Wednesday, March 28, 2018

ದೇಹಭಾಷೆ

ಪುಟ್ಟ ಹುಡುಗ ಚೌಕಿಮನೆಯಲ್ಲಿ ಯಕ್ಷಗಾನದ ವೇಷ ಕಟ್ಟುತ್ತಿದ್ದಾನೆ. ಅವನದು ಆ ದಿನ ಸ್ತ್ರೀ ಪಾತ್ರ. ಎದೆಗೆ ಕಂಚುಕ ಬಿಗಿದು ರವಿಕೆ ಹಾಕಿಯಾಗಿದೆ. ಕಪ್ಪು ಪೈಜಾಮ ತೊಟ್ಟು ಅದರ ಮೇಲೊಂದು ದಪ್ಪದ ಬಟ್ಟೆಯನ್ನು ನಡುವಿಗೆ ಸುತ್ತಲಾಗಿದೆ. ಸ್ತ್ರೀ ವೇಷದ ಕಿರೀಟ ತಲೆಯಲ್ಲಿದೆ. ಜಡೆ ಬೆನ್ನ ಹಿಂದೆ ತೂಗಾಡುತ್ತಿದೆ. ಸೀರೆಯೊಂದನ್ನು ನೆರಿಗೆಯಿಟ್ಟು ಸುತ್ತಬೇಕಷ್ಟೇ. ಯಾರೋ ಹೇಳಿದರು, " ಹೊರಗೆ ಅತಿಥಿಗಳು ಬಂದಿರುವರಂತೆ. ಒಮ್ಮೆ ಎಲ್ಲರೂ ಬಂದು ಮಾತಾಡಿಸಬೇಕಂತೆ."

ಎಲ್ಲರೊಂದಿಗೆ ಇವನೂ ತಕ್ಷಣ ಎದ್ದು ಕುಣಿಯುತ್ತಾ ಹೊರಟ. ವೇಷ ಕಟ್ಟುತ್ತಿದ್ದವ ಕರೆದು ಹೇಳಿದ,"ಏಯ್, ಎದೆಗೊಂದು ಮೇಲುವಸ್ತ್ರ ಹೊದೆದು ಹೋಗು" ಹುಡುಗನಿಗಾಗ ಎಚ್ಚರವಾಯ್ತು, " ಓಹೋ, ನಾನೀಗ ಹುಡುಗಿ" ಎಂದು. ತನ್ನ ಎದೆಯನ್ನೊಮ್ಮೆ ನೋಡಿ, ಮೇಲುವಸ್ತ್ರ ಹೊದೆದು ಹೊರಗೆ ಹೋದ!

Saturday, March 24, 2018

ಮಿಂಚಿದ ಮೂಗುಬೊಟ್ಟು

ಅದು ಬಾಲ್ಯಕಾಲದಲ್ಲಿ ಕಂಡ ಒಂದು ಅಚ್ಚಳಿಯದ ದೃಶ್ಯ. ಆಗೆಲ್ಲ ನಮ್ಮೂರಿಗೆ ಬರುವ ಹೆಂಚುಮಣ್ಣಿನ ಲಾರಿಗಳೇ ನಮ್ಮ ಸಂಪರ್ಕಸಾಧನಗಳಾಗಿದ್ದವು. ಹೀಗೆ ಒಮ್ಮೆ ಲಾರಿಯಲ್ಲಿ ಹೋಗುವಾಗ ರಸ್ತೆಯಂಚಿನ ಬಯಲಿನಲ್ಲಿ ಸಾಲುಸಾಲು ಜನರು ಸೇರಿದ್ದರು.  ನಮ್ಮ ಡ್ರೈವರ್ ಕೂಡಾ ಏನಾಗಿದೆಯೆಂದು ನೋಡಲು ಲಾರಿ ನಿಲ್ಲಿಸಿದ.  ಕುಡುಕ ಗಂಡನೊಬ್ಬ ಹೆಂಡತಿಯನ್ನು ಅಟ್ಟಾಡಿಸಿ ಹೊಡೆಯುತ್ತಿದ್ದ. ಅವಳ ಅತ್ತೆಯಿರಬೇಕು ಗುಡಿಸಲ ಪಕ್ಕ ನಿಂತವಳು. ಮತ್ತಿಷ್ಟು ಹೊಡೆಯುವಂತೆ ಪ್ರಚೋದಿಸುತ್ತಿದ್ದಳು. ಅವನು ಅವಳ ತಲೆಗೂದಲು ಹಿಡಿದು ಜಗ್ಗಾಡುತ್ತಾ, ಹಿಗ್ಗಾಮುಗ್ಗಾ ಬಾರಿಸುತ್ತಿದ್ದ. ಸೇರಿದವರೆಲ್ಲ. ಮುಸಿ ಮುಸಿ ನಗುತ್ತಾ, ' ಕುಡಿತ ಹೆಚ್ಚಾದರೆ ಹೀಗೆ 'ಎನ್ನುತ್ತಾ ಸಾಗುತ್ತಿದ್ದರು.

ಕರುಳು ಕಿವುಚುವ ಅವಳ ಕೂಗು ಎಷ್ಟೋ ದಿನ ನನ್ನನ್ನು ಕಲಕಿಬಿಟ್ಟಿತ್ತು. ಶಾಲೆಯಲ್ಲಿ ಬಂದು ಗೆಳತಿಗೆ ಹೇಳಿದಾಗ ಅವಳು ಆ ಊರಿಗೆ ಮದುವೆಯಾಗಿ ಹೋದ ತನ್ನ ಅಕ್ಕನಿರಬಹುದೆ  ಎಂದು ಯೋಚಿಸಿ ಕಣ್ಣೀರಾಗಿದ್ದಳು. ಆಗೆಲ್ಲ ನಮ್ಮ ಹಳ್ಳಿಯಲ್ಲಿ ಹೇಗಿತ್ತೆಂದರೆ ಮದುವೆಯಾಗಿ ವರ್ಷದೊಳಗೆ ಹೆಂಡತಿಗೆ ಹೊಡೆಯದಿದ್ದರೆ ಅವನು ಗಂಡಸೇ ಅಲ್ಲ ಎಂಬಂತೆ. ಹಾಗಾಗಿ ಮದುವೆಯಾಗಿ ತಿಂಗಳೊಳಗೇ ಕುಡಿದು ಬಂದು ಹೆಂಡತಿಗೊಮ್ಮೆ ಬಾರಿಸಿ, ತಮ್ಮ ಗಂಡಸ್ತನವನ್ನು ಸಾಬೀತುಗೊಳಿಸುತ್ತಿದ್ದರು.

ಪಟ್ಟಣದ ಶೋಕಿಯ ಜಗತ್ತಿಗೆ ಬಂದಮೇಲೆ ಅದೆಲ್ಲವೂ ಮನಸ್ಸಿನಾಳದಲ್ಲೆಲ್ಲೋ ತಳ್ಳಲ್ಪಟ್ಟ ನೆನಪುಗಳಾಗಿದ್ದವು. ಮೊನ್ನೆ ಮೊಗಳ್ಳಿಯವರ 'ಮೂಗುಬೊಟ್ಟು' ಕಥೆ ಓದಿದಾಗ ಮತ್ತೆ ಎಲ್ಲವೂ ತಾ ಮುಂದೆ, ತಾ ಮುಂದೆ ಎಂದು ಒತ್ತರಿಸಿ ಬಂದವು.
ಕುಡುಕ ಗಂಡನ ಪೌರುಷತ್ವದ ದಬ್ಬಾಳಿಕೆಗೆ ನಲುಗಿದ ತಾಯಿಯೊಬ್ಬಳು ತಾನಾಡಬೇಕಾದ ಒಂದು ಮಾತನ್ನು ಕೊನೆಗೂ ಆಡಲಾರದೆ ಮರೆಯಾಗುವ ಸಂಕಟದ ಕಥೆಯಿದು.  ಅದೆಲ್ಲವನ್ನೂ ಹೇಳುವ ಆ ಮುಗ್ಧ ಮಗುವಿನ ಅಸಹಾಯಕ ಸ್ಥಿತಿ ಓದುಗರೆದೆಯನ್ನು ಮರಮರನೆ ಕಲುಕಿಬಿಡುತ್ತದೆ. ಮಾತೇ ಆಡಲಾಗದ ಆ ಹೆಂಗಳೆಯರ ಮಾತು ಓದುಗರ ಗಂಟಲಿನವರೆಗೆ ಬಂದು ಹೊರಬರಲಾರದೇ ಚಡಪಡಿಸುತ್ತದೆ. ಅವರಾಡದ ಎಷ್ಟು ಮಾತುಗಳನ್ನಿಂದು ನಾವು ಆಡಬೇಕಿದೆ ಎಂಬುದನ್ನು ಸೂಚಿಸುತ್ತದೆ. ಓದಿ ಎರಡು ದಿನ ಏನನ್ನೂ ಬರೆಯಲಾರದಷ್ಟು ನನ್ನನ್ನು ಕಾಡಿತು. ಇನ್ನೂ ಹಳ್ಳಿಗಳಲ್ಲಿ ಹೆಣ್ಣಿನ ಸ್ಥಿತಿ ಹಾಗೆಯೇ ಇದೆಯೋ ಏನೋ ಯಾರಿಗೆ ಗೊತ್ತು?

