಬೀಡಿಗೆ.

ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಆನಂದಕೆ!

ಇದ್ದುದೆಲ್ಲವು ಬಿದ್ದುಹೋದರು
ಎದ್ದು ಬಂದಿದೆ ಸಂಭ್ರಮ.
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.

ಒಳಿತು ಕೆಡುಕೋ ಏನು ಬಂದರು
ಇರಲಿ ಎಲ್ಲಕು ಸ್ವಾಗತ
ಸ್ಪರ್ಧೆಯಿಲ್ಲದ ಶ್ರದ್ಧೆಯೊಂದೇ
ಸ್ಫೂರ್ತಿಯಾಗಲಿ ಸಂತತ.

ಹಳತು-ಹೊಸತೂ ಕೂಡಿ ಮೂಡಿಸುವಂಥ
ಪಾಕವ ನೋಡಿರಿ
ಎಲ್ಲ ರುಚಿಗೂ ರಸನೆಯಾಗುತ
ಪುಟ್ಷಿಗೊಳ್ಳುತ ಬಾಳಿರಿ.

ಯುಗ ಯುಗಾದಿಗೆ ಹೊಸತು ಹರ್ಷವು
ಬರಲಿ, ಬಾರದೆ ಹೋಗಲಿ;
ಬಂದ ಚೈತ್ರ ಚಿಗುರಿನಂದದ
ಮಂದಹಾಸವೆ ಉಳಿಯಲಿ.

◆ ‘ಯುಗಾದಿಯ ಪ್ರಶ್ನೆಗಳು’ 
ಕವಿತೆಯ ಒಂದು ಪದ್ಯ

ನಾನು, ನನ್ನಪ್ಪ, ಅವರಪ್ಪನಪ್ಪ,
ಮಗ, ಮೊಮ್ಮೊಗ, ಮರಿಮಗ, ಗಿರಿಮಗ
ಈ ಗಿರಿಗಿರಿ ತಿರುಗವೀ ಪುನರಪಿ
ಜನನಂ ಪುನರಪಿ ಮರಣಂ ಚಕ್ರ
ಗತಿಯೊಳಗೆ ದಿನಾ ಬೆಳಕಿಗೆ ಎದ್ದು
ಕತ್ತಲೆಗೆ ಬಿದ್ದು ಸುತ್ತುತ್ತಲೇ ಇರುವ
ಈ ಭವ ಭವದ ಮಧ್ಯೆ ಪ್ರಭವ
ನಾಮ ಸಂವತ್ಸರದಲ್ಲಿ ನಿಂತಿರುವ ಈ ನನಗೆ
ಯಾವುದು ಮೊದಲು, ಯಾವುದು ಕೊನೆ?

(ಕೃಪೆ: ಸಮಗ್ರ ಕಾವ್ಯ)

◆ ಎಚ್.ಎಸ್.ವೆಂಕಟೇಶಮೂರ್ತಿ 
       ಅವರ ‘ಯುಗಾದಿ’

ನಾವು ನಮ್ಮೂರಿಂದ
ನಿಮ್ಮ ಊರಿಗೆ ಹೊರಟ ದಾರಿಯಲ್ಲಿ
ಇದು ಒಂದು ಮೈಲಿಗಲ್ಲು!
ಸಿರಿವಂತ ಕಾರಿನಲಿ,
ಬಡವ ಬರಿಗಾಲಿನಲಿ
ನಡೆದು ಬಂದುದು ಇದೇ ದಾರಿಯಲ್ಲಿ!

