Monday, April 12, 2021

ಯುಗಾದಿ ಕವನಗಳು

‘ಯುಗಾದಿ’ಯ ಕವಿತೆಗಳು

 ◆ ಎಲ್ಲರಿಗೂ ಯುಗಾದಿಯ ಶುಭಾಶಯಗಳು. 

ಸ್ನೇಹಿತರ್ಯಾರೋ ಸಂಗ್ರಹಿಸಿ ಆನ್ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ ಕವಿತೆಗಳಿವು. ಕನ್ನಡ ಕವಿಗಳ ಯುಗಾದಿ ಕವಿತೆಗಳನ್ನು ಓದಿ ಸಂತಸಪಡುವ ಅವಕಾಶ ಮಾಡಿದ ಆ ಅಜ್ಞಾತರಿಗೆ ಧನ್ಯವಾದಗಳು.

ೱೱೱೱೱೱೱೱೱೱೱೱೱೱೱ

◆ ವರಕವಿ ದ.ರಾ. ಬೇಂದ್ರೆಯವರ 
           ‘ಯುಗಾದಿ’

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಿಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ.
ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ.
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ.
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರಯ
ನಮಗದಷ್ಟೆ ಏತಕೆ?
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೋ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

(ಕೃಪೆ: ಔದುಂಬರ ಗಾಥೆ, ಸಂಪುಟ-೪. 
ಸಂಪಾದಕರು: ವಾಮನ ಬೇಂದ್ರೆ)

◆ ರಸಋಷಿ ಕುವೆಂಪು ಅವರ
            ‘ಯುಗಾದಿ’

ಸುರಲೋಕದ ಸುರನದಿಯಲಿ ಮಿಂದು,
ಸುರಲೋಕದ ಸಂಪದವನು ತಂದು,
ನವ ಸಂವತ್ಸರ ಭೂಮಿಗೆ ಬಂದು
ಕರೆಯುತಿದೆ ನಮ್ಮನು ಇಂದು!

ಗೀತೆಯ ಘೋಷದಿ ನವ ಅತಿಥಿಯ ಕರೆ;
ಹೃದಯ ದ್ವಾರವನಗಲಕೆ ತೆರೆ, ತೆರೆ!
ನವ ಜೀವನ ರಸ ಬಾಳಿಗೆ ಬರಲಿ,
ನೂತನ ಸಾಹಸವೈತರಲಿ!

ಗತವರ್ಷದ ಮೃತಪಾಪವ ಸುಡು, ತೊರೆ;
ಅಪಜಯ ಅವಮಾನಗಳನು ಬಿಡು; ಮರೆ;
ಕಳಚಲಿ ಬೀಳಲಿ ಬಾಳಿನ ಹಳೆಪೊರೆ,
ನವ ವತ್ಸರವನು ಕೂಗಿ ಕರೆ!

ಸಂಶಯ ದ್ವೇಷಾಸೂಯೆಯ ದಬ್ಬು;
ಸುಖಶ್ರದ್ಧಾ ಧೈರ್ಯಗಳನು ತಬ್ಬು,
ಉರಿಯಲಿ ಸತ್ಯದ ಊದಿನಕಡ್ಡಿ,
ಚಿರ ಸೌಂದರ್ಯದ ಹಾಲ್ಮಡ್ಡಿ!

ತೊಲಗಲಿ ದುಃಖ, ತೊಲಗಲಿ ಮತ್ಸರ,
ಪ್ರೇಮಕೆ ಮೀಸಲು ನವ ಸಂವತ್ಸರ!
ನಮ್ಮೆದೆಯಲ್ಲಿದೆ ಸುಖನಿಧಿ ಎಂದು
ಹೊಸ ಹೂಣಿಕೆಯನು ತೊಡಗಿಂದು!