ಕುಡಿದು ಬರುವ ಗಂಡನ ಹೊಡೆತ ತಾಳಲಾರದೇ ಇಡೀ ರಾತ್ರಿ ಬಯಲಲ್ಲಿ ಕಳೆವ ಹೆಂಗಸರು, ಮಕ್ಕಳನ್ನೆಲ್ಲಿ ಕೊಂದಾನೆಂದು ರಾತ್ರಿಯಿಡೀ ಎಚ್ಚರವಿದ್ದು ಕಾಯುವ ತಾಯಂದಿರು, ಕಟ್ಟಿದ ತಾಳಿಯನ್ನೂ ಗಂಡನ ಕುಡಿತಕ್ಕೆಂದು ಬಿಚ್ಚಿಕೊಡುವ ಪತಿವ್ರತೆಯರು....... ಇಷ್ಟಾದರೂ ಅನಾರೋಗ್ಯ, ಆಪತ್ತು ಬಂದರೆ ಗಂಡನ ಸೇವೆಗೆ ಟೊಂಕಕಟ್ಟಿ ನಿಲ್ಲುವ ಗರತಿಯರು..... ಎಲ್ಲರನ್ನೂ ಹಳ್ಳಿಯಲ್ಲಿ ಕಂಡು ನೊಂದಿರುವೆ. ಕುಡಿಯದವರೂ ಇದಕ್ಕೆ ಹೊರತೇನಲ್ಲ. ತನ್ನ ಮೊಣಕಾಲುದ್ದದ ಜಡೆಯನ್ನು ಗಂಡ ಬಾಯ್ಗತ್ತಿಯಿಂದ ಕೊಯ್ದುಬಿಟ್ಟ ಎನ್ನಲಾಗದೇ ಟೈಪಾಯ್ಡ್ ಬಂದು ಕೂದಲುದುರಿ ಮತ್ತೆ ಬರುತ್ತಿದೆ ಎಂದು ಕತೆಕಟ್ಟಿ ಹೇಳುತ್ತಿದ್ದ ಚಿಕ್ಕಮ್ಮನ ಮುಖ ಕಣ್ಣೆದುರು ಬಂದು ಕಾಡುತ್ತದೆ.

ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಕನಿಷ್ಠ ದೈಹಿಕ ಹಿಂಸೆಯಿಂದಲಾದರೂ ಸ್ವಲ್ಪಮಟ್ಟಿಗೆ ಹೆಣ್ಣನ್ನು ರಕ್ಷಿಸಿದೆ ಅನಿಸುತ್ತದೆ. ಸತ್ಯವಾಗಲಿ ಎಂದೇ ಮನಸ್ಸು ಬಯಸುತ್ತದೆ. ಕಂಡುಂಡ ನೋವುಗಳಷ್ಟೇ ಇಂತಹ ಗಾಢವಾದ ಕತೆಯಾಗಲು ಸಾಧ್ಯವೇನೋ?

Friday, March 23, 2018

ಕಣಿವೆ ಹಾಡು - 4

ಚುಕು -ಬುಕು, ಚುಕು-ಬುಕು
ಚುಕು- ಬುಕು, ಚುಕು - ಬುಕು

ಓಡೋ ರೈಲುಗಾಡಿ
ಬರುವೆ ನಿನ್ನ ಜೋಡಿ
ಸಾಗೋಣ ದೂರ ದೂರ
ಸೇರೋಣ ದೂರದೂರ

ರಂಗು ರಂಗವೇರಿ
ಹಾಡ ಗುಂಗು ಏರಿ
ಜಗವೇ ಹಾಡುವಂತೆ
ಹಾಡುವೆನು ಮರೆತು ಚಿಂತೆ

Thursday, March 22, 2018

ಕಣಿವೆಯ ಹಾಡು -3

ಯುದ್ಧ - ಗಿದ್ದ ಗೆದ್ದೋನಲ್ಲ
ಈ ಸೈನಿಕ
ಬಿತ್ತಿದ ಕುಂಬಳ ಬೀಜವ ತುಂಬ
ಈ ಸೈನಿಕ

ಕೋವಿಯ ಹಿಡಿದು ಖೈದಿಯ ಕಾಯ್ದ
ಈ ಸೈನಿಕ
ಖೈದಿಯ ಹಾಡನು ಕಲಿತೆ ಬಿಟ್ಟ
ಈ ಸೈನಿಕ
ಕದ್ದೋಡಲು ಹೊರಟ ಖೈದಿಗಳನೆಲ್ಲ
ಸದ್ದಿಲೆ ಕರೆದಾತ
ಇವನೊಂದಿಗೆ ಕುಣಿದರು ಇವನೀಗ
ಅವರ ಸ್ನೇಹಿತ

ಬಿತ್ತಿದ ಬೀಜ ಮೊಳಕೆಯೊಡೆದು
ಬಳ್ಳಿ ಹಬ್ಬಿತು
ಪ್ರೀತಿಯ ಹಾಡು ಎದೆಗೆ ಇಳಿದು
ಭಾವ ಅರಳಿತು
ಬಳ್ಳಿಯ ತುಂಬಾ ದೊಡ್ಡ ದೊಡ್ಡ
ಸಿಹಿಯಾದ ಕುಂಬಳ
ಯುದ್ಧದ ಮಾತು ಮರೆತೇ ಹೋಯ್ತು
ಅಜ್ಜ ಈಗ ಕೃಷಿಕ

ಲೆಪ್ಟು- ರೈಟು, ಲೆಪ್ಟು- ರೈಟು
ಬಳ್ಳಿಗೆ ಆದೇಶ
ಅರೆರೆ ಬಳ್ಳಿಯು ಪಾಲಿಸುತ್ತಿದೆ
ಅಜ್ಜನ ಆದೇಶ
ಕುಂಬಳ ಬೆಳೆದು ಕಾಯುವೆ ನಾನು
ನನ್ನಯ ದೇಶ
ಕುಂಬಳದಂತೆ ಸಿಹಿಯನು ಹಂಚಿ ಸಾರುವೆ
ಶಾಂತಿಯ ಸಂದೇಶ

ಕಣಿವೆಯ ಹಾಡು- 2

ಕಣ್ಣ ಕವಿಯುವಂಥ ಕನಸು
ಮುಂದಿದೆ
ಕಾಯುತಿಹುದೆನ್ನ ಮನಸು

ಹಕ್ಕಿಯಂತೆ ಹಾರುವಾಸೆ
ಬೇಕು ಎರಡು ರೆಕ್ಕೆ
ದಿಗಂತದಾಚೆ ತೇಲುವಾಸೆ
ಮುಟ್ಟಿ ತಾರೆ ಚುಕ್ಕೆ

ಪುಟ್ಟ ಕಣಿವೆಯೂರಿನ
ದಿಟ್ಟ ಹುಡುಗಿ ನಾನು
ದೊಡ್ಡ ಕನಸು ನನ್ನದಿದೆ
ಮುಟ್ಟಬೇಕು ಅದನು

(Fast rhythm)
ಹಾಡಿ ಎಲ್ಲ ಹಾಡಿ
ನನ್ನ ಹಾಡು ಹಾಡಿ
ತೆರೆದು ಎದೆಯ ಕದವ
ಕನಸ ಕಸಿಯ ಮಾಡಿ
ಬಿತ್ತಿದಂತ ಬಿತ್ತವದು
ಮೊಳಕೆ ಚಿಗುರು ಉಸಿರು
ಅರಳಲಿ ಬಿಡಿ
ಎದೆಯ ತುಂಬಾ
ಹೂವು ಹಣ್ಣು ಹಸಿರು
ಹಾಡಿ ಎಲ್ಲ ಹಾಡಿ
ನಿಮ್ಮ ಎದೆಯ ಹಾಡು
ಹಾಡಿ ಎಲ್ಲ ಹಾಡಿ
ನಿಮ್ಮ ಕನಸ ಪಾಡು
ಹಾಡಿ ಎಲ್ಲ ಹಾಡಿ
ಸಂಕೋಚವನು ತೊರೆದು
ಹಾಡಿ ಎಲ್ಲ ಹಾಡಿ
ಸಂಕೋಲೆಗಳ ಕಳೆದು