ಇಂಥ ಒನ್ ವೇ ಟ್ರಾಫಿಕ್ಕಿನಲ್ಲಿ
ಕಲ್ಲು ಹೂಗಳ ಚೆಲ್ಲಿ,
ಮುಳ್ಳು ಮರಗಳ ನೆಟ್ಟು,
ಅದರ ನಡುವೆಯೆ ಮಧುರ ಸವಿಜೇನ ಹಲ್ಲೆಗಳ
ಜೋಲಿಯಾಡಲು ಬಿಟ್ಟು,
ದಾರಿಯಲಿ ಅಲ್ಲಲ್ಲಿ,
ಗುಂಡಿಗಳ ತೋಡಿ,
ಮೇಲೆ ಹುಲ್ಲನು ಹಾಸಿ
ಜೀವಿಗಳ ಖೇಡ್ಡಾ ನೋಡುವ ಸಾರಿಗೇ ಸಂಸ್ಥೆಯ ಒಡೆಯ
ಯಾರೆಂಬುದೇ ಯಾರೂ ಅರಿಯದಂತಹ ಗುಟ್ಟು!
ಅದು ರಟ್ಟಾಗದಂತೆ
ಮುಂದೆ ಇಬ್ಬನಿ ತುಂಬಿ ದಟ್ಟವಾಗಿದೆಯಂತೆ!

ಇಷ್ಟು ದೂರವ ಹೇಗೋ ನಡೆದು ಬಂದೆವು ನಾವು.
ನಮ್ಮ ಕಣ್ಣೆದುರಿಗೇ ಬಿದ್ದವರು ಬಿದ್ದರು.
ಬಿಸಿಲಿನಲಿ, ಮಳೆಯಲ್ಲಿ
ರಾತ್ರಿಯಲಿ ಹಗಲಲ್ಲಿ
ನಡೆದಿದ್ದೆ ನಡೆದಿದ್ದು
ಹತ್ತಿದ್ದು, ಇಳಿದಿದ್ದು,
ಮುಗ್ಗುರಿಸಿ ಬಿದ್ದು ಎದ್ದದ್ದು,
ಹೊಸ ಹೊಣೆಯ ಹೆತ್ತದ್ದು, ಹೊತ್ತದ್ದು,
ಮಳೆಯಲ್ಲಿ ನೆಂದು ಬಿಸಿಲಲ್ಲಿ ಒಣಗಿ

ಆದರೂ ಹೆಣಗಿ
ಮುಳ್ಳು ಮರದಡಿಯೇ ತುಸು ಮಲಗಿ
ಮಗುವಾಗಿ
ಆತ್ತು ನಕ್ಕಿದ್ದು!

-ಎಲ್ಲಾ ಇಂದು ಹೆಗಲ ಮೇಲಿನ ಗಟ್ಟಿ ಪೆಟ್ಟಿಗೆಯ ತಳದಲ್ಲಿ ನುಸಿ ಹಿಡಿದು ನವೆಯುತ್ತ
ಅಲ್ಲೊಂದು ಇಲ್ಲೊಂದು ಉಳಿದಿದ್ದು!
ಹಳೆಯ ಫೈಲಿನ ಮಸುಕು ಹಾಳೆಯಂತೆ.

ಮಂಜು ಆವರಿಸಿರುವ ಮುಂದಿರುವ ದಾರಿಯಲಿ
ನಡೆದವರೆ ಇಲ್ಲ!
ಇನ್ನು ನಡೆ-ನಡೆದಂತೆ ಹೆಜ್ಜೆ-ಹೆಜ್ಜೆಯ ಗುರುತು
ಹೂವಾಗಿ ಅರಳಬೇಕು!
ಅಥವಾ-
ಹಾವಾಗಿ ಹೊರಳಬೇಕು!

ಬಗೆಬಗೆಯ ಆ ಗುರುತ
ನನ್ನ ಕೈ ಕ್ಯಾಮರದಿ ಹಿಡಿಯಬೇಕು!
ಅದಕಾಗಿಯೇ ನೀವು, ನಾವು ಅವರೂ ಕೂಡ
ಮುಂದೆ ಸಿಗಬಹುದಾದ ಮೈಲುಗಲ್ಲಿನವರೆಗೆ
ನಡೆಯಬೇಕು!