ಮಾವಿನ ಬೇವಿನ ತೋರಣ ಕಟ್ಟು,
ಬೇವುಬೆಲ್ಲಗಳನೊಟ್ಟಿಗೆ ಕುಟ್ಟು!
ಜೀವನವೆಲ್ಲಾ ಬೇವೂಬೆಲ್ಲ;
ಎರಡೂ ಸವಿವನೆ ಕಲಿ ಮಲ್ಲ!

ಹೊಸ ಮರದಲಿ ಹೂ ತುಂಬಿದೆ ನೋಡು!
ಆಲಿಸು! ಜೇನಿನ ಹಬ್ಬದ ಹಾಡು!
ಜೀವನವೆಂಬುದು ಹೂವಿನ ಬೀಡು;
ಕವಿಯೆದೆ ಹೆಜ್ಜೇನಿನ ಗೂಡು!

ಕವಿಯೊಲ್ಮೆಯ ಕೋ! ಧನ್ಯ ಯುಗಾದಿ!
ಮರಳಲಿ ಇಂತಹ ನೂರು ಯುಗಾದಿ!
ಇದೆ ಕೋ ಹೊಸವರುಷದ ಸವಿಮುತ್ತು!
ಅದಕೊಂದಾಲಿಂಗನದೊತ್ತು!

(ಕೃಪೆ: ಕುವೆಂಪು ಸಮಗ್ರಕಾವ್ಯ , ಸಂಪುಟ-೧. ಸಂಪಾದಕರು: ಡಾ.ಕೆ.ಶಿವಾರೆಡ್ಡಿ)

◆ ಮಲ್ಲಿಗೆಯ ಕವಿ 
ಕೆ.ಎಸ್.ನರಸಿಂಹಸ್ವಾಮಿಯವರ        
      ‘ಯುಗಾದಿ’

ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು.

ಹೊಸತು ವರುಷ, ಹೊಸತು ಹರುಷ-
ಹೊಸತು ಬಯಕೆ ನಮ್ಮವು
ತಳಿರ ತುಂಬಿದಾಸೆಯೆಲ್ಲ,
ಹರಕೆಯೆಲ್ಲ ನಮ್ಮವು.

ಬಂಜೆ ನೆಲಕೆ ನೀರನೂಡಿ
ಹೊಳೆಯ ದಿಕ್ಕು ಬದಲಿಸಿ
ಕಾಡ ಕಡಿದು ದಾರಿ ಮಾಡಿ
ಬೆಟ್ಟ ಸಾಲ ಕದಲಿಸಿ.

ಹಿಮಾಚಲ ನೆತ್ತಿಯಲಿ
ಧ್ವಜವನಿಟ್ಟು ಬಂದೆವು;
ಧ್ರುವಗಳಲ್ಲಿ ಹೆಜ್ಜೆಯೂರಿ
ಹೊಸನೆಲೆಗಳ ಕಂಡೆವು.

ಬಾನಸೆರೆಯ ಕಲ್ಪಲತೆಗೆ
ನಮ್ಮ ಕಿಡಿಯ ಮುತ್ತಿಗೆ.
ಮುಗಿಯಬಹುದು ನಾಳೆಯೊಳಗೆ
ದೇವತೆಗಳ ಗುತ್ತಿಗೆ!

ಹುಟ್ಟು ಬೆಂಕಿ ನಮ್ಮ ತಾಯಿ;
ಉಟ್ಟ ಸೀರೆ ಸಾಗರ.
ಅವಳ ಮುಗಿಲ ತುರುಬಿನಲ್ಲಿ
ಹೆಡೆಯ ತೆರೆದ ನಾಗರ.

ಅವಳ ಪ್ರೀತಿ ನಮಗೆ ದೀಪ;
ಅವಳ ಕಣ್ಣು ಕಾವಲು.
ಬಿಸಿಲ ತಾಪ, ಮಳೆಯ ಕೋಪ-
ಸಂತೋಷವೇ ಆಗಲೂ.