Wednesday, March 21, 2018

ಕಣಿವೆಯ ಹಾಡು

ಶುಭವಿದಾಯ ನಿನಗೆ ಕಣಿವೆಯೆ
ಹೋಗಿಬರುವೆ ಹರಸು ನನ್ನ ಬಾಲ್ಯದೊಲುಮೆಯೆ

ನಿನ್ನ ಚಿಗುರು ನವಿರು ನನ್ನ
ಕೊರಳಲಡಗಿದೆ
ನಿನ್ನ ಹಕ್ಕಿ ರೆಕ್ಕೆಯ ಕೊಡು
ಹಾರಬೇಕಿದೆ
ದೂರತೀರದ ಆಚೆಯೆಲ್ಲೋ
ನನ್ನ ಬದುಕಿದೆ
ಹುಡುಕಿ ಹೊರಟ ನನಗೆ ನಿನ್ನ
ಒಲವು ಬೇಕಿದೆ

ನಿನ್ನ ಚೆಲುವು ಪ್ರೀತಿಯೊಲವು
ಮರೆಯಲಾರೆನು
ನಿನ್ನ ಸೀಮಿತ ಪರಿಧಿಯಲ್ಲಿ
ಬಾಳಲಾರೆನು
ದೂರ ಹೋದರೇನು ನಾನು
ಬೇರು ಇಲ್ಲಿದೆ
ನೀರನೆರೆವ ನಿನ್ನ ದಯೆಯು
ಎದೆಯ ತುಂಬಿದೆ

ನಿನ್ನ ಹಸಿರು, ಹೂವು, ಚಿಗುರು
ಎದೆಯ ಚಿತ್ರವಾಗಿದೆ
ನಿನ್ನಗಾಧ ಮೌನ ಮನದ
ಭಿತ್ತಿಯಾಗಿದೆ
ನೀ ನೀಡಿದ ದಿವ್ಯದೃಷ್ಟಿಯು
ಪುಷ್ಟಿಯಾಗಿದೆ
ನಿನ್ನ ಎದೆಯ ಹಾಡು ನನ್ನ
ಕಂಠ ತುಂಬಿದೆ

Monday, March 12, 2018

ಕಾಡುವ ಪಾದಗಳ ನೆನಪು

ಇಂದಿಡೀ ಕಿತ್ತುಹೋದ ಆ ತಾಯಿಯ ಪಾದಗಳೇ ಕಾಡಿದವು. ಒಂದು ಟೊಮ್ಯಾಟೊ ಗಿಡ ನೆಟ್ಟು ಎರಡು ತಿಂಗಳ ಮೇಲಾಯ್ತು. ಪ್ರತಿದಿನ ನೀರು, ವಾರಕ್ಕೊಮ್ಮೆ ಗೊಬ್ಬರಗಳ ಸೇವೆಯೂ ನಡೆಯಿತು. ಅಂತೂ ಬೆಟ್ಟದ ನೆಲ್ಲಿ ಗಾತ್ರದ ನಾಲ್ಕಾರು ಟೊಮ್ಯಾಟೋಗಳು ಈಗ ನೇತಾಡುತ್ತಿವೆ. ಮೊನ್ನೆ ಸಂತೆಯಲ್ಲಿ ಇಪ್ಪತ್ತು ರೂಪಾಯಿಗೆ ಮೂರುಕಿಲೋ ಟೊಮ್ಯಾಟೊ ಸಿಗುತ್ತಿತ್ತು. ಆ ಮೂರು ಕಿಲೋ ಟೊಮ್ಯಾಟೋಗೆ ರೈತನಿಗೆ ಸಿಕ್ಕಿದ್ದು ಹೆಚ್ಚೆಂದರೆ ಹತ್ತು ರೂಪಾಯಿಯಿದ್ದೀತು! ಆ ಹತ್ತು ರೂಪಾಯಿಗಾಗಿ ಅವನು ಪಟ್ಟ ಶ್ರಮವೆಷ್ಟಿದ್ದೀತು? ರೈತರ ಬವಣೆಗೆ ಕೊನೆಯೇ ಇಲ್ಲವೆನಿಸುತ್ತದೆ. ಎರಡು ತುತ್ತಿನಲ್ಲಿ ತಿನ್ನಬಹುದಾದ ಚಾಕಲೇಟ್ ಗೆ ಕಣ್ಮುಚ್ಚಿ ಐವತ್ತು ರೂಪಾಯಿ ಕೊಡುವ ನಾವು, ತರಕಾರಿಯವಳ ಕೂಡ ಒಂದು ರೂಪಾಯಿಗೂ ಚೌಕಾಶಿ ಮಾಡುತ್ತೇವೆ. ಆ ಪಾದಗಳಿಗೆ ಇನ್ನಾದರೂ ನ್ಯಾಯ ಸಿಗಲಿ. ಅನ್ನವಿಕ್ಕುವ ಜೀವಗಳು ನೆಮ್ಮೆಯಲ್ಲಿರಲಿ.

ನನಗೆ ಆ ಪಾದಗಳು ಮತ್ತೆ ನನ್ನಮ್ಮನನ್ನು ನೆನಪಿಸಿದವು. ಆ ದಿನ ಅಪ್ಪ, ಅಮ್ಮನಿಗೆ ದೊಡ್ಡ ಜಗಳವಾಗಿತ್ತು. ಅಂದರೆ ಸಣ್ಣ ಜಗಳಗಳು ದಿನವೂ ಸಾಮಾನ್ಯ ಎಂದರ್ಥ. ಜಗಳದ ಕೊನೆಯಲ್ಲಿ ಅಮ್ಮ ಮನೆಯಲ್ಲಿರಲೇಬೇಕೆಂದರೆ ದನ ಕಾಯ್ದುಕೊಂಡು ಇರಬೇಕು ಎಂದು ತೀರ್ಮಾನವಾಯಿತು. ಅಮ್ಮನೂ ಹಟದಿಂದ ಆಯಿತೆಂದು ಒಪ್ಪಿಯೇಬಿಟ್ಟಳು. ಹತ್ತಾರು ದನಗಳನ್ನು ಮೇಯಿಸಲು ಬೆಳಿಗ್ಗೆ ಕಾಡಿಗೆ ಹೋದರೆ ಸಂಜೆ ಬರುತ್ತಿದ್ದಳು. ಅಮ್ಮ ಕಾಲಿಗೆ ಚಪ್ಪಲಿ ಧರಿಸುತ್ತಿರಲಿಲ್ಲ. ಹೆಂಗಸರೆಲ್ಲ ಚಪ್ಪಲಿ ಧರಿಸುವ ಕ್ರಮವೂ ಅಲ್ಲಿರಲಿಲ್ಲ.  ಹೇಳಿ ಕೇಳಿ ಕಾಡಿನಲ್ಲಿ ಮುಳ್ಳುಗಳ ರಾಶಿ. ದಿನವೂ ಮನೆಗೆ ಬಂದು ಮುಳ್ಳು ತೆಗೆಯುವ ನೆವದಲ್ಲಿ ಸೂಜಿ ಚುಚ್ಚಿ ಮತ್ತೊಂದಿಷ್ಟು ಗಾಯ ಮಾಡಿಕೊಂಡಿದ್ದಳು. ಕುಂಟುತ್ತಾ ನಡೆಯುವ ಅವಳನ್ನು ಅಸಹಾಯಕತೆಯಿಂದ ನೋಡುವುದಷ್ಟೇ ನಮ್ಮ ಕೆಲಸವಾಗಿತ್ತು.  ಅಂತೂ ವಾರದೊಳಗೆ ರಾಜಿಯಾಗಿ ಅಮ್ಮ ಮನೆಯೊಳಗೆ ಬಂದರೋ ಮುಳ್ಳಿನ ಗಾಯಗಳು ಕೀವಾಗಿ ಮಾಯಲು ಎಷ್ಟೋ ದಿನಗಳನ್ನು ತೆಗೆದುಕೊಂಡಿದ್ದವು. ಅಮ್ಮನಿಗೂ,ಆ ತಾಯಿಗೂ ಒಂದು ಜೊತೆ ಹೊಸ ಚಪ್ಪಲಿಗಳನ್ನು ಕೊಡಿಸಬೇಕಿತ್ತು.

Sunday, March 11, 2018

ವಾವ್! ಅಕ್ಕ ಮತ್ತೆ ಬರೆಯುತ್ತಿದ್ದಾಳೆ

ನಾನಾಗ ಪುಟ್ಟ ಹುಡುಗಿ. ನನಗೊಬ್ಬಳು ಪುಟ್ಟ ಗೆಳತಿ. ಇಬ್ಬರಿಗೂ ಅದೆಂಥದ್ದೋ ಸೆಳೆತ. ನಮ್ಮ ಅಂದಿನ ದಿನಚರಿಯೆಂದರೆ ಪ್ರತಿದಿನ ನಾವಿಬ್ಬರೂ ಹೊಸದೊಂದು ಕವನ ಬರೆಯುತ್ತಿದ್ದೆವು. ಮತ್ತೆ ಬೆಳಿಗ್ಗೆ ಸಿಕ್ಕಿದಾಗ ನಮ್ಮ ಕವನಗಳನ್ನು ಪರಸ್ಪರ ಬದಲಾಯಿಸಿ ಓದುತ್ತಿದ್ದೆವು.