(ಕೃಪೆ: ಮೂವತ್ತು ಮಳೆಗಾಲ, ಸಂಪುಟ-೧)

Tuesday, January 05, 2021

ಕವನ

ನಿಜವಾಗಿ ನೋಡಿದರೆ ಹೊಸದೇನಿದೆ ಇದರಲ್ಲಿ?
ಭೂಮಿಯ ಮೇಲೆ ಅಧಿಕಾರ ಬೇಡ
ಅವಳು ಹೆಣ್ಣು ಎಂದಿದ್ದರು ಅವರು
ನಾವು ಭೂಮ್ತಾಯಿ ಪಾದಕ್ಕೆ ಶರಣೆಂದೆವು
ತಾಯ ತುಳಿವಾಗಲೂ ಕಂಪಿಸಿದೆವು
ಬೀಜವೂರುವಾಗಲೂ ಪೂಜಿಸಿದೆವು
ಹಸಿರುಡುಗೆಯುಟ್ಟಾಗ ಕಣ್ತುಂಬಿಕೊಂಡೆವು
ತೆನೆಕಟ್ಟಿ ತೂಗುವಾಗ ಲಾಲಿ ಹಾಡಿದೆವು
ಫಸಲನವರ ಕಣಜದೊಳಗೆ ತುಂಬಿಸಿ
ಬರಿಗೈಲಿ ಮರಳಿದಾಗವಳು ಮಡಿಲಾಗಿದ್ದಳು
ಅವಳುಡಿಯಲ್ಲಿ ಬಿದ್ದ ಬಿತ್ತಗಳನಾಯ್ದು
ಹಸಿವೆ ಹಿಂಗಿಸಿಕೊಂಡೆವು, ಹಾಡಾದೆವು


ತುಂಡುಭೂಮಿ ಸ್ವಂತಕ್ಕೆ ದಕ್ಕಿದಾಗ
ಅದೆಷ್ಟು ಹಿಗ್ಗು! ಅದೆಂಥ ಸುಗ್ಗಿಯ ಬೆರಗು
ಮೊದಲ ಕಣಜವನು ಮನೆಯಂಗಳದಲ್ಲಿ
ತುಂಬಿಸುವಾಗ ಸುಗ್ಗಿ ಧರೆಗಿಳಿದ ಸಗ್ಗ
ಅದೇ ಭೂಮಿಯ ಫಸಲು ಮಕ್ಕಳು
ಮರಿಮಕ್ಕಳ ಬದು ಜೋಕಾಲಿಯನು
ಉದ್ದಕ್ಕೂ ಜೀಕುತ್ತಲೇ ಸಾಗಿದೆ, ಮತ್ತೀಗ
ಅವರು ಮಾತನಾಡುತ್ತಿದ್ದಾರೆ ನಮ್ಮ
ಭೂಮಿಯ ಬಗ್ಗೆ, ಮತ್ತದೇ ಹಳೆಯ
ಕಪ್ಪು ನೆರಳುಗಳುಗಳು ಸುಳಿದಂತಾಗಿ
ಬೆಚ್ಚಿಬೀಳುತ್ತಿದ್ದೇವೆ ಕನಸಿನಲ್ಲೂ


ಶರಣೆನ್ನುವೆ....