ಹೆಜ್ಜೆಗೊಂದು ಹೊಸ ಯುಗಾದಿ-
ಚೆಲುವು ನಮ್ಮ ಜೀವನ!
ನಮ್ಮ ಹಾದಿಯೋ ಅನಾದಿ,
ಪಯಣವೆಲ್ಲ ಪಾವನ.

◆ ‘ಯುಗಾದಿ ‘೮೭’ ಕವನದ 
ಎರಡು ಪದ್ಯಗಳು

ಹೊಸ ವರುಷ ಬಂತು ಮಾಂದಳಿರಿನಲ್ಲಿ,
ಮುಗಿವಿರದ ಚೆಲುವಿನಲ್ಲಿ,
ಹೂಬಿಸಿಲಿನಲ್ಲಿ, ಉಪವನಗಳಲ್ಲಿ,
ಎದೆ ತುಂಬಿದೊಲವಿನಲ್ಲಿ.

ಹೊಸ ವರುಷ ಬಂತು! ನಾನಿಲ್ಲಿ ನಿಂತು
ಹಾಡೊಂದ ನೂಲುತಿಹೆನು.
ಅಲ್ಲೊಂದು ಹಕ್ಕಿ ಇಲ್ಲೊಂದು ಹೂವು!-
ನಾನವನು ನೋಡುತಿಹೆನು.

(ಕೃಪೆ: ಮಲ್ಲಿಗೆಯ ಮಾಲೆ)

◆ ಪು.ತಿ.ನರಸಿಂಹಚಾರ್ ಅವರ 
‘ಹೊಸ ವರುಷ ಬಹುದೆಂದಿಗೆ’ 
ಕವಿತೆಯ ಎರಡು ಪದ್ಯಗಳು

ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ-

ಜಾಣ ಜಿತೇಂದ್ರಿಯ ಧಿರನಾವನೋ
ಚಾಣಿಕ್ಯನ ತೆರ ನಲ್ ಕೇಣದ ನೆಲೆಮತಿ
ಅಂಥವ ತರಬಲ್ಲನು ಹೊಸ ವರುಷ
ಅಂಥಿಂಥವರಿಂ ಬರಿ ಕಲುಷ

(ಕೃಪೆ: ಪುತಿನ ಸಮಗ್ರ ಕವನಗಳು)

◆ ಗೋಪಾಲಕೃಷ್ಣ ಅಡಿಗರ 
‘ಯುಗಾದಿ’ ಕವಿತೆಯ 
ಎರಡು ಪದ್ಯಗಳು

ಯುಗಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ
ಹೊಸಹೊಸವು ಪ್ರತಿ ವರುಷವು;
ಒಳಗೆ ಅದೋ ಕಾಣುತಿದೆ ಚೆಲುವಿರದ ನಲವಿರದ
ಕೊಳೆಯ ಬೆಳೆ;- ರಂಗಮಂದಿರವು!

ಈ ಯುಗಾದಿಯ ಮಾತು ಕೇಳುತಿದೆ ಮರಮರಳಿ
ಮೊದಲಾಗುತ್ತಿದೆ ಯುಗವು, ನರನ ಜಗವು;
ವರುಷವರುಷವು ನಮ್ಮ ಪಯಣ ಮೊದಲಾಗುತ್ತಿದೆ;
ಇದಕು ಮಿಗಿಲಿಲ್ಲ, ಹಾ, ನರಗೆ ಸೊಗವು!

(ಕೃಪೆ: ಸಮಗ್ರ ಕಾವ್ಯ)

◆ ಕೆ.ಎಸ್.ನಿಸಾರ್ ಆಹಮದ್
    ಅವರ ‘ವರ್ಷಾದಿ’

ವರ್ಷಾದಿಯ ತಿಳಿನಗೆಯ ಮೊಗವೆ
ಶುಭ ಯುಗಾದಿ ಕರೆವ ಸೊಗವೆ
ಋತುಗಳ ಗಣನಾಯಕ
ಶರಣೆನ್ನುವೆ ಶುಭದಾಯಕ.