ಅವಳ ಅಕ್ಕಂದಿರೆಲ್ಲ ಕಾಲೇಜಿನಲ್ಲಿ ಓದುತ್ತಿದ್ದರು.  ಬಹಳ ಜಾಣೆಯರೂ ಹೌದು. ಹಾಗಾಗಿ ಅವಳಿಗೆ ಸಮಕಾಲೀನ ಸಾಹಿತ್ಯದ ಸಾಂಗತ್ಯವಿತ್ತೇನೊ? ಅವಳು ತನ್ನ ಕವನಕ್ಕೆ ತಲೆಬರಹ ಕೊಟ್ಟು ವಾಸ್ತವಿಕ ವಿಷಯದ ಬಗ್ಗೆ ಬರೆಯುತ್ತಿದ್ದಳು. ನನಗೋ ಅಪ್ಪನ ಯಕ್ಷಗಾನದ ಪದ್ಯ ಮತ್ತು ಅಮ್ಮನ ದೇವರನಾಮ ಬಿಟ್ಟರೆ ಬೇರೆ ಗೊತ್ತಿರಲಿಲ್ಲ. ಹಾಗಾಗಿ ಅಂಕಿತವನ್ನಿಟ್ಟುಕೊಂಡು ಹಾಡು ಬರೆಯುತ್ತಿದ್ದೆ.  ನನ್ನನ್ನು ಬಹಳ ಪ್ರೀತಿಸುತ್ತಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಹೆಸರನ್ನೇ ನನ್ನ ಅಂಕಿತವಾಗಿಸಿಕೊಂಡಿದ್ದೆ. ಹಾಗಾಗಿ ಕೃಷ್ಣಾನಂದ ಎಂಬುದು ನನ್ನ ಅಂಕಿತವಾಗಿತ್ತು. ಒಮ್ಮೆ ನಾವಿಬ್ಬರೂ ತಲೆಬರಹ ಮೇಲೋ, ಅಂಕಿತ ಮೇಲೋ ಎಂಬ ಬಗ್ಗೆಯೇ ಸುಮಾರು ಕವನಗಳನ್ನು ಬರೆದ ನೆನಪು.

ಸಾಧಾರಣವಾಗಿ ನನ್ನ ಕವನಗಳು ಹೀಗಿರುತ್ತಿದ್ದವು.
ಎಂದೂ ನನ್ನ ಮನದಲಿ
ನಿನ್ನಿರವೇ ಇರಲಿ
ಹೃದಯದಾಳದಲ್ಲಿ ನಿನ್ನ
ದಿವ್ಯರೂಪವಿರಲಿ

ನನ್ನ ಮನದ ಭಾವ ನೀ
ಮೀಟುವ ವೀಣೆಯಾಗಿರಲಿ
ನೋವು ನಲಿವು ಎಲ್ಲವೂ
ನಿನ್ನ ಕೃಪೆಯಾಗಿರಲಿ

ನನ್ನ ಕೀರ್ತಿ ಅಪಮಾನವು
ಎಂದೂ ನಿನ್ನದಾಗಿರಲಿ
ಸ್ವಾಮಿ ಕೃಷ್ಣಾನಂದನನ್ನು
ನಿರುತ ನೆನೆಯುತಿರಲಿ

ಹೀಗೆ ನಾನು ಬೇಸರವಾದರೆ, ದುಃಖವಾದರೆ ಕವನ ಬರೆಯುತ್ತಾ ನನ್ನನ್ನು ನಾನು ಮಹಾನ್ ಕವಿ ಎಂದುಕೊಂಡಿದ್ದೆ.  ಒಂದು ದಿನ ಪೇಟೆಯ ಶಾಲೆಗೆ ಹೋಗುವ ಅಕ್ಕ ಮನೆಗೆ ಬಂದಿದ್ದಳು. ನನಗೆ ಆ ದಿನ ಏನೋ ವಿಷಯಕ್ಕೆ ಬೇಸರವಾಗಿತ್ತು.  ಯಥಾಪ್ರಕಾರ ನಾನು
ಎಂದಿಗೆ ಒಯ್ಯುವೆಯೋ ಹರಿಯೆ
ಬಂಧನದಲಿ ಸಿಕ್ಕಿ ಬಳಲಿ ನಾ ಬೆಂಡಾದೆ

ಎಂದು ಹರಿಯೊಂದಿಗೆ ಗೋಳು ತೋಡಿಕೊಳ್ಳುವ ಪದ್ಯ ಬರೆದಿದ್ದೆ. ಅಕ್ಕ ನನ್ನ ಪದ್ಯವನ್ನು ಕದ್ದು ಓದಿದಳು. ಮತ್ತೆ ನನ್ನನ್ನು ಕರೆದು ಹೇಳಿದಳು, " ಕವನ ಅಂದರೆ ಹಾಗಲ್ಲ.  ಅದೆಲ್ಲ ಹಿಂದಿನ ಕಾಲದ ಭಜನೆಗಳು. ನೀನು ನಿನ್ನ ಪಾಠ ಪುಸ್ತಕದಲ್ಲಿಬರುತ್ತದೆಯಲ್ಲ, ಆ ಥರದ ಪದ್ಯ ಬರೆಯಬೇಕು. ಹೀಗಿದ್ದದ್ದೆಲ್ಲಾ ಎಷ್ಟು ಬೇಕಾದರೂ ಬರೆಯಬಹುದು."

ನನಗೆಷ್ಟು ಅರ್ಥವಾಯಿತೋ ಗೊತ್ತಿಲ್ಲ.  ಆದರೆ ಬೇರೆಯೇ ಒಂದು ಬರೆಯುವ ರೀತಿಯಿದೆ ಎಂಬುದಂತೂ ತಿಳಿಯಿತು. ನಂತರ ನಾನು, ನನ್ನ ಗೆಳತಿ ಕಾರಣಾಂತರಗಳಿಂದ ಬೇರೆ ಬೇರೆ ಶಾಲೆಗಳಿಗೆ ಹೋದೆವು. ಆದರೇನಂತೆ? ಪ್ರತಿ ವಾರ ನಮ್ಮ ಕವನಗಳನ್ನು ಹೊತ್ತ ಪತ್ರಗಳು ವಿನಿಮಯವಾಗುತ್ತಿದ್ದವು. ಕೊನೆಯ ಪತ್ರದಲ್ಲಿ ಅವಳು ತಾನು ' ಸಮರ ಸಾಹಸಿಗೆ ಹುಲ್ಲು ಹಾಸಿಗೆ' ಎಂಬ ನೀಳ್ಗವಿತೆ ಬರೆಯುತ್ತಿರುವುದಾಗಿ ಹೇಳಿದ್ದಳು. ಕಾಲೇಜಿನಲ್ಲಿ ತೆಗೆದುಕೊಂಡ ವಿಜ್ಞಾನದ ಹೆದರಿಕೆ ಮತ್ತೆ ನಮ್ಮ ಬರವಣಿಗೆಯನ್ನು ಬರಿದಾಗಿಸಿತು. ಪತ್ರಗಳೂ ಕ್ಷೀಣಿಸಿದವು. ಆ ಕಾಲದ ಪತ್ರಗಳನ್ನು ಮನೆಯೇ ಇರದ ನಾನು ಕಾಯ್ದಿಟ್ಟುಕೊಳ್ಳಲಾಗಲಿಲ್ಲ. ಅವಳೆಲ್ಲಾದರೂ ಇಟ್ಟುಕೊಂಡಿದ್ದಾಳೋ ಗೊತ್ತಿಲ್ಲ.  ಅವಳೆಲ್ಲಿರುವಳೆಂಬುದೂ ತಿಳಿದಿಲ್ಲ.

ಅಕ್ಕ ಪಕ್ಕಾ ಸಾಹಿತ್ಯದ ವಿದ್ಯಾರ್ಥಿ.  ಅವಧಾನಿಯಂತಹ ಪ್ರಸಿದ್ಧರ ಶಿಷ್ಯೆ. ಅವಳು ಡಿಗ್ರಿ ಮೊದಲ ವರ್ಷದವಳಿದ್ದಾಗಲೇ ಬೇಂದ್ರೆಯವರ ಸಖೀಗೀತಕ್ಕೆ ಭಾಷ್ಯ ಬರೆದು ಗುರುಗಳಿಂದ ಭೇಷ್ ಎನಿಸಿಕೊಂಡಿದ್ದಳು. ಪ್ರಾಣಿಬಲಿಯ ಕುರಿತು ಅವಳು ಬರೆದ ಮಾರಿಬಲಿ ಕತೆ ಕಾಲೇಜಿನಲ್ಲಿ ಹೊಸ ಸಂಚಲನ. ಮೂಡಿಸಿತ್ತು. ಆದರೆ ಅದೇ ವರ್ಷ ನಡೆದ ಮದುವೆ ಅವಳ ಕನಸನ್ನೆಲ್ಲಾ ಬಲಿತೆಗೆದುಕೊಂಡಿತು. ಇಪ್ಪತ್ತೈದು ವರ್ಷ ಅವಳು ಸವೆಸಿದ ಬದುಕು ಹತ್ತಾರು  ಕಾದಂಬರಿಗೆ ಸಾಕಾದೀತು!