ಹುಟ್ಟು ಅನಾಮಿಕವಾಗಿತ್ತು
ಬಯಸಿ ಪಡೆದುದೂ ಅಲ್ಲವಾಗಿತ್ತು.
ಬೇಡದ ಮಕ್ಕಳೆಂದರೆ ರೋಗಗಳಿಗೆ ಪ್ರೀತಿ ಜಾಸ್ತಿ. 
ಒಟ್ಟಾಗಿ ಧಾಳಿಯಿಟ್ಟು ಬಾಲ್ಯವನ್ನು ತೆವಳಿಸಿದವು. 
ತೆವಳುವ ಮಕ್ಕಳ ಬಗ್ಗೆ ಅಪ್ಪನಿಗೆ ಅಕ್ಕರೆ ಹೆಚ್ಚು.
ಮುದ್ದಿಸಿ ಹೆಗಲೇರಿಸಿಕೊಂಡ.
ಅಕ್ಷರಗಳು ಎದೆಗಿಳಿದು, ರೆಕ್ಕೆಗಳಾಗಿ ಮಾರ್ಪಾಡಾದವು.
ಅಮ್ಮನ ಅರಿವು ಬಾಳಿಗೆ ಬೆಳಕಾಯಿತು.
ಅವಳ ಸಾವು ಬಯಲಿಗೆ ನೂಕಿತು.
ಬಯಲಾದಮೇಲೆ ಹಾರಲೇಬೇಕು, ವಿಧಿಯಿಲ್ಲ.
ಹಾರುವ ಅನಿವಾರ್ಯಕ್ಕಷ್ಟೇ ಹಾರಿದೆ.
ನೀವೆಲ್ಲ ಪ್ರೀತಿಯ ತುತ್ತು ಹಿಡಿದು ದಾರಿಗಾಯುತ್ತೀರೆಂದು ನನಗೆಲ್ಲಿ ಗೊತ್ತಿತ್ತು?
ಎಷ್ಟೆಲ್ಲ ಮಮತೆಯಿಂದ ಹಾರೈಸಿದಿರಿ ನಿನ್ನೆ.
ಹುಟ್ಟು ಸಾರ್ಥಕವೆನಿಸಿತು!
ಹನಿಗಣ್ಣಾಗಿದ್ದೇನೆ, ನಿಮ್ಮ ಪ್ರೀತಿಗೆ...
ಧನ್ಯವಾದಗಳು ಎಂದು ಸಾಲ ತೀರಿಸಲಾರೆ.
ಎದೆಯಲ್ಲಿ ಹೊತ್ತುಕೊಂಡೇ ನಡೆಯುವೆ ನಿಮ್ಮ ಹಾರೈಕೆಗಳನ್ನು
ಬದುಕಿನ ಕರುಣೆಯ ಕರಗಳಿಗೆ ಶರಣು


ನಿತ್ಯ ನೂತನ ಧಾವಂತಗಳ ನಡುವೆ
ನನ್ನ ನಾನೇ ಮುಟ್ಟಿಕೊಳುವ
ಬಚ್ಚಲಮನೆಯ ಏಕಾಂತದಲಿ
ಬಗ್ಗಿ ಪಾದವುಜ್ಜಿದಾಗಲೇ ಹೊಳೆದದ್ದು
ಆಹ್! ಮತ್ತೆ ಒಂಟಿ ಗೆಜ್ಜೆ!
ಅದೇನು ಮಾಯಕವೋ ನನ್ನ ಪಾದಗಳದ್ದು
ಸದಾ ಒಂದನ್ನು ಅರಿಲ್ಲದೇ ಕಳಚಿಕೊಳ್ಳುವುದು
ದೇಹದ ಕೊಳೆಯ ಕಳಚುತ್ತಲೇ
ಮನದೊಳಗೆ ಕಳಕೊಂಡ ಗೆಜ್ಜೆನಿನಾದ
ಮೆಲಕು ಹಾಕುತ್ತಲೇ ಮಲಗುವ ಮನೆಗೆ ಪಯಣ
ಪಲ್ಲಂಗದ ಮೇಲೆ ಕಣ್ಣಿಗೆ ರಾಚುವಂತೆ
ಮಲಗಿದೆ ನನ್ನ ಒಂಟಿಗೆಜ್ಜೆ
ಮತ್ತೆ ನನ್ನ ಕಳಕೊಳ್ಳುವಿಕೆಗೆ ಸಾಕ್ಷಿ
ಯಾಗುವಂತೆ ಪ್ರದರ್ಶನಕ್ಕಿಟ್ಟಿದ್ದಾನೆ ಅವನು
ಆ ಗೆಜ್ಜೆಯೊಂದಿಗೆ ಇನ್ನೊಂದನ್ನು
ಹೊಂದಿಸಿಟ್ಟು ನಿರಾಳವಾದೆ
ಬಯಲಾಗಬೇಕೆಂದರೆ ಬಂಧನವನ್ನು
ಕಳಚಲೇಬೇಕಿದೆ
ಜಂಟಿಗೆಜ್ಜೆಗಳು ನನ್ನ ನೋಡಿ ನಕ್ಕವು!