ಹೊಸ ಬಟ್ಟೆಯ ತೊಟ್ಟು ಚೈತ್ರ
ಜಲದರ್ಪಣ ಮಗ್ನ ನೇತ್ರ
ಮುಗಿಲಿನ ಪಂಚಾಂಗ ತೆರೆಸಿ
ಕುಳಿತಿಹ ಫಲ ತಿಳಿಯ ಬಯಸಿ.

ಬೆವರ ಹೀರಿ ಬೆಳೆದ ಪೈರು
ಕಣಕಣದಲಿ ಹೊನ್ನ ತೇರು.
ಕಣಜ ತುಂಬಿ ತುಳುಕಿ ಹಿಗ್ಗಿ
ನಾಡಿಗೊದಗಿ ಬಂತು ಸುಗ್ಗಿ.

ಪ್ರತಿ ಯುಗಾದಿ ವಿಜಯದೊಸಗೆ
ಸತ್ವ ರಜೋಗುಣದ ಬೆಸುಗೆ
ಅಸುರ ವಧೆಯ ವೀರಗಾಥೆ
ಕನ್ನಡಿಗರ ಗೆಲವ ಗೀತೆ.

ಎರಡು ದಿನದ ಹಬ್ಬದಂದು
ಬೆಳಕಿನಲ್ಲಿ ಬಾಳು ಮಿಂದು
ಮೊದಲ ಚಂದ್ರ ವೀಕ್ಷಣೆ
ಜನಕೆ ತರಲಿ ರಕ್ಷಣೆ.

◆ ‘ಯುಗಾದಿ : ೧೯೯೦’ 
ಕವಿತೆಯ ಎರಡು ಪದ್ಯಗಳು

ಹಳೆ ಯುಗಾದಿಯ ಹಾದಿ ಈ ಯುಗಾದಿಯು ಹಿಡಿದು
ಏರಿದೆ ಭವಾದ್ರಿಯನು ಏದಿ, ಏದಿ.
ಯಾವ ಉಡುಗೊರೆ ಜಗಕೆ ನೀಡಲಿಹುದೋ ಕಾಣೆ
ಪ್ರಮೋದೂತ ನಾಮದ ಸ್ವೈರತಾಮೋದಿ.

ಚೈತ್ರ ಮಾಂತ್ರಿಕ ಸ್ಪರ್ಶಕೆಲ್ಲ ಉದ್ಯಾನವನ
ಪಲ್ಲವಿಸಿ, ಕರೆಯೋಲೆ ಕಳಿಸುವಂತೆ-
ಸೌಭಾಂಗ್ಯ ಪಕ್ಷಿಕುಲ ಪ್ರತಿ ಬಾಳ್ವೆಯಲಿ ಸಂದು
ಹೊಸ ವರ್ಷ ನೆರೆಸಿರಲಿ ಸೊಗದ ಸಂತೆ.

(ಕೃಪೆ: ಸಮಗ್ರ ಕವಿತೆಗಳು)

◆ ಜಿ.ಎಸ್.ಶಿವರುದ್ರಪ್ಪ ಅವರ 
      ‘ಯುಗಾದಿಯ ಹಾಡು’

ಬಂದ ಚೈತ್ರದ ಹಾದಿ ತೆರೆದಿದೆ
ಬಣ್ಣ-ಬೆಡಗಿನ ಮೋಡಿಗೆ
ಹೊಸತು ವರ್ಷದ ಹೊಸತು ಹರ್ಷದ
ಬೇವು-ಬೆಲ್ಲದ ಬೀಡಿಗೆ.

ಕೊಂಬೆ ಕೊಂಬೆಯ ತುಂಬ ಪುಟಿದಿದೆ
ಅಂತರಂಗದ ನಂಬಿಕೆ
ಚಿಗುರು ಹೂವಿನ ಬಣ್ಣದಾರತಿ
ಯಾವುದೋ ಆನಂದಕೆ!