ಈಗ ಅಕ್ಕ ಮತ್ತೆ ನೆಲೆಗೊಂಡಿದ್ದಾಳೆ. ಸ್ಮಾರ್ಟ್ ಫೋನ್ ಬಂದಮೇಲೆ ಸಣ್ಣಕ್ಕೆ ಸಾಹಿತ್ಯದ ರಚನೆ ಆರಂಭಿಸಿದ್ದಾಳೆ. ಹೇಗೆ ಬರೆಯೋದು? ನಂಗೊಂಚೂರು ಹೇಳೆ ಎಂದವಳು ಕೇಳುವಾಗ ಮತ್ತೆ ನನಗೆ ಬರೆಯುವುದನ್ನು ಕಲಿಸಿದ ಅಕ್ಕ ಕಣ್ಮುಂದೆ ಬಂದಳು. ನೆಲಮಟ್ಟದ ಬದುಕನ್ನು ಕಂಡ, ಬದುಕಿನ ಎಲ್ಲ ಕಷ್ಟಗಳನ್ನು ಉಂಡ ಅವಳು ಬರೆದಳೆಂದರೆ...... ಎಲ್ಲರ ಮಾರಿಬಲಿಯಾಗುವುದಂತೂ ಖಂಡಿತ! ನನಗೋ ಹೇಳತೀರದ ಹಿಗ್ಗು.....
ವಾವ್! ಅಕ್ಕ ಮತ್ತೆ ಬರೀತಿದ್ದಾಳೆ!

Friday, March 09, 2018

ಆ ಹುಡುಗ ನನಗಾಗಿ ದಿನವೂ ಹಾಡುತ್ತಾನೆ

ಮಗ ಸಂಗೀತ ಕಲಿಯಲು ಆರಂಭಿಸಿದ ನಂತರ ಸಂಗೀತ ಕೇಳುವುದೊಂದು ಗೀಳಾಗಿ ಹೋಯ್ತು. ಮೊದಲೆಲ್ಲ ಕೆಲಸ ಮಾಡುವಾಗ ಹಾಡುತ್ತಲೇ ಮಾಡುತ್ತಿದ್ದೆ. ಅರೆಯುವ ಕಲ್ಲಲ್ಲಿ ಬೀಸುವಾಗ, ಬಹಳ ಹೊತ್ತು ನಿಂತು ಬಟ್ಟೆ ಒಗೆಯುವಾಗ, ರಾಶಿಗಟ್ಟಲೆ ಪಾತ್ರೆ ತೊಳೆಯುವಾಗಲೆಲ್ಲ ಹಾಡಿನ ಜೊತೆ ಬೇಕಾಗುತ್ತಿತ್ತು. ಈಗ ಅಂತಹ ಸುದೀರ್ಘ ಕೆಲಸಗಳೇ ಕಣ್ಮರೆಯಾಗಿ ಹಾಡೂ ನನ್ನ ಕೈಬಿಟ್ಟು ಹೋಗಿತ್ತು. ಸಂಗೀತ ಕಲಿಯುವ ಮಗ ಮತ್ತೆ ನನಗೆ ಹಾಡಿನ ಗೀಳು ಹತ್ತಿಸಿದ. ಊಟ, ತಿಂಡಿ ಮಾಡುವಾಗ, ಏಕಾಂತದಲ್ಲಿರುವಾಗ, ಓದುವಾಗಲೆಲ್ಲ ನಾವು ಹಾಡು ಕೇಳುತ್ತಲೇ ಇರುತ್ತೇವೆ. ಹಾಗೆ ಕೇಳಲು ನಾವು ಯು ಟ್ಯೂಬ್ ನ ಮೊರೆಹೋಗುತ್ತೇವೆ. ಹಿಂದಿಯ ಝೀ ಸರೆಗಮಪ ಎಪಿಸೋಡುಗಳಿಗೆ ಹೋದರೆ ಮಕ್ಕಳು ಹಾಡುವ ಚೆಂದದ ಹಾಡುಗಳನ್ನು ಕೇಳಬಹುದು.

ಹೀಗೆ ಒಮ್ಮೆ ಹಾಡಿಗಾಗಿ ತಡಕಾಡುತ್ತಿರುವಾಗ ಸಿಕ್ಕಿದವನೇ ಅಝ್ಮತ್ ಹುಸೇನ್ ಎಂಬ ಪುಟ್ಟ ಬಾಲಕ. ಕೇವಲ ಹತ್ತು ವರ್ಷದವನಿದ್ದಾಲೇ ೨೦೧೧ ರ ಎಪಿಸೋಡಿನಲ್ಲಿ ಚಾಂಪಿಯನ್ ಆದವ. ಅವನ ಹಾಡುಗಳು ಅದೆಷ್ಟುಮೋಹಕವೆಂದರೆ ಕೇಳುತ್ತಿರುವಂತೆಯೇ ಹಾಡಿನೊಳಗೆ ನಾವು ಸೇರಿಹೋಗುತ್ತೇವೆ. ಗವಾಯಿಗಳ ಶೈಲಿಯಲ್ಲಿ ಅವನು ಉರ್ದುಮಿಶ್ರಿತ ಉಚ್ಛಾರದೊಂದಿಗೆ ಹಾಡತೊಡಗಿದನೆಂದರೆ...... ವಾಹ್! ಎಂತಹ ಕಲ್ಲೆದೆಯೂ ಕರಗಿ ಆರ್ದೃವಾಗುತ್ತದೆ. ಅವನ ಹಾಡುಗಳನ್ನು ಪದೇ ಪದೇ ಕೇಳಿದರೂ ಯಾಕೋ ಬೇಸರವೆನಿಸುವುದೇ ಇಲ್ಲ. ನೈನೋಮೆ ಮನ ....
ಎಂಬ ಅವನ ಹಾಡನ್ನು ನೂರಕ್ಕೂ ಹೆಚ್ಚಿಸಲು ಕೇಳಿರುವೆ. ಸಂಗೀತ ಅವನಿಗೆ ಕಲಿತು ಬಂದಿರುವುದಲ್ಲ. ಅದು ಅವನೊಳಗೇ ಇದೆ. ತಡೆಯಿರದ ಸುಧೆಯಾಗಿ ಹರಿಯುತ್ತದೆ.

ಅವನ ಕೌಟುಂಬಿಕ ಹಿನ್ನೆಲೆಯನ್ನು ನೋಡಿದರೆ ಅಯ್ಯೋ ಅನಿಸುತ್ತಿತ್ತು. ಫೀಸು ಕಟ್ಟಲು ಹಣವಿಲ್ಲವೆಂದು ಅವನು ಶಾಲೆಯನ್ನೇ ತೊರೆದಿದ್ದ. ಹಾಡುಗಳನ್ನೆಲ್ಲ ಅವನು ಕೇಳಿಯೇ ಕಲಿಸುವುದು. ಜೊತೆಯಲ್ಲಿ ಕುಶಲ ಹಾರ್ಮೋನಿಯಂ ವಾದಕನೂ ಹೌದು. ಗುರು ಕೈಲಾಶ್ ಖೇರ್ ಅವನ ಬಗ್ಗೊಮ್ಮೆ ಹೀಗೆ ಹೇಳಿದ್ದರು, " ಈ ಖಾನ್ ಸಾಬ್ ಇದ್ದಾನಲ್ಲಾ. ಹೀಗೆ ಸ್ವರಗಳ ಸಮುದ್ರದಲ್ಲಿ ನಿರಾಳವಾಗಿ ಮುಳುಗಿಬಿಡುತ್ತಾನೆ ಮತ್ತು ಗುಳುಗುಳು ಎನ್ನುತ್ತಾ ಆಳದಿಂದ ಒಂದು ಅದ್ಭುತ ಮುತ್ತನ್ನು ಆರಿಸಿ ತರುತ್ತಾನೆ " ಎಂದು. ನನಗೆ ಅವನ ಹಾಡು ಕೇಳುತ್ತಾ, ಕೇಳುತ್ತಾ ತೀರ ಬಡತನದ ಹಿನ್ನೆಲೆಯ ಅವನು ಸಂಗೀತ ಕಲಿಕೆಯನ್ನು ಮುಂದುವರೆಸಿರಬಹುದೇ? ಇಲ್ಲವೆ? ಸಂಗೀತದಿಂದ ದೂರವಾದರೆ ಅವನೆಷ್ಟು ಅಪೂರ್ಣ ಮತ್ತು ವಿಕಾರ ವ್ಯಕ್ತಿತ್ವದವನಾಗಬಹುದು ಎಂದೆಲ್ಲಾ ಚಿಂತೆಯಾಗತೊಡಗಿತು. ಮಗ ನನ್ನ ಮಾತನ್ನು ಕೇಳಿ ಹಾಡು ಕೇಳುವುದನ್ನು ಬಿಟ್ಟು ಅವನ ಬಗೆಗೆ ಯೋಚಿಸೋದು ತೀರ ಅತಿಯಾಯ್ತು ಎನ್ನುತ್ತಿದ್ದ. ನಾನವನಿಗೆ ಬಡತನದ ಹಿನ್ನೆಲೆಯ ಮುಸ್ಲಿಂ ಕುಟುಂಬದ ಸ್ಥಿತಿಗತಿ ಮತ್ತು ಅವರನ್ನು ಗುರಿಯಾಗಿಸಿಕೊಂಡ ಕಂದಾಚಾರಗಳ ಬಗೆಗೆ ತಿಳಿಸಿದಾಗ ಅವನಿಗೂ ಹೌದೆನ್ನಿಸಿತ್ತು. ಅಂತೂ ಮತ್ತೆ ಯೂ ಟ್ಯೂಬ್‌ ನ್ನು ಜಾಲಾಡಿ ಅವನು ಈಗಲೂ ಹಾಡುತ್ತಿರುವ ವೀಡಿಯೋ ತೋರಿಸಿದ. ಆದರೂ ಬಾಲ್ಯದ ಆ ಗಟ್ಟಿತನ ಈಗಿಲ್ಲ ಅನಿಸಿತು. ಏನೇ ಇರಲಿ ಹಾಡುತ್ತಿದ್ದಾನೆ ಎಂಬುದೊಂದು ನೆಮ್ಮದಿ ನಮಗೆ.