ನೆನಪು ಹೊರಗಿನದಲ್ಲ

ಕಾಡುವ ನಿನ್ನ ನೆನಪುಗಳಿಗೆ
ನೀನೇ ಹೇಳು ಪರಿಹಾರ
ಬಿಡದೇ ಕಾಡಿದೆ ಅವನ
'ಓದು' ಎಂದ ತಣ್ಣಗೆ
ನನ್ನ ಮೂರು ಮಾತಿಗೆ
ಅವನದ್ದು ಒಂದೇ 'ಪದ'

ಓದತೊಡಗಿದೆ 'ಅವನ'
ಗಡಸು, ಹಠಮಾರಿ, ಜಗಳಗಂಟ
ಮುನ್ನುಡಿಯ ಪುಟಗಳ ದಾಟಿ
ತಲೆಬರಹಗಳಡಿಯಲ್ಲಿ ಸಿಕ್ಕರು
ಮೃದುಹೃದಯಿ, ಮಿತಭಾಷಿ,
ಗೆಳೆಯ, ತಾಯಿ, ಗುರು...
ಕೈಕುಲುಕಿ, ಮೈಗೊತ್ತಿ, ತಲೆಸವರಿ
ವಂದಿಸುತ್ತಾ ನಡೆದೆ ಮುಂದೆ

ಒಳಗಿಳಿದಂತೆಲ್ಲ ಗವ್ವೆನುವ ಏಕಾಂತ
ಸಣ್ಣ ನರಳುವಿಕೆಗೆ ಬೆಚ್ಚಿದೆ
ತಣ್ಣಗೆ ಮಲಗಿತ್ತು ದೊಡ್ಡ ನೋವು!
ಮೈಯ್ಯಿಡೀ ಗಾಯ, ರಕ್ತ, ಕೀವು
ಎಲ್ಲಿ ಒತ್ತಿದರೂ ವೇದನೆಯ ಕೂಗು
ಮೃದುವಾಗಿ ನೇವರಿಸಿದೆ
ಹಿತವಾದ ನರಳಿಕೆ, 
ಬಾಯ್ದೆರೆದ ಗಾಯಕ್ಕೆ ಪ್ರೀತಿಯೇ ಚಿಕಿತ್ಸೆ
ಎದ್ದು ಹೊರಬರಲಾರೆ ಗಾಯ ಮಾಗದೇ
ಮತ್ತೀಗ ನೆನಪು ಹೊರಗಿನದಲ್ಲ
ನನ್ನಾತ್ಮದ್ದು....

ಕಿಟಕಿ

ಮನೆಯ ಗೋಡೆಯ ನಡುವೆ ಇದೆ
ಒಂದು ಮಾಯಾ ಕಿಟಕಿ
ತೋರದು ಯಾರಿಗೂ ತನ್ನಿರವನು
ಸುತ್ತ ಕತ್ತಲು ಹರಡಿಕೊಂಡಾಗ
ಮೆಲ್ಲನೆ ತೆರೆದುಕೊಳ್ಳುವುದು
ಚಿಟ್ಟೆ ರೆಕ್ಕೆ ಪಡೆದುಕೊಂಡಂತೆ
ಕತ್ತಲೆ ಸೀಳಿ ಕಿಟಕಿಯಾಚೆಗೆ
ಮಾಯಕದ ಬೆಳಕು ಹರಡಿಕೊಳ್ಳುವುದು
ಅಪ್ಸರೆಯರು ಹಾದು ಹೋಗುತ್ತಾರೆ
ಅಪ್ಪಟ ಗೃಹಿಣಿಯರು ಮುಖ ಮುಚ್ಚದೆಯೆ
ಮನ ಮೆಚ್ಚಿದವರೊಂದಿಗೆ ಹೆಜ್ಜೆ ಹಾಕುತ್ತಾರೆ
ಮಾತೇ ಬಾರದವರಲ್ಲಿ ತಾವೇ ಮಾತಾಗುತ್ತಾರೆ
ಸುಳಿವ ಗಾಳಿಗೆ ಹಲವರ ಸೆರಗು ಜಾರುತ್ತದೆ
ಮುದುಕಿಯರೂ ಯೌವ್ವನಕ್ಕೆ ಜಿಗಿಯುತ್ತಾರೆ
ಕಟ್ಟಿದ ಅನೇಕ ಪ್ರತಿಮೆಗಳು ಒಡೆದು ಹಾರುತ್ತವೆ
ಸತ್ಯ, ಸುಳ್ಳುಗಳ ಗೆರೆ ಕಲಸಿ ಕರಗುತ್ತದೆ
ಗಂಡು, ಹೆಣ್ಣೆಂಬ ಭೇದವೆಲ್ಲವೂ ಭಿನ್ನಗೊಂಡು
ಹೊಸದೊಂದು ಲೋಕ ತೆರೆದುಕೊಳ್ಳುತ್ತದೆ
ಎಲ್ಲ ಮುಗಿದು ಗರಿಯೊಂದು ತೇಲಿಬರುವಾಗ
ನಿನ್ನ ಬರವನ್ನು ಕಾಯುತ್ತೇನೆ ಕಾತರಳಾಗಿ
ಹಾಳು ಕಿಟಕಿ! ತನ್ನಷ್ಟಕ್ಕೇ ಮುಚ್ಚಿಕೊಳ್ಳುತ್ತದೆ
ನಾನು ಮತ್ತದೇ ಭ್ರಮೆಯಿಂದ ನಾಳೆಯೂ ಕಾಯುತ್ತೇನೆ.......