ಇದ್ದುದೆಲ್ಲವು ಬಿದ್ದುಹೋದರು
ಎದ್ದು ಬಂದಿದೆ ಸಂಭ್ರಮ.
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.

ಒಳಿತು ಕೆಡುಕೋ ಏನು ಬಂದರು
ಇರಲಿ ಎಲ್ಲಕು ಸ್ವಾಗತ
ಸ್ಪರ್ಧೆಯಿಲ್ಲದ ಶ್ರದ್ಧೆಯೊಂದೇ
ಸ್ಫೂರ್ತಿಯಾಗಲಿ ಸಂತತ.

ಹಳತು-ಹೊಸತೂ ಕೂಡಿ ಮೂಡಿಸುವಂಥ
ಪಾಕವ ನೋಡಿರಿ
ಎಲ್ಲ ರುಚಿಗೂ ರಸನೆಯಾಗುತ
ಪುಟ್ಷಿಗೊಳ್ಳುತ ಬಾಳಿರಿ.

ಯುಗ ಯುಗಾದಿಗೆ ಹೊಸತು ಹರ್ಷವು
ಬರಲಿ, ಬಾರದೆ ಹೋಗಲಿ;
ಬಂದ ಚೈತ್ರ ಚಿಗುರಿನಂದದ
ಮಂದಹಾಸವೆ ಉಳಿಯಲಿ.

◆ ‘ಯುಗಾದಿಯ ಪ್ರಶ್ನೆಗಳು’ 
ಕವಿತೆಯ ಒಂದು ಪದ್ಯ

ನಾನು, ನನ್ನಪ್ಪ, ಅವರಪ್ಪನಪ್ಪ,
ಮಗ, ಮೊಮ್ಮೊಗ, ಮರಿಮಗ, ಗಿರಿಮಗ
ಈ ಗಿರಿಗಿರಿ ತಿರುಗವೀ ಪುನರಪಿ
ಜನನಂ ಪುನರಪಿ ಮರಣಂ ಚಕ್ರ
ಗತಿಯೊಳಗೆ ದಿನಾ ಬೆಳಕಿಗೆ ಎದ್ದು
ಕತ್ತಲೆಗೆ ಬಿದ್ದು ಸುತ್ತುತ್ತಲೇ ಇರುವ
ಈ ಭವ ಭವದ ಮಧ್ಯೆ ಪ್ರಭವ
ನಾಮ ಸಂವತ್ಸರದಲ್ಲಿ ನಿಂತಿರುವ ಈ ನನಗೆ
ಯಾವುದು ಮೊದಲು, ಯಾವುದು ಕೊನೆ?

(ಕೃಪೆ: ಸಮಗ್ರ ಕಾವ್ಯ)

◆ ಎಚ್.ಎಸ್.ವೆಂಕಟೇಶಮೂರ್ತಿ 
       ಅವರ ‘ಯುಗಾದಿ’

ನಾವು ನಮ್ಮೂರಿಂದ
ನಿಮ್ಮ ಊರಿಗೆ ಹೊರಟ ದಾರಿಯಲ್ಲಿ
ಇದು ಒಂದು ಮೈಲಿಗಲ್ಲು!
ಸಿರಿವಂತ ಕಾರಿನಲಿ,
ಬಡವ ಬರಿಗಾಲಿನಲಿ
ನಡೆದು ಬಂದುದು ಇದೇ ದಾರಿಯಲ್ಲಿ!