ಮತ್ತೀಗ ಪುಟ್ಟ ಅಝ್ಮತ್ ನನಗೆ ಬೇಕಾದಾಗಲೆಲ್ಲ ನಮ್ಮ ನಡುಮನೆಯಲ್ಲಿ ಕುಳಿತು ಎದೆತುಂಬಿ ಹಾಡುತ್ತಾನೆ  ಮತ್ತು ನಾವದನ್ನು ಕೇಳಿ ನಿರುಮ್ಮಳವಾಗುತ್ತೇವೆ. ಯಾವ ಜನ್ಮದ ಬಂಧವೇನೋ ಇದು? ಆ ಕಿಶೋರನಿಗಿದು ತಲುಪಿದರೆ ಎಷ್ಟು ಖುಶಿಪಟ್ಟಾನು ಅಲ್ಲವೆ?

Tuesday, March 06, 2018

ಎಲ್ಲರೂ ಬದುಕೆಂಬ ಜೈಲಿನಲ್ಲಿ ಖೈದಿಗಳೆ

ನಾನು ಚಿಕ್ಕವಳಿರುವಾಗ ನನಗೊಂದು ಅದ್ಭುತ ಅನುಭವವಾಗುತ್ತಿತ್ತು. ನಾನು ಎಲ್ಲೋ ಬೇರೆ ಲೋಕದಿಂದ ಬಂದವಳು. ಇಲ್ಲಿ ಇವರು ನನ್ನನ್ನು ಕದ್ದು ತಂದಿದ್ದಾರೆ. ಯಾವಾಗಲಾದರೊಂದಿನ ನಾನು ನನ್ನ ನಿಜವಾದ ಲೋಕಕ್ಕೆ ಹೋಗುತ್ತೇನೆ.  ಅದು ಬರಬರುತ್ತಾ ಎಷ್ಟು ಸಾಮಾನ್ಯವಾಯಿತೆಂದರೆ ನಾನು ಏಕಾಂಗಿಯಾಗಿರುವಾಗಲೆಲ್ಲ ನನ್ನ ಆ ಬೇರೆಯ ಲೋಕಕ್ಕೆ ಹೋಗಿಬಿಡುತ್ತಿದ್ದೆ. ಅದು ಒಂಥರಾ ಯಕ್ಷಗಾನ ಪ್ರಣೀತವಾದ ರಮ್ಯಲೋಕವಾಗಿತ್ತು. ಅಲ್ಲಿ ನನ್ನ ಈ ಇಹದ ಯಾವುದೇ ಪರದಾಟಗಳೂ ಇರಲಿಲ್ಲ.  ಸದಾ ಸಂತೋಷ, ಅಚ್ಚರಿಗಳ ಸರಮಾಲೆ ಮತ್ತು ಬಣ್ಣಗಳ ಮೆರಗು ಮಾತ್ರವೇ ಇರುತ್ತಿತ್ತು.  ಕೆಲವೊಮ್ಮೆ ನಾನು ಹೀಗೆ ಒಬ್ಬಳೇ ಇರುವಾಗ ಮಾತನಾಡುವುದನ್ನು ಕಂಡು ಅಮ್ಮ ಇವಳಿಗೇನೋ ಆಗಿದೆ ಎಂದು ಆತಂಕಗೊಳ್ಳುತ್ತಿದ್ದಳು. ಇದಕ್ಕೆಲ್ಲಾ ಕಾರಣ ನಾನು ಸದಾ ಪುಸ್ತಕಗಳಲ್ಲಿ ಕಳೆದುಹೋಗುವುದು ಎಂದೇ ಭಾವಿಸಿದ್ದಳು. ನೀನು ಓದಿ, ಓದಿ ಒಂದಿನ ಹುಚ್ಚು ಹಿಡಿಸಿಕೊಳ್ತೀಯ ಎಂದು ಬೈಯ್ಯುತ್ತಿದ್ದಳು. ಸ್ವಲ್ಪ ದೊಡ್ಡವಳಾಗಿ, ಶಿಕ್ಷಣಕ್ಕಾಗಿ ಪೇಟೆಗೆ ಬಂದು ವಾಸ್ತವಕ್ಕೆ ತೆರೆದುಕೊಂಡ ಮೇಲೆ ಇಂತಹ ಹುಚ್ಚಾಟಗಳು ತನ್ನಿಂದ ತಾನೇ ಮರೆಯಾದವು.

ಇದೆಲ್ಲಾ ಮತ್ತೆ ನೆನಪಾದುದು ಅನುಷ್ ಶೆಟ್ಟಿಯವರ ' ನೀನು ನಿನ್ನೊಳಗೆ ಖೈದಿ' ಎಂಬ ಕಾದಂಬರಿಯನ್ನು ಓದುತ್ತಿರುವಾಗ. ದೇಜಾವು ಎಂಬ ಸಮಾಂತರ ಜಗತ್ತಿನ ಕಲ್ಪನೆಯಿಟ್ಟುಕೊಂಡು ಒಂದು ಚೆಂದದ ಕಥೆಯನ್ನು ಹೆಣೆದಿದ್ದಾರೆ ಅನುಷ್.  ಕಾದಂಬರಿಯನ್ನು ಓದುವಾಗ ತೇಜಸ್ವಿಯವರ ಹಾರುವ ಓತಿಯ ಅನ್ವೇಷಣೆಯ ಕರ್ವಾಲೋ ನೆನಪಾಗುತ್ತಾರೆ. ಮಂದಣ್ಣನ ಜಾಗದಲ್ಲಿ ಇಲ್ಲಿ ಗಿಲ್ಬರ್ಟ್ ಇದ್ದಾನೆ. ಆದರೆ ಕಾದಂಬರಿಯ ತಂತ್ರ ಸಂಪೂರ್ಣ ಭಿನ್ನವಾಗಿದ್ದು ಕರ್ವಾಲೋದ ಪ್ರಭಾವದಿಂದ ಸಂಪೂರ್ಣವಾಗಿ ತಪ್ಪಿಸಿಕೊಂಡಿದೆ.

ಮೂಲತಃ ವಿಜ್ಞಾನದ ವಿದ್ಯಾರ್ಥಿಯಾದ ಅನುಷ್ ಮನುಷ್ಯನೊಬ್ಬ ಎರಡು ಲೋಕದಲ್ಲಿ ಬದುಕುವ ಪರಿಕಲ್ಪನೆಯನ್ನಿಟ್ಟುಕೊಂಡು ಓದುಗರನ್ನು ಒಂದು ವಿಸ್ಮಯದ ಲೋಕಕ್ಕೆ ಕೊಂಡೊಯ್ಯುತ್ತಾರೆ. ಜೈಲಿನಲ್ಲಿ ಖೈದಿಯಾಗಿರುವ ಗಿಲ್ಬರ್ಟ್ ನ ಡೈರಿಯ ವಿವರಣೆಯ ಹಿಂದೆ ಬಿದ್ದ ಬೇಹುಗಾರರಿಗೆ ದೇಜಾವು ಎಂಬ ವಿಸ್ಮಯ ಲೋಕದ ಪರಿಚಯ ಸಿಗುತ್ತಾರೆ ಹೋಗುತ್ತದೆ.  ಸಂಶೋಧನೆಗಾಗಿ ಮಗನನ್ನೇ ಕಳಕೊಳ್ಳುವ ರಾವ್, ಹೆಸರನ್ನು ಬದಲಾಯಿಸದೇ ಗಿಲ್ಬರ್ಟ್ ನನ್ನು ಮಗನನ್ನಾಗಿ ಮಾಡಿಕೊಳ್ಳುವ ತಾಯಿ, ತಾಯಿಯ ಬಗ್ಗೆ ಸ್ನೇಹಪೂರಿತ ಪ್ರೀತಿ ತೋರುವ ಗಿಲ್ಬರ್ಟ್,  ತಂದೆಯನ್ನು ಅಪ್ಪ ಎನ್ನಲಾರದೇ ಸರ್ ಎಂದೇ ಕರೆಯುವ ಶಾರದೆ, ಜ್ಞಾನ ಲೋಕದಿಂದ ಸಂಪೂರ್ಣ ಹೊರಗಿದ್ದು ಶುದ್ಧ ವ್ಯವಹಾರಿಕ ಮನುಷ್ಯರ ಪ್ರತೀಕವಾಗಿರುವ ಪೊನ್ನಣ್ಣ ಹೀಗೆ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳೂ ವಿಶಿಷ್ಟವಾಗಿವೆ.