ಅವಳ ಹಾಡು

ಇಂದು ನೀನು ಎಷ್ಟಾದರೂ ಬೈಯ್ಯಬಹುದು ನನ್ನ
ವಿನಾಕಾರಣ
ಆಫೀಸಿನಲಿ ನಿನ್ನ ಮೇಲಿನವನು ಹಂಗಿಸಿದಾಗ
ನಿನ್ನ ಕೆಳಗಿನವಳು ಇಣುಕಿ ನೋಡಿದ ಅವಮಾನ ಕಳೆಯಲು
ಎದೆಯುದ್ದ ಬೆಳೆದ ನಿನ್ನ ಮಕ್ಕಳು
ನೀನೆಳೆದ ವೃತ್ತದಾಚೆ ಜಿಗಿದಾಗಲೂ
ಮನೆಯ ನಾಯಿ ಸುಮ್ಮನೆ ಬೊಗಳಲು
ನಿನ್ನ ಗಂಡೆಂಬ ಅಹಂಗೆ ಎಲ್ಲಿಂದಲೋ
ಯಾರಿಂದಲೋ ಸಣ್ಣೇಟು ಬಿದ್ದಾಗಲೂ
ಸುಳ್ಳೇ ಸುಳ್ಳು ಸಾರಿಗೆ ಉಪ್ಪು ಸಿಕ್ಕಾಪಟ್ಟೆ
ಹೆಚ್ಚೆಂದು ಅರ್ಧ ಊಟದಿಂದೆದ್ದು ಕೆಕ್ಕರಿಸಿ
ಗೆಳೆಯನಿಗೆ ಕೊಟ್ಟ ಸಾಲ ಬಾರದಿರುವ ಬಿಸಿಯಲ್ಲಿ
ಚಹಾ ತುಸುವೇ ತುಸು ತಣ್ಣಗಾಯಿತೆಂದು
ಬೆಳಗಿನ ಗಡಿಬಿಡಿಗೊಂದು ಕರ್ಚೀಪು ಸಿಗದ
ನೆವವಾದರೂ ಹಿಡಿದು ಭೂಮಿ ಬಾನು ಒಂದಾಗಿಸಿ
ಕೂಗಿ, ಕಿರುಚಿ ಬೈಯ್ಯಬಹುದು ನೀನು
ನಾನೀಗ ನಿನ್ನ ಬೈಗುಳದ ಬೇರನು
ನನ್ನಲ್ಲಿ ಹುಡುಕುತ್ತಿಲ್ಲ ತಿಳಿದಿದೆ ನನಗೆ
ನಿನ್ನೊಳಗೇ ಅಡಗಿರುವ ಬಗೆ
ಹಾಗಾಗಿ ಸುಮ್ಮನೆ ಬೈದುಬಿಡು ನನ್ನ
ವಿನಾಕಾರಣ