ಇಂಥ ಒನ್ ವೇ ಟ್ರಾಫಿಕ್ಕಿನಲ್ಲಿ
ಕಲ್ಲು ಹೂಗಳ ಚೆಲ್ಲಿ,
ಮುಳ್ಳು ಮರಗಳ ನೆಟ್ಟು,
ಅದರ ನಡುವೆಯೆ ಮಧುರ ಸವಿಜೇನ ಹಲ್ಲೆಗಳ
ಜೋಲಿಯಾಡಲು ಬಿಟ್ಟು,
ದಾರಿಯಲಿ ಅಲ್ಲಲ್ಲಿ,
ಗುಂಡಿಗಳ ತೋಡಿ,
ಮೇಲೆ ಹುಲ್ಲನು ಹಾಸಿ
ಜೀವಿಗಳ ಖೇಡ್ಡಾ ನೋಡುವ ಸಾರಿಗೇ ಸಂಸ್ಥೆಯ ಒಡೆಯ
ಯಾರೆಂಬುದೇ ಯಾರೂ ಅರಿಯದಂತಹ ಗುಟ್ಟು!
ಅದು ರಟ್ಟಾಗದಂತೆ
ಮುಂದೆ ಇಬ್ಬನಿ ತುಂಬಿ ದಟ್ಟವಾಗಿದೆಯಂತೆ!

ಇಷ್ಟು ದೂರವ ಹೇಗೋ ನಡೆದು ಬಂದೆವು ನಾವು.
ನಮ್ಮ ಕಣ್ಣೆದುರಿಗೇ ಬಿದ್ದವರು ಬಿದ್ದರು.
ಬಿಸಿಲಿನಲಿ, ಮಳೆಯಲ್ಲಿ
ರಾತ್ರಿಯಲಿ ಹಗಲಲ್ಲಿ
ನಡೆದಿದ್ದೆ ನಡೆದಿದ್ದು
ಹತ್ತಿದ್ದು, ಇಳಿದಿದ್ದು,
ಮುಗ್ಗುರಿಸಿ ಬಿದ್ದು ಎದ್ದದ್ದು,
ಹೊಸ ಹೊಣೆಯ ಹೆತ್ತದ್ದು, ಹೊತ್ತದ್ದು,
ಮಳೆಯಲ್ಲಿ ನೆಂದು ಬಿಸಿಲಲ್ಲಿ ಒಣಗಿ

ಆದರೂ ಹೆಣಗಿ
ಮುಳ್ಳು ಮರದಡಿಯೇ ತುಸು ಮಲಗಿ
ಮಗುವಾಗಿ
ಆತ್ತು ನಕ್ಕಿದ್ದು!

-ಎಲ್ಲಾ ಇಂದು ಹೆಗಲ ಮೇಲಿನ ಗಟ್ಟಿ ಪೆಟ್ಟಿಗೆಯ ತಳದಲ್ಲಿ ನುಸಿ ಹಿಡಿದು ನವೆಯುತ್ತ
ಅಲ್ಲೊಂದು ಇಲ್ಲೊಂದು ಉಳಿದಿದ್ದು!
ಹಳೆಯ ಫೈಲಿನ ಮಸುಕು ಹಾಳೆಯಂತೆ.

ಮಂಜು ಆವರಿಸಿರುವ ಮುಂದಿರುವ ದಾರಿಯಲಿ
ನಡೆದವರೆ ಇಲ್ಲ!
ಇನ್ನು ನಡೆ-ನಡೆದಂತೆ ಹೆಜ್ಜೆ-ಹೆಜ್ಜೆಯ ಗುರುತು
ಹೂವಾಗಿ ಅರಳಬೇಕು!
ಅಥವಾ-
ಹಾವಾಗಿ ಹೊರಳಬೇಕು!

ಬಗೆಬಗೆಯ ಆ ಗುರುತ
ನನ್ನ ಕೈ ಕ್ಯಾಮರದಿ ಹಿಡಿಯಬೇಕು!
ಅದಕಾಗಿಯೇ ನೀವು, ನಾವು ಅವರೂ ಕೂಡ
ಮುಂದೆ ಸಿಗಬಹುದಾದ ಮೈಲುಗಲ್ಲಿನವರೆಗೆ
ನಡೆಯಬೇಕು!

(ಕೃಪೆ: ಮೂವತ್ತು ಮಳೆಗಾಲ, ಸಂಪುಟ-೧)

No comments:

Post a Comment