ಕಾದಂಬರಿಯಲ್ಲಿ ಗಿಲ್ಬರ್ಟ್ ನ ಡೈರಿಯ ವಿಷಯವೆಲ್ಲವನ್ನೂ ಕೈಬರಹದಲ್ಲಿಯೇ ಇಡಲಾಗಿದೆ. ಇದೊಂಥರಾ ಕಾದಂಬರಿಯ ಓದಿಗೆ ಮತ್ತು ಅರ್ಥೈಸುವಿಕೆಗೆ ಹೊಸ ಆಯಾಮವನ್ನು ಒದಗಿಸುತ್ತದೆ. ಮುದ್ರಣದ ಗುಣಮಟ್ಟವೂ ಉತ್ತಮವಾಗಿದ್ದು ಆಕರ್ಷಕವಾಗಿದೆ. ಥ್ರಿಲ್ಲಿಂಗ್ ಸಿನೆಮಾ ಮಾಡುವಲ್ಲಿ ಅದೇ ಹಳೆ ದೆವ್ವ ಭೂತಗಳ ಪರಿಕಲ್ಪನೆಗಳಿಗೆ ಜೋತುಬಿಳುವ ನಮ್ಮ ಸಿನಿಮಂದಿ ಕಾದಂಬರಿಯನ್ನು ಒಂದಿಷ್ಟು ನಿರೀಕ್ಷೆಯೊಂದಿಗೆ ಓದಬಹುದೇನೋ? ಅಭಿನಂದನೆಗಳು ಅನುಷ್ ಹೊಸದೊಂದು ರೀತಿಯ ಓದಿಗೆ ಅನುವಾದುದಕ್ಕೆ. ಸಂಗೀತ, ರಂಗಚಟುವಟಿಕೆಯೊಂದಿಗೆ ಬರವಣಿಗೆಯೂ ನಿರಂತರವಾಗಿ ಸಾಗಲಿ.

Saturday, March 03, 2018

ಸುಡುವ ಕರಾವಳಿಗೆ...

UNCATEGORIZED


ಸುಡುವ ಕರಾವಳಿಗೆ ಕರಬೂಜವೊಂದೇ ಪರಿಹಾರ..!!

ಸುಧಾ ಆಡುಕಳ

 ಅವನು ದಿನವೂ ನನಗೆ ಟಾಟಾ ಹೇಳಿ ಕಾಲೇಜಿಗೆ ಹೊರಡುತ್ತಾನೆ. ಸಂಜೆ ಎಲ್ಲರೊಂದಿಗೆ ಮನೆ ಸೇರಿದರೆ ನನಗೇನೂ ಅನಿಸುತ್ತಿರಲಿಲ್ಲ. ಅವನ ಕನಸುಗಳು ಅವನನ್ನು ಸಂಜೆಯ ಟ್ಯೂಶನ್ ತರಗತಿಗಳಿಗಾಗಿ ದೂರದ ಊರಿನ ಮೂಲೆಯವರೆಗೂ ಕರೆದೊಯ್ಯುತ್ತವೆ. ಅವನಿಗೆ ಪ್ರತಿಷ್ಠಿತ ಟ್ಯೂಶನ್ ಸೆಂಟರ್‍ಗಳಲ್ಲಿ ಓದುವಷ್ಟು ಶ್ರೀಮಂತಿಕೆಯನ್ನು ಅವನು ನಂಬಿದ ದೈವ ಕರು ಸಿಲ್ಲ. ಹಾಗಾಗಿ ಅಲ್ಲೆಲ್ಲೋ ಅಪರಿಚಿತ ಗಲ್ಲಿಯೊಳಗೆ ನಿವೃತ್ತ ಪ್ರೊಫೆಸರ್ ಒಬ್ಬರು ತನ್ನ ಮನೆಯಲ್ಲಿಯೇ ನಡೆಸುವ ತರಗತಿಗಳಿಗೆ ಅವನು ಪ್ರತಿದಿನ ಸಂಜೆ ಬಿಡದೇ ಹೋಗುತ್ತಾನೆ. ರಾತ್ರಿ ಬಹಳ ಹೊತ್ತಿನವರೆಗೆ ಅವನ ಕೋಣೆಯಲ್ಲಿ ಉರಿಯುತ್ತಿರುವ ದೀಪದ ಬೆಳಕು ಅವನು ಅವನ ಕನಸಿಗೆ ಹತ್ತಿರವಾಗುತ್ತಿರುವುದನ್ನು ಸಾರುತ್ತವೆ. ಎಲ್ಲವೂ ಸರಿಯಾಗಿದ್ದರೆ ಚಿಂತೆ ಪಡುವಂಥದ್ದೇನಿರಲಿಲ್ಲ.

ಆದರೆ ಆ ಹುಡುಗ ಪ್ರತಿದಿನ ಕಾಲೇಜಿಗೆ ಹೋಗುವಾಗಲೂ ತನ್ನ ಹಣೆಯ ಮೇಲೆ ಮೂರು ವಿಭೂತಿಯ ಪಟ್ಟಿಗಳನ್ನು ಧರಿಸಿಯೇ ಹೋಗುವುದು. ಯಾರಿಗೆ ಗೊತ್ತು? ಸಂಜೆಯವರೆಗೂ ಅವು ಹಾಗೆಯೇ ಇರಬಹುದು ಕೂಡಾ. ಹಾಗೆಂದು ಅವನೇನು ತನ್ನ ಧರ್ಮದ ವಿಷಯದಲ್ಲಿ ಕರ್ಮಠನಲ್ಲ. ಅವನಿಗೆ ಎಲ್ಲ ಧರ್ಮಗಳ ಗ್ರಂಥಗಳೂ ತಿಳಿದಿವೆ. ಎಲ್ಲವನ್ನೂ ಅವನು ಆಸಕ್ತಿಯಿಂದ ಓದಿದ್ದಾನೆ. ಈದ್‍ನ ಸಿಹಿಯನ್ನೂ, ಕ್ರಿಸ್‍ಮಸ್‍ನ ಕೇಕನ್ನೂ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆ. ದೀಪಾವಳಿಯ ಹೋಳಿಗೆಯ ಕಟ್ಟು ಅವನ ಮನೆಯಿಂದ ಅವರ ಮನೆಗಳಿಗೂ ರವಾನೆಯಾಗಿವೆ.
ಆದರೂ ಅವನು ತನ್ನ ಹಣೆಯ ನಾಮವನ್ನು ಒರೆಸಲು ತಯಾರಿಲ್ಲ. ನಾನೂ ಅವನನ್ನು ಕೇಳಿದ್ದೇನೆ, ಯಾಕೆ ಬೇಕು ಅದು? ಎಂದು. ಆಗವನು ಚೆಂದದ ಕಥೆ ಹೇಳಿದ್ದಾನೆ. ಅವನಿಗೆ ಅವನ ಅಜ್ಜನೆಂದರೆ ಪ್ರಾಣ. ಅವರೇ ಅವನಿಗೆ ಅಘ್ರ್ಯ, ತರ್ಪಣಗಳನ್ನೆಲ್ಲ ಕಲಿಸಿದ್ದಾರೆ. ಪ್ರತಿದಿನ ಪ್ರೀತಿಯಿಂದ ಅವರೇ ಹಣೆಗೆ ಮೂರು ಗೆರೆಗಳನ್ನಿಟ್ಟು, ‘ಇವು ನಿನ್ನನ್ನು ಕಾರುಣ್ಯದಿಂದ ರಕ್ಷಿಸುವ ಬ್ರಹ್ಮಗೆರೆಗಳು’ ಎಂದು ಬೆನ್ನು ಸವರಿದ್ದಾರೆ. ಇಂದು ಅವರಿಲ್ಲ. ಆದರೆ ಅವರು ಕಲಿಸಿದ ನೂರಾರು ಶ್ಲೋಕಗಳು, ಉಪನಿಷತ್ ಮಂತ್ರಗಳು ಅವನ ಮಸ್ತಿಷ್ಕದಲ್ಲಿ ಜೋಪಾನವಾಗಿವೆ.

ಅಜ್ಜನ ನೆನಪಿಗಾಗಿ ದಿನವೂ ಅವನು ಶ್ರದ್ಧೆಯಿಂದ ಹಣೆಯ ಮೇಲೆ ಮೂರು ಗೆರೆ ಎಳೆದು ಕನ್ನಡಿಯೆದುರು ನಿಂತು ನಗುತ್ತಾನೆ. ನನಗೀಗ ಅದೇ ಚಿಂತೆ! ಅವನ ಕಥೆಯನ್ನು, ನೆನಪನ್ನು ಅಳಿಸುವುದು ನನಗಂತೂ ಶಕ್ಯವಿಲ್ಲ. ಈ ಕಡೆ ಅಲ್ಲಿ, ಆ ಗಲ್ಲಿಯಲ್ಲಿ ಇತ್ತೀಚಿಗೆ ಎಲ್ಲವೂ ಸರಿಯಿಲ್ಲ. ಆ ಸಂಜೆಯಲ್ಲಿ, ಎಲ್ಲರ ತಲೆಯೊಳಗೆ ಭೂತ, ಪಿಶಾಚಿಗಳು ಓಡಾಡುವ ಸಮಯದಲ್ಲಿ ಇವನ ಹಣೆಯ ಮೇಲಿನ ಗೆರೆಗಳು ಅವರನ್ನು ಸರ್ಪದಂತೆ ಕೆಣಕಿ, ಹತಿಯಾರಗಳು ಹೊರಬಂದು ಝಳಪಿಸಿ, ನನ್ನ ಕನಸು ಹೊತ್ತ ಹುಡುಗನನ್ನು …… ಮತ್ತು ಅವನ ಕನಸನ್ನೂ ಒಟ್ಟಿಗೇ….. ಓ ದೇವರೇ………. ಹಾಗಾಗದಿರಲಿ.

ಏನನ್ನು ಬಿಟ್ಟರೂ ಊರ ಸಂತೆಗೆ ವಾರಕ್ಕೊಂದು ಭೇಟಿಯನ್ನು ನಾನು ತಪ್ಪಿಸಲಾರೆ. ಸಂತೆಯ ಮೂಲೆಯಲ್ಲಿ ಇಮಾಮ್ ಸಾಬಿ ಇಷ್ಟು ತರಕಾರಿ ಹಣ್ಣುಗಳೊಂದಿಗೆ ಕುಳಿತಿರುತ್ತಾನೆ. ನನ್ನನ್ನು ಕಂಡೊಡನೆ, “ಬಾ ಬೇಟಿ, ಈ ಸಲ ಕರಬೂಜದ ಹಣ್ಣು ಪಸಂದಾಗಿದೆ. ನಾಲ್ಕು ನಿನಗೇ ಅಂತ ತೆಗೆದಿಟ್ಟಿದ್ದೇನೆ” ಎಂದು ಚೀಲದೊಳಗೆ ತುಂಬಿಸುತ್ತಾನೆ. ‘ಸುಡುವ ಕರಾವಳಿಯ ಧಗೆಗೆ ಕರಬೂಜವೊಂದೇ ಪರಿಹಾರ’ ಎಂದು ನಂಬುವ ನಾನು ಅವುಗಳ ಲೆಕ್ಕಾ ಚುಕ್ತಾ ಮಾಡುತ್ತೇನೆ. ಅವನು ನನಗೆ ಪರಿಚಿತವಾದದ್ದೇ ಹಾಗೆ. ಕರಬೂಜದ ಹಣ್ಣು ಸಿಹಿಯಾಗಿವೆಯೆಂದು ಏನು ಗ್ಯಾರಂಟಿ? ಎಂದು ಮೊದಲ ದಿನ ನಾನವನೊಂದಿಗೆ ವಾದಕ್ಕೆ ನಿಂತಿದ್ದೆ. ಅದಕ್ಕವನು ಸಮಾಧಾನದಿಂದಲೇ ‘ಸಿಹಿಯಿಲ್ಲ ಅಂದ್ರೆ ಮುಂದಿನ ವಾರ ದುಡ್ಡು ವಾಪಸ್, ಮಾತಂದ್ರೆ ಮಾತು. ವ್ಯಾಪಾರದಲ್ಲಿ ಮೋಸ ಮಾಡಿದ್ರೆ ಅಲ್ಲಾ ಖುದಾ ಮಾಡೋದಿಲ್ಲ’ ಅಂತ ಅವನ ದೇವರನ್ನು ಎಳೆದು ತಂದಿದ್ದ. ಅಲ್ಲಿಂದ ಮುಂದೆ ಅವನು ನನ್ನ ಖಾಯಂ ಹಣ್ಣಿನ ವ್ಯಾಪಾರಿ. ಅವನು ಆರಿಸಿಕೊಟ್ಟನೆಂದರೆ ಅದು ಸಿಹಿಯೆ. ಸಂತೆಯ ಸಣ್ಣ ಪುಟ್ಟ ಜಗಳಗಳಿಗೆಲ್ಲ ಅವನೇ ನ್ಯಾಯಾದೀಶ. ‘ಜರಾ ಸುಮ್ನಿರು ಚೋಟು. ವ್ಯವಹಾರ ಅಂದ್ಮೇಲೆ ಒಂದ್ಮಾತು ಬರ್ತದೆ, ಹೋಗ್ತದೆ.

ಅದಕ್ಯಾಕೆ ಅಷ್ಟು ಹಾರಾಡ್ತಿ?’ ಎನ್ನುತ್ತಾ ಎಲ್ಲರನ್ನು ಸಮಾಧಾನ ಮಾಡ್ತಾನೆ. ಅಲ್ಲೇ ಸಮಯವಿದ್ದರೆ ತನ್ನ ದೊಡ್ಡ ಮಗಳ ಮಗಳಿಗೆ ಮಗುವಾದ ವಿಷಯ, ಸಣ್ಣ ಸೊಸೆಗೆ ಸೀಮಂತವಾದ ವಿಷಯ, ಮೊಹರಂಗೆ ದೊರೆತ ಜಕಾತ್‍ಗಳ ವಿಷಯ ಎಲ್ಲವನ್ನೂ ಮಾತನಾಡುತ್ತಾನೆ. ನಾನೂ ನನ್ನ ವಾರದ ಹಳವಂಡಗಳನ್ನೆಲ್ಲ ಕೆಲವೊಮ್ಮೆ ಕಕ್ಕುತ್ತೇನೆ. ವಾರಪತ್ರಿಕೆಯಲ್ಲಿ ಬರುವ ಧಾರಾವಾಹಿಗಳಿಗೆ ಕಾಯುವಂತೆ ನಾವಿಬ್ಬರೂ ಆ ದಿನಕ್ಕಾಗಿ ಕಾಯುತ್ತೇವೆ.

ಇಂದು ಸಂತೆಯನ್ನು ಪ್ರವೇಶಿಸುತ್ತಿರುವಂತೆಯೆ ಎಂಥದ್ದೋ ಆವಾಂತರಗಳ ವಾಸನೆ ಮೂಗಿಗೆ ಬಡಿಯುತ್ತಿದೆ. ನಾನಿದುವರೆಗೆ ಕಂಡಿರದ ಚಿತ್ರ, ವಿಚಿತ್ರ ನಾಮಧಾರಿಗಳ ಪಾತ್ರಗಳು ಸಂತೆಯಲ್ಲಿ ನಿರುದ್ದಿಶ್ಯವಾಗಿ ಓಡಾಡುತ್ತಿರುವಂತೆ ಭಾಸವಾಗುತ್ತಿದೆ. ಅವನು ನಂಬಿದ ಅಲ್ಲಾನೆ ಅವನಿಗೆ ಮುಳುವಾಗುವನೇನೋ ಎಂದನಿಸುತ್ತಿದೆ. ಉದ್ದ ಗಡ್ಡದ, ಬಿಳಿಯ ಟೊಪ್ಪಿಗೆಯ ಈ ಮುದುಕನನ್ನು ಹೊಸಕಿಹಾಕಲು ಹತ್ತಾರು ಕೈಗಳು ಠಳಾಯಿಸುತ್ತಿವೆಯೆ? ಓ ದೇವರೇ…….. ಆ ಪಾಪಿ ಕೈಗಳು ಬಿಳಿಯ ಗಡ್ಡದ ನನ್ನ ಪ್ರೀತಿಯ ಮುದುಕನ ಮುಖದ ಅಚ್ಚಬಿಳಿಯ ನಗೆಯನ್ನು ಅಳಿಸದಿರಲಿ.

ಯಾಕೆಂದರೆ….. ನನಗೆ ಈ ಇಬ್ಬರೂ ಬೇಕು. ನನ್ನ ಬದುಕು ಹಸನಾಗಿರಲು ಅವರಿಬ್ಬರೂ ನಗುತ್ತಿರಬೇಕು.


http://avadhimag.com/?p=190725